ಈಕೆ ವೇದಿಕೆ ಹತ್ತಿ ಉಲಿದರೆ ಸಾಕು, ಬೆಳ್ಳಂಬೆಳಗ್ಗೆ ಹಕ್ಕಿಗಳು ಚಿಲಿಪಿಲಿಗುಟ್ಟಿದಂತೆ ಕೇಳುತ್ತದೆ. ಎಲ್ಲೂ ಅಡಚಣೆ ಇಲ್ಲದೆ ನಿರರ್ಗಳವಾಗಿ ಮಾತಾಡುತ್ತಾ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಈಕೆಯ ಅಮೋಘ ಪ್ರತಿಭೆಯನ್ನು ಕಂಡು ಸಭೀಕರು ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಾರೆ. ಯಾವುದೇ ಕಾರ್ಯಕ್ರಮವಾದರೂ ಸರಿ
ಅಂತಹಾ ಅಮೋಘ ಪ್ರತಿಭೆಯನ್ನು ಹೊಂದಿರುವ ಈಕೆಯ ಹೆಸರು ತೀರ್ಥಾ.
ಗುರುಪುರ ಕೈಕಂಬದಿಂದ ಕೆಲವು ಕಿಲೋ ಮೀಟರ್ ದೂರದಲ್ಲಿರುವ ಕಾಂಜಿಲಕೋಡಿ ನಿವಾಸಿಗಳಾದ ಕೃಷ್ಣಾ ಹಾಗೂ ಪ್ರೇಮಾ ಎಂಬವರ ಹೆಮ್ಮೆಯ ಸುಪುತ್ರಿ ತೀರ್ಥಾ ಬಾಲನಿರೂಪಕಿಯಾಗಿ ಹೆಸರು ಪಡೆದುಕೊಂಡಿರುವ ಮಗು.
ಈಕೆಗೆ ಅಬ್ಬಬ್ಬಾ ಅಂದರೆ 5 ವರ್ಷ. ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದನೇ ಇಯತ್ತೆಯಲ್ಲಿ ಕಲಿಯುತ್ತಿರುವ ತೀರ್ಥಾ, ಹುಟ್ಟು ಕಲಾವಿದೆ. ರಕ್ತಗತವಾಗಿ ಬಂದಿರುವ ಈಕೆಯ ಒಳಗಿರುವ ನಿರೂಪಕಿಯನ್ನು ಕಂಡುಹಿಡಿದವರು ಈಕೆಯ ಮಾತೆ ಪ್ರೇಮಾ.
ತೀರ್ಥಾ, ಅಂಗನವಾಡಿಯಲ್ಲಿ ಕಲಿಯುತ್ತಿರುವ ಸಂದರ್ಭ ಭಾಷಣ ಸ್ಪರ್ಧೆಗೆ ಸೇರಿ ಅಲ್ಲಿ ತನ್ನ ಪ್ರತಿಭೆಯನ್ನು ಮೆರೆದಳು. ಇದರಿಂದ ಹರ್ಷಗೊಂಡ ತಾಯಿ ಪ್ರೇಮಾ ಅವರು ಮಗಳನ್ನು ಸಾಕಷ್ಟು ಹರಿದುಂಬಿಸಿ ಭಾಷಣಕಾರಳಾಗಿ, ನಿರೂಪಕಿಯಾಗಿ ಸಜ್ಜುಗೊಳಿಸಿದರು.

ಸಭೀಕರು ಮಂತ್ರಮುಗ್ಧ:
ತೀರ್ಥಾ ವೇದಿಕೆ ಹತ್ತಿ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾಳೆಂದರೆ ಸಭೀಕರು ಮಂತ್ರಮುಗ್ಧಗೊಳ್ಳುತ್ತಾರೆ. ಈಕೆ ಮಾತಾಡುವುದು ಸಾಕ್ಷಾತ್ ಹಕ್ಕಿಗಳು ಚಲಿಪಿಲಿಗುಟ್ಟಿದಂತೆ ಕೇಳುತ್ತದೆ. ಯಾವುದೇ ಕಠಿಣ ವಾಕ್ಯವನ್ನು ಸಲೀಸಾಗಿ, ನಿರರ್ಗಳವಾಗಿ ಉಸುರಿಕೊಂಡು ಸೈ ಎನಿಸುತ್ತಾಳೆ.
ಸ್ಥಳೀಯವಾಗಿ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಹೆಸರು ಮಾಡಿದ್ದಾಳೆ. ಹಲವಾರು ಕಡೆಗಳಿಂದ ಬೇಡಿಕೆಗಳು ಬರುತ್ತದೆ. ಈಗಾಗಲೇ 25ರಿಂದ 30 ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿದ್ದು, ಈಕೆಯ ಪ್ರತಿಭೆಗೆ ಈಗಾಗಲೇ ಹಲವಾರು ಪ್ರಶಸ್ತಿಗಳೂ ಸಂದಿವೆ.
`ಪನೊಡಾ ಬೊಡ್ಚಾ’ದಲ್ಲಿ ಬಾಲ ನಟಿ
ಇಷ್ಟರವರೆಗೆ ಬಾಲನಿರೂಪಕಿಯಾಗಿ ಮಿಂಚಿದ್ದ ತೀರ್ಥ ಇನ್ನು ಮುಂದೆ ಬಾಲನಟಿಯಾಗಿ ಕಾಣಿಸಲಿದ್ದಾಳೆ. ಮಧು ಸುರತ್ಕಲ್ ನಿರ್ದೇಶನದ `ಪನೊಡಾ ಬೊಡ್ಚಾ’ ತುಳು ಚಿತ್ರದಲ್ಲಿ ಬಾಲನಟಿಯಾಗಿ, ನಾಯಕನಟ ಶಿವಧ್ವಜ್ ಅವರ ಮಗಳಾಗಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಲಿದ್ದಾಳೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಅಮೋಘವಾಗಿ ನಟಿಸಿ ಪಾತ್ರಕ್ಕೆ ತಕ್ಕಂತೆ ಜೀವ ತುಂಬಿದ್ದಾಳೆ ಎಂದು ನಿರ್ದೇಶಕರಿಂದ ಶಬ್ಬಾಸ್ಗಿರಿ ಪಡೆದುಕೊಂಡಿದ್ದಾಳೆ.
ಹಾಲುಗಲ್ಲದ ಕಂದ ತೀರ್ಥಾಳಿಗೆ ಸಂಘಸಂಸ್ಥೆಗಳಿಂದ ಪ್ರೋತ್ಸಾಹದ ಅಗತ್ಯವಿದೆ.
ಗಿರೀಶ್ ಮಳಲಿ



