ಬಂಟ್ವಾಳ: ಇಲ್ಲಿಗೆ ಸಮೀಪದ ಮಾರಿಪಳ್ಳ ಬಳಿ ರೌಡಿ ಶೀಟರ್ವೋರ್ವನನ್ನು ಕಾರು ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಬುಧವಾರ ಹಾಡುಹಗಲೇ ನಡೆದಿದ್ದು,ಪರಿಣಾಮ ಸ್ಥಳದಲ್ಲಿ ಕೆಲ ಹೊತ್ತುಗಳ ಕಾಲ ಆತಂಕದ ವಾತಾವರಣ ಉಂಟಾಯಿತು.


ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು.ಇಲ್ಲಿನ ನಿವಾಸಿ ಹನೀಫ್ ಯಾನೆ ಮಾದ ಹನೀಫ್ (38) ದುಷ್ಕರ್ಮಿ ಗಳಿಂದ ಇರಿತಕ್ಕೆ ಒಳಗಾದವನಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಡುಗಲೇ ಈ ಘಟನೆ ನಡೆದಿರುವುದರಿಂದ ಸ್ಥಳೀಯರು ಆತಂಕಕ್ಕೆ ಕಾರಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆ ವಿವರ;
ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಮನೆಯಿಂದ ಹೊರಟಿದ್ದ ಹನೀಫ್ ಯಾನೆ ಮಾದ ಹನೀಫ್ ಮಾರಿಪಳ್ಳದ ಅಂಗಡಿಯೊಂದರ ಮುಂದೆ ನಿಂತಿದ್ದ ಸಂದರ್ಭದಲ್ಲಿ ಹಠಾತ್ತನೆ ಕಾರು ಹಾಗೂ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಈತನ ಮೇಲೆ ಚೂರಿಯಿಂದ ಏಕಾಏಕಿಯಾಗಿ ಇರಿದು ಪರಾರಿಯಾಗಿದೆ. ಗಾಯಗೊಂಡ ಹನೀಫ್ ನನ್ನು ತಕ್ಷಣ ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಗಾಯಾಳು ಹನೀಫ್ ಮಾರಿಪಳ್ಳದ ರಿಕ್ಷಾ ಚಾಲಕ ರಿಫೈ, ನೂರುದ್ದೀನ್ ಹಾಗೂ ಅಹಿತಕರ ಘಟನೆಯ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣ ಸಹಿತ ಒಟ್ಟು ಮೂರು ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಹೆಸರು ರೌಡಿ ಶೀಟ್ ನಲ್ಲಿಯೂ ದಾಖಲಾಗಿತ್ತು. ಈತನ ಮೇಲೆ ಗೂಂಡಾ ಕಾಯಿದೆಯನ್ನು ಹಾಕಲು ಪೊಲೀಸರು ಸಿದ್ದತೆ ನಡೆಸಿದ್ದರಾದರೂ ಕಾರಣಾಂತರಗಳಿಂದ ಅದು ಜಾರಿಗೆ ಬಂದಿಲ್ಲ ಎಂದು ತಿಳಿದು ಬಂದಿದೆ.ಇದೀಗ ಹನೀಫ್ನನ್ನು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಚೂರಿಯಿಂದ ಇರಿದು ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ ಎಂಬುದನ್ನು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಕೃತ್ಯದಲ್ಲಿ ನಾಲ್ಕರಿಂದ ಐದು ಮಂದಿಭಾಗಿಯಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ಬಂಟ್ವಾಳ ವೃತ್ತನಿರೀಕ್ಷಕ ಬೆಳ್ಳಿಯಪ್ಪ, ಠಾಣಾಧಿಕಾರಿ ರಕ್ಷಿತ್ ಗೌಡ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಫೊಟೊ ಕಿಶೋರ್ ಪೆರಾಜೆ


