ಮಂಗಳೂರು: ಸುರತ್ಕಲ್ ಜಂಕ್ಷನ್ನಲ್ಲಿ ರಾ.ಹೆ. ಪ್ರಾಧಿಕಾರ ಕಾಣದ `ಕೈ’ಗಳ ಪ್ರಭಾವಕ್ಕೆ ಮಣಿದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ಸರ್ವೀಸ್ ರಸ್ತೆ ನಿರ್ಮಾಣ ಮಾಡಿದ್ದು ಹಳೇ ಸುದ್ದಿ. ಆದರೆ ಈಗ ಇರೋ ಸರ್ವೀಸ್ ರಸ್ತೆಯಲ್ಲೂ ದ್ಚಿಚಕ್ರ, ಕಾರು ಚಾಲಕರು ಮತ್ತು ಪಾದಚಾರಿಗಳು ನೆಮ್ಮದಿಯಿಂದ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ರಸ್ತೆಯಲ್ಲಿ ದಿನವಿಡೀ ಬೇಕಾಬಿಟ್ಟಿ ಸರ್ಕಸ್ ಮಾಡಿಕೊಂಡು ಸಂಚರಿಸೋ ಘನವಾಹನಗಳ ಕಾರುಬಾರು. ಇದರಿಂದ ನಿತ್ಯ ಜನಸಾಮಾನ್ಯರಿಗೆ, ಪಕ್ಕದ ಅಂಗಡಿ ಮಾಲಕರಿಗೆ ಸಮಸ್ಯೆಯಾಗುತ್ತಲೇ ಇದ್ದರೂ ಸ್ಥಳೀಯ ಪೊಲೀಸರು `ಸೈಲೆಂಟ್’ ಆಗಿದ್ದಾರೆ.
ಫ್ಲೈ ಓವರ್ ಕೆಳಗಡೆ ಹಳೇ ಪೊಲೀಸ್ ಠಾಣೆಯ ರಸ್ತೆಯಲ್ಲಿ ಹೆದ್ದಾರಿಯಿಂದ ಕೆಳಕ್ಕಿಳಿಯುವ ಟ್ಯಾಂಕರ್, ಎಲ್ಪಿಜಿ ಬುಲೆಟ್ ಟ್ಯಾಂಕರ್ಗಳು ಇದೇ ರಸ್ತೆಯಲ್ಲಿ ಮುಂದುವರಿದು ಎಂಆರ್ಪಿಎಲ್ ಮತ್ತಿತರ ಕಂಪೆನಿಗಳಿಗೆ ಸಂಚಾರ ನಡೆಸುತ್ತವೆ. ಇದರಿಂದ ರಸ್ತೆ ಸದಾಕಾಲ ಬ್ಲಾಕ್ ಆಗುತ್ತದೆ. ಇದರಿಂದ ಸಣ್ಣ ವಾಹನಗಳ ಸವಾರರು ಸಂಚರಿಸಲು ಪರದಾಡುವಂತಾಗುತ್ತದೆ. ಇಲ್ಲೇ ರಸ್ತೆಯ ಒಂದು ಬದಿಯಲ್ಲಿ ಮೆಡಿಕಲ್, ಸೈಬರ್, ವೈನ್ಶಾಪ್ ಮತ್ತಿತರ ಅಂಗಡಿಗಳಿದ್ದು ಗ್ರಾಹಕರು ಇಲ್ಲಿಗೆ ಹೋಗಲು ರಸ್ತೆ ದಾಟುವುದೇ ಪ್ರಯಾಸದ ಕೆಲಸವಾಗುತ್ತದೆ.
ಘನವಾಹನಗಳ ಬೇಕಾಬಿಟ್ಟಿ ಓಡಾಟದಿಂದಾಗಿ ಅಂಗಡಿಗಳಿಗೆ ಗ್ರಾಹಕರ ಸಂಖ್ಯೆಯೂ ಇಳಿಮುಖವಾಗಿದೆ. ಇನ್ನು ಸದಾಕಾಲ ಘನವಾಹನಗಳು ಸಂಚಾರ ನಡೆಸುವ ಕಾರಣ ದ್ವಿಚಕ್ರ ಸವಾರರು ಈ ರಸ್ತೆಯಲ್ಲಿ ಸಿಲುಕಿಕೊಳ್ಳುವಂತಾಗುತ್ತದೆ. ಸುರತ್ಕಲ್ ಠಾಣಾ ಪೊಲೀಸರು, ಟ್ರಾಫಿಕ್ ಇಲಾಖೆ ಈ ಸಮಸ್ಯೆಯ ಬಗ್ಗೆ ತಕ್ಷಣವೇ ಕ್ರಮ ಜರುಗಿಸಬೇಕು, ಇಲ್ಲವಾದಲ್ಲಿ ನಾಗರಿಕರಿಗೆ ತೊಂದರೆಯಾಗುವುದನ್ನು ಖಂಡಿಸಿ ಇಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.


