ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ -ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವಿನ ಮೆಲ್ಕಾರ್ ಜಂಕ್ಷನ್ ದಿನೇ ದಿನೇ ಪೇಟೆಯಾಗಿ ಪರಿವರ್ತನೆಗೊಂಡು ನಗರವಾಗಿ ಬೆಳೆಯುತ್ತಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಜಂಕ್ಷನ್ ತೀರಾ ಕಿರಿದಾಗಿದ್ದರೂ ರಸ್ತೆ ಎರಡೂ ಬದಿ ಬೃಹತ್ ಗಾತ್ರದ ವಸತಿ ಸಂಕೀರ್ಣ, ಹೋಟೆಲ್, ವಸತಿಗೃಹ, ಸಭಾಂಗಣ ಮತ್ತಿತರ ಕಟ್ಟಡಗಳು ಮಾತ್ರ ತಲೆ ಎತ್ತುತ್ತಲೇ ಇದೆ.
ಮೆಲ್ಕಾರ್ನಿಂದ ಬಂಟ್ವಾಳ, ಬಿ.ಸಿ.ರೋಡ್, ಮಂಗಳೂರು ಮಾತ್ರವಲ್ಲದೆ ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಬೆಂಗಳೂರು, ಕೊಣಾಜೆ, ತೊಕ್ಕೊಟ್ಟು, ಸಜಿಪ, ಪಣೋಲಿಬೈಲು ಮತ್ತಿತರ ಕಡೆಗಳಿಗೆ ನಿರಂತರವಾಗಿ ವಾಹನ ಓಡಾಟ ನಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಇಲ್ಲೊಂದು ಸಾರ್ವಜನಿಕ ಬಸ್ ತಂಗುದಾಣ ಬೇಕು ಎಂಬ ಸ್ಥಳೀಯರ ಬೇಡಿಕೆಗೆ ಬಂಟ್ವಾಳ ಪುರಸಭೆ ಸ್ಪಂದಿಸದಿರುವುದನ್ನು ಕಂಡ ಇಲ್ಲಿನ ಎಸ್ಎಸ್ಎಫ್ ಸಂಘಟನೆ ತಾತ್ಕಾಲಿಕ ಶೆಲ್ಟರ್ ನಿರ್ಮಿಸಿ ಕೊಟ್ಟಿದೆ.
ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ಪ್ರಮುಖ ವೃತ್ತ ಸಮೀಪದಲ್ಲಿರುವ ತರಕಾರಿ ಮತ್ತು ಮೀನು ಮಾರುಕಟ್ಟೆ ದೃಶ್ಯ.
ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ -ಕೊಣಾಜೆ ರಸ್ತೆ ನಡುವಿನ ಒಳ ರಸ್ತೆ ನಾಮಫಲಕವು ಪೊದೆಯಿಂದ ಮುಚ್ಚಿಕೊಂಡಿದೆ.
ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಕಸ ಮತ್ತಿತರ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವ ದೃಶ್ಯ. ಇದೀಗ ಕಸ ಮತ್ತು ತ್ಯಾಜ್ಯ ರಾಶಿ ಹಾಕಲು ಇಲ್ಲಿನ ಪುರಸಭೆ ಸೂಕ್ತ ವ್ಯವಸ್ಥೆ ಮಾಡದಿರುವ ಪರಿಣಾಮ ಹೆದ್ದಾರಿ ಬದಿ ತ್ಯಾಜ್ಯ ರಾಶಿ ಬಿದ್ದು ರಸ್ತೆಯುದ್ದಕ್ಕೂ ಕಸ ಹಾರಾಡುತ್ತಿದೆ. ಮಳೆ ಬಂತೆಂದರೆ ಸಾಕು ಇಲ್ಲಿನ ಮೋರಿಯಲ್ಲೆಲ್ಲಾ ಕಸ ತುಂಬಿಕೊಂಡು ಹೆದ್ದಾರಿಯಲ್ಲಿ ಕೃತಕ ಕೆರೆ ಸೃಷ್ಟಿಯಾಗುತ್ತಿದೆ. ಮಾತ್ರವಲ್ಲದೆ ಸ್ಥಳೀಯ ನಿವಾಸಿಗಳಾದ ದಾಮೋದರ ಮೆಲ್ಕಾರ್, ರುಕ್ಮಯ ಸಪಲ್ಯ, ಬಿ.ಗಣೇಶ ಸೋಮಯಾಜಿ ಮತ್ತಿತರರ ಕೃಷಿ ಜಮೀನಿನಲ್ಲಿಯೂ ಮೋರಿ ಮೂಲಕ ಹಾದು ಬಂದ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಭೂಮಿಯ ಫಲವತ್ತತೆಯನ್ನೇ ಕೆಡಿಸಿ ಹಾಕಿವೆ ಎನ್ನುತ್ತಿದ್ದಾರೆ. ಇಲ್ಲಿನ ಬಹುತೇಕ ಅಡ್ಡರಸ್ತೆಗೆ ಅಳವಡಿಸಿರುವ ನಾಮಫಲಕವು ಪೊದೆಯಿಂದ ಆವರಿಸಿಕೊಂಡಿದ್ದು, ಹೋಟೆಲ್, ವಸತಿಗೃಹ, ವಸತಿ ಸಂಕೀರ್ಣ, ಸಭಾಂಗಣ, ಮೀನು ಮತ್ತು ತರಕಾರಿ ಮಾರುಕಟ್ಟೆ, ಅಂಗಡಿ, ಮನೆ ಮತ್ತಿತರ ಕಡೆಗಳಿಂದ ಪ್ರತಿದಿನ ತಂದು ಎಸೆಯುತ್ತಿರುವ ಕಸ ಮತ್ತು ತ್ಯಾಜ್ಯದಿಂದಾಗಿ ಹೆದ್ದಾರಿ ಬದಿ ಮೋರಿಯಲ್ಲೂ ತುಂಬಿ ತುಳುಕಾಡುತ್ತಿದೆ. ಇದರಿಂದಾಗಿ ಪರಿಸರವಿಡೀ ದುರ್ನಾ ತ ಬೀರುತ್ತಾ ರಾತ್ರಿ-ಹಗಲು ನುಸಿ ಕಾಟ ವಿಪರೀತವಾಗಿದೆ. ಪ್ರತಿದಿನ ತ್ಯಾಜ್ಯ ವಿಲೇವಾರಿ ಮತ್ತು ಪ್ರತ್ಯೇಕ ಸ್ಥಳ ಗುರುತಿಸಿ ಕಸ ಹಾಕಲು ಸಿಮೆಂಟ್ ರಿಂಗ್ ಅಥವಾ ಟ್ಯಾಂಕ್ ರಚಿಸುವಂತೆ ಈಗಾಗಲೇ ಪುರಸಭೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಸ್ಥಳೀಯ ಪುರಸಭಾ ಸದಸ್ಯೆ ಚಂಚಲಾಕ್ಷಿ ಮತ್ತು ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅವರು ಬಂದು ಸ್ಥಳ ಪರಿಶೀಲನೆ ಮಾತ್ರ ಮಾಡಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.
ಡೆಂಗೆ ಭೀತಿ:
ತಾಲ್ಲೂಕಿನಲ್ಲಿ ಮಳೆಗಾಲ ಆರಂಭಗೊಂಡ ಬಳಿಕ ಹಲವೆಡೆ ಸುಮಾರು 250ಕ್ಕೂ ಮಿಕ್ಕಿ ಮಂದಿಗೆ ಶಂಕಿತ ಡೆಂಗೆ ಜ್ವರಬಾಧೆ ಕಾಣಿಸಿಕೊಂಡಿದ್ದು, ಈಗಾಗಲೇ ನಾಲ್ವರು ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಮೆಲ್ಕಾರ್ನ ಸಮಾಜ ಸೇವಕ, ಬಂಟ್ವಾಳ ಪುರಸಭೆ ನಾಮನಿದರ್ೇಶಿತ ಮಾಜಿ ಸದಸ್ಯ ರವಿ ಮೆಲ್ಕಾರ್ ಕೂಡಾ ಶಂಕಿತ ಡೆಂಗೆಗೆ ಬಲಿಯಾಗಿದ್ದಾರೆ. ಇದರಿಂದಾಗಿ ಇಲ್ಲಿನ ಜನತೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಎಲ್ಲೆಡೆ ಹರಡಿರುವ ತ್ಯಾಜ್ಯ ರಾಶಿ ತೆರವುಗೊಳಿಸುವುದರ ಜೊತೆಗೆ ರಸ್ತೆ ಬದಿ ಆವರಿಸಿಕೊಂಡಿರುವ ಪೊದೆಗಳನ್ನು ಶುಚಿಗೊಳಿಸಿ ಫಾಗಿಂಗ್ ಸಿಂಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಕರ್ಾರಿ ಆಸ್ಪತ್ರೆಗಳಲ್ಲಿ ಡೆಂಗೆ ಜ್ವರ ಪರೀಕ್ಷೆ ಸೌಲಭ್ಯ ಇಲ್ಲದ ಪರಿಣಾಮ ಬಹುತೇಕ ಖಾಸಗಿ ಆಸ್ಪತ್ರೆಗಳು ಡೆಂಗೆ ನೆಪದಲ್ಲಿ ಹಲವು ವಿಧದ ಪರೀಕ್ಷೆ ನಡೆಸಿ ದುಬಾರಿ ಹಣ ಸುಲಿಗೆ ಮಾಡುತ್ತಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ತವರು ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಎದುರಾದರೆ ನಾವು ಯಾರಿಗೆ ಮೊರೆ ಹೋಗಬೇಕು ಎಂಬುದೇ ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ನಾಗರಿಕರು.
ಚಿತ್ರ: ಎಂ.ಕೆ.ಶ್ರೀಯಾನ್ ರಾಯಿ




