ಮೂಡುಬಿದಿರೆ: ವಿನೂತನ ರೀತಿಯಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿ ದಿನದ ಎರಡನೇ ಕಾರ್ಯಕ್ರಮವನ್ನು ನೀಡಿದ ಡಾ.ಎಸ್.ಪಿ.ಬಿ ಬಾಲಸುಬ್ರಹ್ಮಣ್ಯಂ
ಎಸ್ಪಿಬಿ ಕಂಠಸಿರಿಯಲ್ಲಿ ಕನ್ನಡ, ತುಳು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳ ಹಾಡು ಪ್ರೇಕ್ಷಕರನ್ನು ಕಾಡಿದಂತೂ ನಿಜ.
ತುಳು ಹಾಡಿದ `ಎಸ್ಪಿಬಿ’
`ಮೋಕೆದ ಸಿಂಗಾರಿ…ಉಂತುದೆ ವಯ್ಯಾರಿ… ಯಾನೇ ಮೂಲು ಕಾತೊಂದುಲ್ಲೆ ಮದತೇ ಪೋಪನಾ..” ಎಂಬ ತುಳು ಹಾಡು ಖ್ಯಾತ ಗಾಯಕ ಪದ್ಮಶ್ರೀ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠಸಿರಿಯಲ್ಲಿ ಕೇಳಿಬಂತು.
`ಹೊಂಬಿಸಿಲು’ ಚಲನಚಿತ್ರದ `ಜೀವ ವೀಣೆ ನೀನು ಮಿಡಿತದ ಸಂಗೀತ’ ಎಂಬ ಹಾಡಿನೊಂದಿಗೆ ರಸಮಂಜರಿಯನ್ನು ಆರಂಭಿಸಿದ ಎಸ್ಪಿಬಿ ಅವರು `ಗೀತಾ’ ಚಿತ್ರದ `ಜೊತೆಯಲಿ ಜೊತೆ ಜೊತೆಯಲಿ’, ಶ್ರೀ ಮಂಜುನಾಥ ಚಿತ್ರದ `ಈ ಪಾದ ಪುಣ್ಯ ಪಾದ’, ರೋಜಾ ಚಿತ್ರದ ‘ರೋಜಾ ಜಾನೆ ಮನ್’, ಅಂಜಲಿ ಚಿತ್ರದ `ಅಂಜಲಿ ಅಂಜಲಿ ಅಂಜಲಿ’, ದೇವರ ದುಡ್ಡು ಚಿತ್ರದ “ತಾರಿ ಕೇರಿ ಏರಿ ಮೇಲೆ’, ಪಲ್ಲವಿ ಅನುಪಲ್ಲವಿ ಚಿತ್ರದ `ನಗುವಾ ನಯನಾ ಮಧುರ ಮೌನ’,ಗೀತಾ ಚಿತ್ರದ `ಹಾಡು ಸಂತೋಷಕ್ಕೆ’, “ತೇರಿ ಪಾಯಲ್ ಮೇರಿ ಗೀತ್” ಶ್ರೀ ವೆಂಕಟೇಶ ಚಿತ್ರದ `ಪವಾಡಿಸು ಪರಮಾತ್ಮ’ ಹಾಗೂ ಆಳ್ವಾಸ್ ವಿರಾಸತ್ನ ರೂವಾರಿ ಡಾ.ಎಂ.ಮೋಹನ ಆಳ್ವರ ಕೋರಿಕೆಯ ಮೇರೆಗೆ ಶಂಕರಾಭರಣ ಚಲನ ಚಿತ್ರದ `ಶಂಕರಾ ನಾದ ಶರೀರ’ ಎಂಬ ಹಾಡನ್ನು ಹಾಡಿದರು. ಇದಲ್ಲದೆ ತುಳು ನಾಡಿನಲ್ಲಿ ನಡೆದ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ತುಳು ಹಾಡನ್ನು ಹಾಡುವ ಮೂಲಕ ಕಲಾ ಸಭಿಕರನ್ನು ಮನ ಸೆಳೆದರು.

ಕನ್ನಡದ ಖ್ಯಾತ ಚಲನಚಿತ್ರಗಳಾದ ನೆನಪಿರಲಿ ಯ”ಕೂರಕ್ ಕುಕ್ರಲ್ಲಿಕೆರೆ” ಆಟೋ ರಾಜದ “ನಗುವಾ ಗುಲಾಬಿ ಹೂವೇ”, ಮಾನಸ ಸರೋವರದ ” ನೀನೆ ಸಾಕಿದ ಗಿಣಿ” ಇಂದ್ರಜಿತ್ ಚಿತ್ರದ “ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ” “ಬೆಳದಿಂಗಳಿಂದು ಹೆಣ್ಣಾಗಿ ಬಂದು” ಮುಂತಾದ ಹಾಡುಗಳ ತುಣುಕುಗಳನ್ನು ಹಾಡಿ ವಿವೇಕಾನಂದ ನಗರದ ಲ್ಲಿ ಸೇರಿದ್ದ ಸಂಗೀತಾಸಕ್ತರ ಗಮನ ಸೆಳೆದರು.
ಸಂಗೀತ ರಸಮಂಜರಿಯ ಈ ಕಾರ್ಯಕ್ರಮವನ್ನು ಒಂದು ಮುಕ್ಕಾಲು ಗಂಟೆಗಳ ಕಾಲ ನಡೆಸಿಕೊಟ್ಟ ಎಸ್.ಪಿ.ಬಿ ಅವರಿಗೆ ಅರ್ಚನಾ ಉಡುಪ ಮತ್ತು ಪೂರ್ಣಿಮಾ ಸಹಕರಿಸಿದರು. ಶ್ರೀನಿವಾಸ, ರಮೇಶ್ಚಂದ್ರ, ಗೀತೆಗಳನ್ನು ಹಾಡಿದರು. ಉಳಿದಂತೆ ಅಶ್ವಿನಿ, ಶೃತಿ ಕಾರ್ತಿಕ್ ಮತ್ತು ವೇಣುಗೋಪಾಲ್ ಅವರು ಹಿಮ್ಮೇಳನದಲ್ಲಿ ಸಹಕರಿಸಿದರು.


