ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಷಂಡತನದಿಂದಾಗಿ ದೇಶದಲ್ಲಿ ರೈತರಿಗೆ ಸಂಕಷ್ಟಗಳ ಸರಮಾಲೆ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ.ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ಆರೋಪಿಸಿದ್ದಾರೆ.
ಭಾರತೀಯ ರೈತ ಸಂಘಟನೆಗಳ ಸಮನ್ವಯ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕ ಹಾಗೂ ದ.ಕ.ಜಿಲ್ಲಾ ಘಟಕದ ಆಶ್ರಯದಲ್ಲಿ ರೈತರ ಸಮಸ್ಯೆಗಳಿಗೆ ಕಾರಣವಾದ ಎತ್ತಿನ ಹೊಳೆ ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸಲಾದ ರಾಷ್ಟ್ರೀಯ ಹೆದ್ದಾರಿ ತಡೆಯ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ರೈತರ ಸಂಕಷ್ಟದ ಬಗ್ಗೆ ಯಾವ ಜನಪ್ರತಿನಿಧಿಗಳೂ ಕಾಳಜಿವಹಿಸುತ್ತಿಲ್ಲ ಎಂದು ಗಂಭೀರ ಆರೋಪಹೊರಿಸಿದ ಅವರು, ಎತ್ತಿನ ಹೊಳೆ ಯೋಜನೆಯೊಂದೇ ಇದಕ್ಕೆ ಸ್ಪಷ್ಟನಿದರ್ಶನ ಎಂದರು. 13 ಸಾವಿರ ಕೋಟಿ ಹಣವನ್ನು ಅವರು ಅವೈಜ್ಞಾನಿಕ ಯೋಜನೆಗೆ ಮೀಸಲಿಟ್ಟಿದ್ದಾಗಿ ಹೇಳುತ್ತಿದ್ದಾರೆ ಆದರೆ ಅದು ಯಾರ ಅಪ್ಪನ ದುಡ್ಡೂ ಅಲ್ಲ, ನಮ್ಮ ತೆರಿಗೆಯ ಹಣ ಎಂದ ಅವರು, ರೈರ ಬೇಡಿಕೆಗಳಿಗೆ ಸ್ಪಂದನ ನೀಡದೇ ಇದ್ದರೆ ರಸ್ತೆ ರಸ್ತೆಗಳಲ್ಲಿ ಸಚಿವರು-ಸಂಸದರನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದರು.
ಮೊಡಂಕಾಪು ಚರ್ಚ್ನ ಧರ್ಮಗುರು ವಂ. ಗಾಡ್ವಿನ್ ರವರು ಮಾತನಾಡಿ,ರೈತರು ಈ ನೆಲದ ಅನ್ನದಾತರು, ಅವರ ಸಮಸ್ಯೆಗಳಿಗೆ ಸರ್ಕಾರ ತುರ್ತು ಸ್ಪಂದನ ನೀಡಬೇಕೆಂದು ಆಗ್ರಹಿಸಿದರು. ಪುತ್ತೂರಿನ ಎಸ್.ಬಿ.ದಾರಿಮಿ ಮಾತನಾಡಿ, ಜಾತಿ ಮತ, ಪಕ್ಷ ಗಳನ್ನು ಮೀರಿದ ಹೋರಾಟ ಈ ನಾಡಿನಲ್ಲಿ ನಡೆದಾಗ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯ ಎಂದರು.
ಉಡುಪಿ ಉಷ್ಣ ವಿದ್ಯುತ್ ಸ್ತಾವರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ, ಎತ್ತಿನ ಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಡಾ.ನಿರಂಜನ್ ರೈ, ಪ್ರಮುಖರಾದ ಪ್ರಶಾಂತ್ ಡಿ’ಕೋಸ್ತಾ, ರಾಜಗೋಪಾಲ ಭಟ್, ಅರುಣ್ ಉಪ್ಪಿನಂಗಡಿ, ರಹಿಮಾನ್ ಯುನಿಕ್, ಇರ್ಷಾದ್ , ತೌಸೀಫ್ , ರೈತ ಸಂಘ ಹಸಿರು ಸೇನೆಯ ಪ್ರಮುಖರಾದ ಸುರೇಶ್ ಭಟ್, ಮಂಜುನಾಥ ರೈ ಪರಾರಿ, ಗಾಯತ್ರಿ ಬಾಳ್ತಿಲ, ರೂಪೇಶ್ ರೈ ಅಲಿಮಾರ್, ವಿನೋದ್ ಪಾದೆಕಲ್ಲು, ಇಬ್ರಾಹಿಂ ಖಲೀಲ್ ಪುಚ್ಛೆತ್ತಡ್ಕ , ಸುರೇಶ ಕುಮಾರ್, ತಾರಾನಾಥ ಗೌಡ ಸುಳ್ಯ, ಅಲ್ವಿನ್ ಮಿನೇಜಸ್, ಪ್ರಸಾದ್ ಶೆಟ್ಟಿ ಪುತ್ತೂರು, ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗಿ ಹೆದ್ದಾರಿಯ ಡಿವೈಡರ್ ಸ್ಥಳದಲ್ಲಿ ಒಂದು ತಾಸುಗಳ ಕಾಲ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಾ ಕಾರರು ಕೆಂದ್ರ ಹಾಗೂ ರಾಜ್ಯದ ಮಂತ್ರಿಗಳ ವಿರುದ್ದ ವ್ಯಾಪಕ ವಾಗ್ದಾಳಿ ನಡೆಸಿದರು. ರೈತ ವಿರೋಧಿ ಧೋರಣೆಗಳಿಗೆ ಧಿಕ್ಕಾರ ಎನ್ನುತ್ತಾ 5 ನಿಮಿಷಗಳ ಕಾಲ ಹೆದ್ದಾರಿ ತಡೆ ನಡೆಸಿದರು. ಬಳಿಕ ಬಂಟ್ವಾಳ ಪೊಲೀಸರಿಂದ ಬಂಧನಕ್ಕೊಳಗಾದರು. ಬಂಟ್ವಾಳ ವೃತ್ತನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಒದಗಿಸಲಾಗಿದ್ದು, ಹೆದ್ದಾರಿ ತಡೆ ಸನಡೆಸಿದ 110 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.



