ಕೊಣಾಜೆ ಪೊಲೀಸರಿಗೆ ಕರ್ನಾಟಕ ರಾಜ್ಯ ಇಂಡಸ್ಟ್ರಿಯಲ್ ಪೋಲೀಸ್ ಪಡೆ ಸಾಥ್
ಉಳ್ಳಾಲ: ಕೇರಳ ಸೇರಿದಂತೆ ಹೊರ ರಾಜ್ಯಗಳಿಗೆ ಅಕ್ರಮ ಮರಳು ಸಾಗಾಟಕ್ಕೆ ಕಳೆದ ನಾಲ್ಕು ದಿನಗಳಿಂದ ತಡೆ ಬಿದ್ದಿದ್ದು, ಪೊಲೀಸ್ ಇಲಾಖೆ ಮತ್ತು ಕರ್ನಾಟಕ ರಾಜ್ಯ ಇಂಡಸ್ಟ್ರಿಯಲ್ ಪೊಲೀಸ್ ಪಡೆ ಸಿಬಂದಿಗಳು ಅಕ್ರಮ ಮರಳುಗಾರಿಕೆಯ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಕಳೆದೆರಡು ದಿನಗಳಿಂದ ಸುಮಾರು 40ಕ್ಕೂ ಹೆಚ್ಚು ಲಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನೇತ್ರಾವತಿ ತಟದ ಪಾವೂರು ಇನೋಳಿಯಿಂದ ಹೊರ ರಾಜ್ಯಗಳಿಗೆ ಅಕ್ರಮ ಮರಳು ಸಾಗಾಟಕ್ಕೆ ಸಂಬಂ„ಸಿದಂತೆ ಡಿವೈಎಫ್‍ಐ ಸೇರಿದಂತೆ ಸ್ಥಳೀಯರು ಕಲೆದ ಹಲವು ತಿಂಗಳಿಂದ ಹೋರಾಟ ನಡೆಸಿದ್ದರು. ಆದರೆ ಅಕ್ರಮ ಮರಳು ಸಾಗಾಟ ಯಾವುದೇ ಅಡೆತಡೆ ಇಲ್ಲದೆ ಮುಂದುವರೆದಿತ್ತು. ಈ ನಿಟ್ಟಿನಲ್ಲಿ ಹೋರಾಟ ಚುರುಕುಗೊಳಿಸುವ ಮಾಹಿತಿಯನ್ನು ಡಿವೈಎಫ್‍ಐ ಸಂಘಟನೆ ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಮುಖ್ಯವಾಗಿ ಕೊಣಾಜೆ ಪೊಲೀಸ್ ಅಧಿಕಾರಿಗಳು ಮರಳು ಮಾಫಿಯದೊಂದಿಗೆ ಸೇರಿಕೊಂಡಿದ್ದರು ಎನ್ನುವ ಆರೋಪ ಮಾಡಿತ್ತು.ಇದೀಗ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಮರಳುಗಾರಿಕೆಗೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.
Konaje Hoige
ಇನ್‍ಸ್ಪೆಕ್ಟರ್ ಹಠಾವೊ ಚಳವಳಿ : ಡಿವೈಎಫ್‍ಐ ಸಂಘಟನೆಯು ಕೊಣಾಜೆ ಪೊಲೀಸ್ ಇನ್‍ಸ್ಪೆಕ್ಟರನ್ನು ವರ್ಗಾಯಿಸದಿದ್ದರೆ ಇನ್‍ಸ್ಪೆಕ್ಟರ್ ಹಠಾವೋ ಚಳವಳಿ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು. ಕಾಕತಾಳಿಯವೆಂಬತೆ ಪತ್ರಿಕಾಗೋಷ್ಠಿ ನಡೆದ ದಿನವೇ ಇನ್‍ಸ್ಪೆಕ್ಟರ್ ಅವರನ್ನು ಕಮಿಷನರ್ ಕಚೇರಿಯಲ್ಲಿ ಹೆಚ್ಚುವರಿ ಕಾರ್ಯಕ್ಕೆ ನಿಯೋಜಿಸಲಾಗಿತ್ತು.
ಇಂಡಸ್ಟ್ರಿಯಲ್ ಸೆಕ್ಯುರಿಟಿ ಪೋರ್ಸ್ : ಕೊಣಾಜೆ ಪೊಲೀಸ್ ಠಾಣೆಗೆ ರಾಜ್ಯ ಇಂಡಸ್ಟ್ರಿಯಲ್ ಸೆಕ್ಯುರಿಟಿ ಪೋರ್ಸ್‍ನ 10ಕ್ಕೂ ಹೆಚ್ಚು ಸಿಬಂದ್ದಿಗಳು ಆಗಮಿಸಿದ್ದು ಕಳೆದ ನಾಲ್ಕು ದಿನಗಳಿಂದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಣಾಜೆ ಪೊಲೀಸರೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕಾರ್ಯಾಚರಣೆ ಚುರುಕುಗೊಳ್ಳುತ್ತಿದ್ದಂತೆ ಪರ್ಮಿಟ್ ಹೊರತು ಪಡಿಸಿ ಅಕ್ರಮ ಸಾಗಾಟದ ಲಾರಿಗಳು ತಮ್ಮ ಸಂಚಾರ ನಿಲ್ಲಿಸಿದೆ.
ಹೆಚ್ಚುತ್ತಿದೆ ರಾಜಕೀಯ ಒತ್ತಡ : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಮರಳು ಸಾಗಾಟದಲ್ಲಿ ಸ್ಥಳೀಯ ರಾಜಕೀಯ ಪುಡಾರಿಗಳ ಕೈವಾಡ ಇದ್ದು, ಪೊಲೀಸರು ನಿಲ್ಲಿಸುತ್ತಿದ್ದಂತೆ ಉನ್ನತ ಮಟ್ಟದ ನಾಯಕರ ದೂರವಾಣಿ ಕರೆಗಳು ಪೊಲೀಸ್ ಠಾಣೆಗೆ ಬರುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚುವರಿ ಪೊಲೀಸ್ ಪಡೆ ಬಂದ ಕಾರಣ ಕೊಣಾಜೆ ಪೊಲೀಸರು ನಿರಾಳರಾಗಿದ್ದು, ಹೊಸ ಪಡೆಗಳಿಗೆ ಸ್ಥಳೀಯರ ಪರಿಚಯ ಇಲ್ಲದ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಅಡೆತಡೆಯಾಗದಿದ್ದರೂ, ಕೆಲವೊಂದು ಚಾಣಾಕ್ಷ ಮರಳು ಸಾಗಾಟಗಾರರು ಹೆಚ್ಚುವರಿ ಪಡೆಯ ಕಣ್ಣುತಪ್ಪಿಸಿ ಸಾಗಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರ ಹೆಸರಲ್ಲಿ ಪೊಲೀಸರಿಗೆ ರೋಪ್ ಹಾಕುತ್ತಿದ್ದಾರೆ : ಜಿಲ್ಲಾ ಉಸ್ತುವಾರಿ ಸೇರಿದಂತೆ ಹೆಚ್ಚಿನ ಮಂತ್ರಿಗಳ ಹೆಸರಲ್ಲಿ ಪೊಲೀಸರಿಗೆ ಮರಳು ಸಾಗಾಟಗಾರರಾಗಿರುವ ದೊಡ್ಡ ಕುಳಗಳು ಪೊಲೀಸರನ್ನೇ ಏಮಾರಿಸುತ್ತಿದ್ದಾರೆ ಎನ್ನುವ ಮಾಹಿತಿ ಪತ್ರಿಕೆಗೆ ದೊರೆತಿದೆ.ಅದರಲ್ಲೂ ಮಂಗಳೂರಿನ ಶಾಸಕರ ಹೆಸರಿನಲ್ಲೂ ಸಾಗಾಟಕ್ಕೆ ತೊಂದರೆ ಪಡಿಸದಂತೆ ದೂರವಾಣಿ ಕರೆಗಳು ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಮರಳು ಸಾಗಾಟದಿಂದ ಸ್ಥಳೀಯರಿಗೆ ಮರಳು ದುಬಾರಿಯಾಗಿತ್ತು. ಹೊರಾಟ ಪ್ರಾರಂಭಗೊಂಡಿದ್ದರಿಂದ ದರ ಕಡಿಮೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು. ಮರಳು ಸಾಗಾಟದಿಂದ ರಸ್ತೆಯೂ ಹಾಳಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

By suddi9

Leave a Reply

Your email address will not be published. Required fields are marked *