ಕೈಕಂಬ: ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣ ಶಸ್ತ್ರ ಹಾಗೂ ಶಾಸ್ತ್ರದ ಬಗ್ಗೆ ಉಲ್ಲೇಖಿಸಿದ್ದಾನೆ. ಅಧರ್ಮ ಹೆಚ್ಚಾದಾಗ ಅರ್ಜುನನಿಗೆ ಶಸ್ತ್ರ ನೀಡಿ ಧರ್ಮ ರಕ್ಷಣೆಗೆ ಪ್ರೇರೇಪಣೆ ನೀಡಿದವ ಶ್ರೀ ಕೃಷ್ಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಸೆ.6 ರಂದು ಭಾನುವಾರ ಬಡಕಬೈಲ್ ಕಲಾಶ್ರೀ ಮಿತ್ರಬಳಗದ ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಜನರು ಪಂಚಭೂತಗಳಲ್ಲಿ ದೇವರನ್ನು ಕಂಡಿದ್ದಾರೆ. ಇದು ಇಲ್ಲಿನ ವಿಶಿಷ್ಠತೆ. ಹಿಂದೂಗಳಿಗೆ ಹತ್ತಾರು ಧಾರ್ಮಿಕ ಆಚರಣೆಗಳಿವೆ ಇದು ಇಲ್ಲಿನ ಸಂಸ್ಕೃತಿ. ಸಂಸ್ಕೃತಿ, ವಿಶಿಷ್ಠತೆಯ ಬಗೆಗಿನ ಧಾರ್ಮಿಕ ಸಾಂಸ್ಕೃತಿಕ ಆಚರಣೆ ಈ ಶ್ರೀಕೃಷ್ಣ ಜನ್ಮಾಷ್ಟಮಿಯಾಗಿದೆ. ಈ ದಿನದಂದು ಮಕ್ಕಳಿಗೆ ಶ್ರೀಕೃಷ್ಣನ ವೇಷ ಧರಿಸಲಾಗುತ್ತದೆ. ಶ್ರೀಕೃಷ್ಣ ತತ್ವ ಸಿದ್ದಾಂತ ಮಕ್ಕಳಲ್ಲಿ ಮೈಗೂಡಲಿ ಎಂಬ ಉದ್ದೇಶ ಇದರಲ್ಲಿದೆ. ಮನೆ-ಮನಗಳಲ್ಲಿ ಶ್ರೀ ಕೃಷ್ಣ ನೆಲೆಯಾಗಲಿ ಎಂದು ನಳಿನ್ ಕುಮಾರ್ ಕಟೀಲ್ ನುಡಿದರು.
ಬಡಕಬೈಲ್ ಬಾದಮಿಕಟ್ಟೆ ಪರಿಸರದ ಪ್ರದೇಶಕ್ಕೆ ಕೃಷ್ಣ ನಗರ ಎಂಬ ಹೆಸರಿನ ನಾಮಪಲಕವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಿದರು. ಹಾಗೂ ಪುದು ಜಿಲ್ಲಾ ಪಂ.ಸದಸ್ಯೆ ಜಯಶ್ರೀ ಕೆ ಎ ಅವರನ್ನು ಕಲಾಶ್ರೀ ಮಿತ್ರಬಳಗದ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಬಂಟ್ವಾಳ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಕೊಳ್ತಿಗೆ ನಾರಾಯಣ ಗೌಡ ಮಾಡಿದರು. ಮುಖ್ಯ ಅತಿಥಿಗಳಾಗಿ ಪುದು ಜಿಲ್ಲಾ ಪಂ. ಸದಸ್ಯೆ ಜಯಶ್ರೀ ಕೆ.ಎ, ಅಮ್ಮುಂಜೆ ಗ್ರಾ.ಪಂ.ಪಿಡಿಒ ನವೀನ್ ಭಂಡಾರಿ, ಕರಿಯಂಗಳ ಗ್ರಾ.ಪಂ. ಸದಸ್ಯ ಸುರೇಶ್ ಮಣಿಕಂಠಪುರ, ಉದ್ಯಮಿಗಳಾದ ಭುವನೇಶ್ ಪಚ್ಚಿನಡ್ಕ, ಜನಾರ್ದನ ಶೆಟ್ಟಿ ಪುಂಚಮೆ, ಕಲಾಶ್ರೀ ಮಿತ್ರಬಳಗದ ಅಧ್ಯಕ್ಷ ಅರುಣ್ ಕುಮಾರ್ ಅಯೆರೆಮಾರ್, ಧನಲಕ್ಷ್ಮೀ ಆಯೆರೆಮಾರ್ ಉಪಸ್ಥಿತರಿದ್ದರು.
ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ, ದೇವ್ದಾಸ್ ಅಯೆರೆಮಾರ್ ವಂದಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ದಶಮಾನೋತ್ಸವದ ಪ್ರಯುಕ್ತ ಯಕ್ಷ-ಗಾನ-ವೈಭವ, ಸಂಚರಾ ಆರ್ಕೆ ಸ್ಟ್ರಾ ಉಪ್ಪಿನಂಗಡಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಜರಗಿತು















