ಮೂಡುಬಿದಿರೆ: ಮೂಡುಬಿದಿರೆ ಕೋ-ಆಪರೇಟಿವ್ ಸರ್ವೇಸ್ ಬ್ಯಾಂಕ್ (ಲಿ.) ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ, ಸಹಕಾರ ಇಲಾಖೆ, ಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಂಸಿಎಸ್ ಬ್ಯಾಂಕ್ ನಲ್ಲಿ ನಡೆದ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಎಂ.ಸಿ.ಎಸ್. ಬ್ಯಾಂಕ್ ನೀಡುವ ನಾಲ್ಕನೇ ವರ್ಷದ ಸಹಕಾರ ಕಲ್ಪವೃಕ್ಷ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅವರಿಗೆ ಮಣಿಪಾಲ ಮಾಹೆಯ ನಿವೃತ್ತ ಉಪಕುಲಪತಿ ಡಾ. ಬಿ ಎಂ ಹೆಗ್ಡೆ ಅವರು ಹತ್ತು ಗ್ರಾಂ ಚಿನ್ನದ ನಾಣ್ಯ ಹಾಗೂ ಬೆಳ್ಳಿಯ ಸ್ಮರಣಿಕೆಯನ್ನು ಶುಕ್ರವಾರ ನೀಡಿ ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಅಭಿನಂದನಾ ಭಾಷಣ ಮಾಡಿದ ಹೆಗ್ಡೆ ಅವರು ಮನುಷ್ಯರ ಮೇಲೆ ಸದಾ ಪ್ರೀತಿ ತೋರುವವರು ಮತ್ತು ಸಮಾಜಕ್ಕಾಗಿ ಜೀವಿಸುವವರು ಸದಾ ಸ್ಮರಣೀಯರಾಗುತ್ತಾರೆ. ಈ ಸಾಲಿಗೆ ಮೋಹನ ಆಳ್ವ ಅವರು ಸೇರಿದ್ದು ಇವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಮುಂಚೂಣಿ ಶಿಕ್ಷಣ ಸಂಸ್ಥೆಗಳ ಸಾಲಿಗೆ ಸೇರಿದೆ. ಪ್ರಶಸ್ತಿಗಳಿಗಾಗಿ ಲಾಭಿ ನಡೆಸುತ್ತಿರುವ ಈ ದಿನಗಳಲ್ಲಿ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸ್ತುತ್ಯಾರ್ಹ. ಮೋಹನ್ ಆಳ್ವರು ನಿಜಾರ್ಥದ ಬುದ್ಧಿ ಜೀವಿಯಾಗಿದ್ದು ಅವರಿಗೆ ಭಾರತ ರತ್ನ ಸಿಗಲಿ ಎಂದು ಆಶಿಸಿದರು.
ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆ ಮಾತನಾಡಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಎಂ.ಸಿ.ಎಸ್ ಬ್ಯಾಂಕಿನ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ ನಿಜ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದರಿಂದ ಸಹಕಾರಿ ಕ್ಷೇತ್ರದ ಗೌರವ ಮತ್ತಷ್ಟು ಹೆಚ್ಚಾಗಿದೆ. ಮೂಡುಬಿದಿರೆಯ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದ ಈ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಎಂ.ಮೋಹನ್ ಆಳ್ವ ಸಮಾಜಕ್ಕಾಗಿ ಮಾಡಿದ ಕೆಲಸವನ್ನು ಗುರುತಿಸಿರುವುದರಿಂದ ನನ್ನ ಬದುಕು ಸಾರ್ಥಕವಾಗಿದೆ. ಸಮಾಜದಿಂದ ಪಡೆದ ಸಂಪತ್ತನ್ನು ಸಮಾಜಕ್ಕೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸನ್ಮಾನಗಳು : ಬ್ಯಾಂಕಿನ ಸಕ್ರಿಯ ಹಿರಿಯ 10 ಮಂದಿ ಸದಸ್ಯರಿಗೆ ಸಹಕಾರ ಪ್ರಶಸ್ತಿ, ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ವ್ಯವಸ್ಥಾಪಕರು ಮತ್ತು ಇಲಾಖಾಧಿಕಾರಿಗಳ ಸನ್ಮಾನ, ಸಹಕಾರಿ ತರಬೇತಿ ಕೇಂದ್ರದ ರ್ಯಾಂಕ್ ವಿಜೇತರಿಗೆ ಸನ್ಮಾನ, ವಿಕಲ ಚೇತನ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, 7 ಮತ್ತು 10ನೇ ತರಗತಿಯ ಕನ್ನಡ, ಹಿಂದಿ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತೆ ಪಂಚಮಿ ಮಾರೂರು, ಸಿಎ ದಯಾಶರಣ್ ಶೆಟ್ಟಿ, ಲಾಂಛನ ವಿನ್ಯಾಸಗೊಳಿಸಿದ ಯತಿರಾಜ್ ಶೆಟ್ಟಿ ಅವರನ್ನು ಬ್ಯಾಂಕಿನ ಅಧ್ಯಕ್ಷರು ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷ ಕಿಶನ್ ಹೆಗ್ಡೆ, ಎಸ್ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಭಾಸ್ಕರ ಎಸ್.ಕೋಟ್ಯಾನ್, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವರದರಾಯ ಕಾಮತ್, ಜಿಲ್ಲಾ ಹಾಲು ಉತ್ಪಾಧಕರ ಒಕ್ಕೂಟದ ನಿರ್ದೇಶಕ ದಯಾನಂದ ಪೈ ಹಾಗೂ ಬ್ಯಾಂಕಿನ ನಿರ್ದೇ ಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಕಾರ್ಯದರ್ಶಿ ಚಂದ್ರಶೇಖರ ಎಂ. ಸ್ವಾಗತಿಸಿದರು. ನಿರ್ದೇಶಕ ಪ್ರೇಮಾನಂದ ಪ್ರಭು ವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
