ಬಂಟ್ವಾಳ: ಕೃಷಿ ಚಟುವಟಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಜೊತೆಗೆ ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯ ಮತ್ತು ಸೂಕ್ತ ಸಲಹೆ ಪಡೆದುಕೊಂಡು ಮುನ್ನಡೆದಾಗ ಕೃಷಿಯನ್ನು ಲಾಭದಾಯಕ ಮತ್ತು ಆರೋಗ್ಯದಾಯಕ ಬದುಕಿಗೆ ಸಹಕಾರಿಯಾಗುತ್ತದೆ ಎಂದು ಬಂಟ್ವಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಫ್.ಮಿರಾಂದ ಹೇಳಿದ್ದಾರೆ.
ತಾಲ್ಲೂಕಿನ ಮೂಡುನಡುಗೋಡು ಗ್ರಾಮದ ದೆಚ್ಚಾರು ಎಂಬಲ್ಲಿ ಕೃಷಿ ಇಲಾಖೆ ಆತ್ಮ ಯೋಜನೆ ವತಿಯಿಂದ ಈಚೆಗೆ ನಡೆದ ಸಮಗ್ರ ಕೃಷಿ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರು ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ರವೀಂದ್ರ ಪಾಟೀಲ್, ಬಂಟ್ವಾಳ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಂದನ ಶೆಣೈ ಮತ್ತಿತರರು ಲಾಭದಾಯಕ ಕೃಷಿ ಮತ್ತು ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಸ್ಥಳೀಯ ಪಂಜಿಕಲ್ಲು ಗ್ರಾಮದ ಪ್ರಗತಿಪರ ಕೃಷಿಕ ಗಣೇಶ ಪ್ರಭು ಭಾವಂತಬೆಟ್ಟು ಇವರ ತೋಟಗಾರಿಕೆಗೆ ‘ಶ್ರೇಷ್ಟ ಕೃಷಿಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕೃಷಿ ಸಹಾಯಕ ನಾರಾಯಣ ನಾಯ್ಕ್, ಪಶು ಸಂಗೋಪನೆ ಅಧಿಕಾರಿ ಡಾ.ಪ್ರಕಾಶ್, ತೋಟಗಾರಿಕೆ ಇಲಾಖೆ ಸಹಾಯಕಿ ನಂದಿನಿ, ಆತ್ಮ ಯೋಜನೆ ತಾಲ್ಲೂಕು ರೈತ ಸಲಹಾ ಸಮಿತಿ ಅಧ್ಯಕ್ಷ ಪುರುಷೋತ್ತಮ, ಪ್ರಗತಿಪರ ಕೃಷಿಕ ಸಿಪ್ರಿಯಾನ್ ರೋಡ್ರಿಗಸ್, ಹಿಇಯ ಕೃಷಿಕ ದೆಚ್ಚಾರು ಪದ್ಮನಾಭ ಶೆಣೈ ಮತ್ತಿತರು ಇದ್ದರು.
ಆತ್ಮ ಯೋಜನೆ ತಾಂತ್ರಿಕ ಸಹಾಯಕಿ ಪ್ರಿಯಾಂಕ ಸ್ವಾಗತಿಸಿ, ಸಹಾಯಕಿ ಗೀತಿಕಾ ಪಾಣೆಮಂಗಳೂರು ವಂದಿಸಿದರು.
