ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾ.ಪಂ ವ್ಯಾಪ್ತಿಯ ತೊಡಂಕಿಲ ಎಂಬಲ್ಲಿ ಬಸ್ಸೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಣಾಮವಾಗಿ ಕಲ್ಲಮುಂಡ್ಕೂರು ಸರ್ವೊದಯ ಹೈಸ್ಕೂಲಿನ ಮಹಿಳಾ ಉದ್ಯೋಗಿ ಬಲಿಯಾದ ದುರ್ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಮೂಡುಬಿದಿರೆ ನಿವಾಸಿ ತೇಜಶ್ರೀ(33) ಮೃತಪಟ್ಟ ಮಹಿಳೆ. ಅವರು ಸೋಮವಾರ ಬೆಳಿಗ್ಗೆ ತಮ್ಮ ದ್ವಿಚಕ್ರವಾಹನದಲ್ಲಿ ಕರ್ತವ್ಯ ನಿಮಿತ್ತ ಕಲ್ಲಮುಂಡ್ಕೂರು ಹೈಸ್ಕೂಲ್ಗೆ ಹೊರಟಿದ್ದರು. ಬೆಳಿಗ್ಗೆ 8.30ರ ಸುಮಾರಿಗೆ ತೊಡಂಕಿಲ ಸೇತುವೆ ಬಳಿ ಇವರ ವಾಹನಕ್ಕೆ ಕಿನ್ನಿಗೋಳಿಯಿಂದ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದ್ದು ಆಗ ದ್ವಿಚಕ್ರ ವಾಹನ ರಸ್ತೆಯ ಎಡಬದಿಗೆ ಬಿತ್ತೆನ್ನಲಾಗಿದೆ. ಅದೇ ಸಮಯಕ್ಕೆ ಹಿಂಬದಿಯಿಂದ ಬರುತ್ತಿದ್ದ ಪಿಕ್ಅಪ್ ವಾಹನ ಮಹಿಳೆಗೆ ಡಿಕ್ಕಿ ಹೊಡೆದು ಮತ್ತಷ್ಟು ಗಾಯ ಮಾಡಿತು. ಅಪಘಾತ ನಡೆದ ಸಂದರ್ಭದಲ್ಲಿ ಮಹಿಳೆಯ ಹೆಲ್ಮೆಟ್ ತಲೆಯಿಂದ ಎಸೆಯಲ್ಪಟ್ಟ ಪರಿಣಾಮವಾಗಿ ತಲೆ ರಸ್ತೆಗೆ ಬಡಿದಿದೆ. ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಕಲ್ಲಮುಂಡ್ಕೂರು ಮತ್ತು ಬಸ್ ಏಜಂಟ್ ದೇವದಾಸ್ ಗಾಯಾಳುವನ್ನು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಆದರೆ ಆಳ್ವಾಸ್ನಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.


ಅಪಘಾತಕ್ಕೊಳಗಾಗಿ ಮಹಿಳೆ ಸುಮಾರು 15 ನಿಮಿಷ ರಸ್ತೆಯಲ್ಲಿ ಬಿದ್ದಿದ್ದರೂ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದೆ.
ತೇಜಶ್ರೀ ಅವರಿಗೆ ಮೂವರು ಹೆಣ್ಮಕ್ಕಳಿದ್ದು, ಮೊದಲ ಪುತ್ರಿ 7ನೇ ತರಗತಿ, ಎರಡನೇ ಪುತ್ರಿ 4ನೇ ತರಗತಿ ಹಾಗೂ ಮೂರನೇ ಪುತ್ರಿ ನಾಲ್ಕು ವರ್ಷದವಳಾಗಿದ್ದಾಳೆ. ಇವರ ಪತಿ ಸಂಪತ್ ಕುಮಾರ್ ವಿದೇಶಿ ಉದ್ಯೋಗಿ. ಜೈನ್ ಪಿ.ಯು ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಇವರು ಇತ್ತೀಚೆಗಷ್ಟೆ ಕಲ್ಲಮುಂಡ್ಕೂರು ಹೈಸ್ಕೂಲ್ಗೆ ಸರಕಾರದಿಂದ ನೇಮಕಗೊಂಡಿದ್ದರು. ಇವರು ಮೂಡುಬಿದಿರೆ ದೇವಾಡಿಗ ಮಹಿಳಾ ವೇದಿಕೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರ ಸಂಬಂಧಿಕರಾದ ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ, ಪುರಸಭಾ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ ಹಾಗೂ ದೇವಾಡಿಗರ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ಸಿ.ಮೊಯಿಲಿ ಸಂತಾಪ ವ್ಯಕ್ತಪಡಿಸಿದ್ದಾರೆ
