ಬಂಟ್ವಾಳ : ಸೌದಿ ಅರೇಬಿಯಾದಲ್ಲಿ ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಬಂಟ್ವಾಳದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ತಾಲೂಕಿನ ಪಾಣೆಮಂಗಳೂರು ಸಮೀಪದ ಬೋಳಂಗಡಿ ಚಡವು ಶಾಲಾ ಬಳಿ ನಿವಾಸಿ ಬಿ. ಮುಹಮ್ಮದ್ (52) ಎಂದು ಹೆಸರಿಸಲಾಗಿದೆ. ಸೌದಿ ಅರೇಬಿಯಾದ ಅಲ್-ಜೌಫ್ ಎಂಬಲ್ಲಿ ಕಂಪೆನಿಯೊಂದರಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಗುರುವಾರ ಮಧ್ಯಾಹ್ನ ವಿಶ್ರಾಂತಿಗಾಗಿ ತನ್ನ ಕೊಠಡಿಯಲ್ಲಿ ಬಂದು ಮಲಗಿದ್ದವರು ಶುಕ್ರವಾರ ಬೆಳಿಗ್ಗೆಯಾದರೂ ಕೊಠಡಿಯ ಬಾಗಿಲು ತೆರೆಯದೆ ಇರುವುದನ್ನು ಕಂಡು ಗಾಬರಿಗೊಂಡ ಸ್ನೇಹಿತರು ಕಫೀಲ್ ಜೊತೆ ಸೇರಿ ಕೋಣೆಯ ಬಾಗಿಲು ಮುರಿದು ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿರುವ ಸಾಧ್ಯತೆ ಇದೆ ಎಂದು ಅಲ್ಲಿನ ವೈದ್ಯರು ಶಂಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಹಲವು ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿರುವ ಮುಹಮ್ಮದ್ ಕಳೆದ ಕೆಲ ತಿಂಗಳ ಹಿಂದೆಯಷ್ಟೆ ಊರಿಗೆ ಬಂದು ತನ್ನ ಹಿರಿ ಪುತ್ರಿಯ ವಿವಾಹ ಕಾರ್ಯ ನೆರವೇರಿಸಿ ಮರಳಿದ್ದರು ಎನ್ನಲಾಗಿದೆ. ಮೃತರು ಪತ್ನಿ, ಐವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ
