ಬಂಟ್ವಾಳ: ಕ್ರೀಡೆಯಿಂದ ಆರೋಗ್ಯದ ಜೊತೆಗೆ ಜೀವನದಲ್ಲಿ ಶಿಸ್ತು ಮತ್ತು ಪರಸ್ಪರ ಸೌಹಾರ್ದತೆ ವೃದ್ಧಿಸುತ್ತದೆ. ಇದಕ್ಕಾಗಿ ಬೆಳ್ಳಿಹಬ್ಬ ಪ್ರಯುಕ್ತ ಏರ್ಪಡಿಸಿದ ಇಲ್ಲಿನ ಕ್ರೀಡೋತ್ಸವದಲ್ಲಿ ಸಂಘಟಿತ ಶ್ರಮ ಮತ್ತು ಸಾಧಕರನ್ನು ಗುರುತಿಸಲು ಸಾಧ್ಯವಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ದೇವಪ್ಪ ಕರ್ಕೇರ ಹೇಳಿದ್ದಾರೆ.
ತಾಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳ್ಳಿಹಬ್ಬ ಪ್ರಯುಕ್ತ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಭಾನುವಾರ ನಡೆದ ಕ್ರೀಡೋತ್ಸವ ಸಮಾರೊಪ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಯೋಗ ಸಾಧಕಿ ವಿದ್ಯಾರ್ಥಿನಿ ಸುಚೇತಾ ಅಣ್ಣಳಿಕೆ ಇವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮುಖ್ಯಶಿಕ್ಷಕ ಸುಧೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಸಪಲ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ
ಸಂತೋಷ್ ಕುಮಾರ್ ಬೆಟ್ಟು, ಉದ್ಯಮಿಗಳಾದ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಶರತ್ ಕುಮಾರ್ ಕೊಯಿಲ, ಗುತ್ತಿಗೆದಾರ ರಾಜೇಶ ಜೈನ್ ಪಡ್ರಾಯಿ, ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ಪ್ರಮುಖರಾದ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸಂತೋಷ್ ಅಂಚನ್ ಕೊಯಿಲ, ಸತೀಶ ಸಾಲ್ಯಾನ್ ಕರ್ಪೆ ಮತ್ತಿತರರು ಇದ್ದರು.
ಸಂಘದ ಪದಾಧಿಕಾರಿಗಳಾದ ಅಶ್ವಿತಾ ಸ್ವಾಗತಿಸಿ, ವಂದನಾ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
