ಬಂಟ್ವಾಳ: ತಾಲ್ಲೂಕಿನ ಕೊಯಿಲ ಗ್ರಾಮದ ಮಾವಂತೂರು ನಿವಾಸಿ ಪ್ರಸಿದ್ಧ ಯಕ್ಷಗಾನ ಕಲಾವಿದ, ಅರ್ಥದಾರಿ ಜಯರಾಮ ರೈ ಮಾವಂತೂರು(70) ಇವರು ಹೃದಯಾಘಾತದಿಂದ ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಪುತ್ರಿ ಮತ್ತು ಪುತ್ರ ಇದ್ದಾರೆ. ಮೂಲತ: ಮಂಚಿ-ಕುಕ್ಕಾಜೆ ನಿವಾಸಿಯಾಗಿದ್ದ ಜಯರಾಮ ರೈ ಅವರು ಬಾಲ್ಯದಿಂದಲೇ ಯಕ್ಷಗಾನ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕುಂಡಾವು ಮೇಳದಲ್ಲಿ ವೇಷಧಾರಿಯಾಗಿ ವೃತ್ತಿ ಆರಂಭಿಸಿದ್ದರು. ಅಳದಂಗಡಿ ಮೇಳದಲ್ಲಿಯೂ ದುಡಿದು ಬಳಿಕ ಕೃಷಿ ಕಡೆಗೆ ಆಸಕ್ತಿ ತೋರಿದ ಪರಿಣಾಮ ಯಕ್ಷಗಾನ ಮೇಳದಿಂದ ನಿವೃತ್ತರಾಗಿ ಬಳಿಕ ಹವ್ಯಾಸಿಯಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು. ವೀರಮಣಿ, ತಾಮ್ರಧ್ವಜ, ಅರ್ಜುನ, ಇಂದ್ರಜಿತು, ಶತ್ರುಘ್ನ ಮತ್ತಿತರ ಪಾತ್ರಗಳಿಗೆ ವಿಶೇಷವಾಗಿ ಜೀವ ತುಂಬುವ ಸಾಮಥ್ರ್ಯ ಹೊಂದಿದ್ದ ಇವರು ಇತ್ತೀಚಿನ ದಿನಗಳಲ್ಲಿ ತಾಳಮದ್ದಳೆ ಕೂಟದಲ್ಲಿ ಅರ್ಥಧಾರಿಯಾಗಿ ಗಮನ ಸೆಳೆದಿದ್ದರು.
ಇಲ್ಲಿಗೆ ಸಮೀಪದ ಪ್ರಸಿದ್ಧ ಕಲಾವಿದ ದಿವಂಗತ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ಸಮಕಾಲೀನರಾಗಿ ಅಪಾರ ಮಂದಿ ಅಭಿಮಾನಿಗಳನ್ನು ಹೊಂದಿದ್ದರು. ತಾಳಮದ್ದಳೆ ಕೂಟದಲ್ಲಿ ಇವರು ವಾಲಿ, ಸುಗ್ರೀವ, ಕೌರವ, ಮಾಗಧ ಪಾತ್ರಗಳು ಖ್ಯಾತಿ ಗಳಿಸಿದ್ದು, ಧಾರ್ಮಿಕ ಉಪನ್ಯಾಸ ನೀಡುವ ಮೂಲಕ ಗಮನ ಸೆಳೆದಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ಮನೆ ಸಮೀಪದಲ್ಲಿ ನೆರವೇರಿತು.
