ಮಂಗಳೂರು: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಇಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲೇಜು ಬಂದ್ ಗೆ ಕರೆ ನೀಡಲಾಗಿದೆ. ಜಾತಿ ಮತ ಬೇಧಭಾವವಿಲ್ಲದೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಬೀದಿಗಿಳಿದು ಮೆರವಣಿಗೆ ನಡೆಸಿದರು.
ಉತ್ಸಾಹೀ ವಿದ್ಯಾರ್ಥಿಗಳು ರಾಜಕಾರಣಿಗಳೇ ಎತ್ತಿನಹೊಳೆ ಯೋಜನೆ ಕೈಬಿಡಿ ಇಲ್ಲವಾದಲ್ಲಿ ವಿದ್ಯಾರ್ಥಿಗಳ ಶಕ್ತಿ ಪ್ರದರ್ಶನವಾಗುತ್ತದೆ ಎಂದು ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದರು. ಸ್ವಾರ್ಥ ಕಾರಣಕ್ಕಾಗಿ ಜಿಲ್ಲೆಯನ್ನು ಬಲಿಕೊಡಲು ಸಿದ್ಧರಾಗಿರುವ ರಾಜಕಾರಣಿಗಳ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳು ಎತ್ತಿನ ಹೊಳೆ ಯೋಜನೆ ವಿರುದ್ಧ ಕಠಿಣ ನಿಲುವು ತಾಳಿರುವುದಕ್ಕೆ ರಕ್ತ ಕೊಟ್ಟೇವು ನೇತ್ರಾವತಿ ಬಿಡೆವು ಎಂಬಿತ್ಯಾದಿ ಘೋಷಣೆಗಳೇ ಸಾಕ್ಷಿಯಾದವು.
ಬಳಿಕ ಜಿಲ್ಲಾಧಿಕಾರಿಯವರ ಕಛೇರಿಯವರ ಮುಂಭಾಗ ಸಭೆ ಸೇರಿದ ಸರ್ವಕಾಲೇಜು ಸಂಘದ ವಿದ್ಯಾರ್ಥಿಗಳನ್ನುದ್ದೇಶಿಸಿ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಾದ ನಾವು ಶೇ.30ರಷ್ಟು ಮತ ಹಾಕಿದ್ದೇವೆ. ನಮಗೂ ಪ್ರತಿಭಟಿಸುವ ಹಕ್ಕಿದೆ. ರಾಜಕಾರಣಿಗಳೇ ನಮಗೆ ನ್ಯಾಯ ನೀಡಿ. ಹಣಕ್ಕಾಗಿ ಕೋಲಾರ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬಲಿ ನೀಡಬೇಡಿ ಎಂದು ಖಾರವಾಗಿ
ಸಂಘದ ಅಧ್ಯಕ್ಷೆ ರೋಹಿಣಿ ಮಾತನಾಡಿ, ಮಾಜಿ ರಾಜಕಾರಣಿಗಳ ಕುತಂತ್ರದಿಂದಾಗಿ ಮುಂದಿನ ಪೀಳಿಗೆ ಸಂಕಷ್ಟ ಅನುಭವಿಸುವಂತಾಗಿದೆ. ನಾವು ಈ ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಕೇಮಾರು ಶ್ರೀ ಸ್ವಾಮೀಜಿ, ಫಾದರ್ ಡ್ಯಾನಿಶ್ ಮೊರಾಸ್ ಪ್ರಭು, ಎಂ.ಜಿ. ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.




