ಬಂಟ್ವಾಳ: ರಾಜ್ಯದಲ್ಲಿ ರೈತರ ಆತ್ಮಹತ್ಯೆಯನ್ನು ತಡೆದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ಆ.23ರಿಂದ ಸೆ. 13ರವರೆಗೆ ರಾಜ್ಯ ಬಿಜೆಪಿ ವತಿಯಿಂದ ಚೈತನ್ಯ ಯಾತ್ರೆ ನಡೆಯಲಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಬುಧವಾರ ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚೈತನ್ಯ ಯಾತ್ರೆ ಸೆ. 12ರಂದು ದ.ಕ. ಜಿಲ್ಲೆಗೆ ಆಗಮಿಸಲಿದ್ದು ಬಿಜೆಪಿ ರಾಜ್ಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಪ್ರಹ್ಲಾದ್ ಜೋಷಿ, ಅನಂತ ಕುಮಾರ್, ಈಶ್ವರಪ್ಪ, ಜಗದೀಶ್ ಶೆಟ್ಟರ್ ಮೊದಲಾದ ನಾಯಕರು ಯಾತ್ರೆಯಲ್ಲಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.


ಸಂಸದರೇ ಜನರ ಬಳಿಗೆ:
ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಲು ಮಂಗಳೂರಿಗೆ ಬರಬೇಕಾಗಿಲ್ಲ. ಬದಲಾಗಿ ನಾನೇ ಜನರ ಬಳಿಗೆ ಬರುತ್ತೇನೆ. ಈ ನಿಟ್ಟಿನಲ್ಲಿ ಪ್ರತೀ ತಿಂಗಳಿನ ಒಂದು ದಿನ ಪಕ್ಷದ ಕಚೇರಿಯಲ್ಲಿ 3 ಗಂಟೆಗಳ ಕಾಲ ಸಾರ್ವಜನಿಕರಿಗೆ ಲಭ್ಯವಿದ್ದು ಸಾರ್ವಜನಿಕರು ಅಹವಾಲುಗಳನ್ನು ಈ ಸಂದರ್ಭ ಸಲ್ಲಿಸ ಬಹುದಾಗಿದೆ ಎಂದು ನಳಿನ್ ಕುಮಾರ್ ತಿಳಿಸಿದರು. ರಸ್ತೆ ಅಭಿವೃದ್ದಿ, ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿ ಹಲವು ಅಹವಾಲುಗಳು ಸಾರ್ವಜನಿಕರಿಂದ ಬಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
ಸರ್ವೆಸ್ ರಸ್ತೆ ಅಭಿವೃದ್ದಿಗೆ ಅನುದಾನ:
ಬಿ.ಸಿ.ರೋಡಿನಿಂದ ಸುರತ್ಕಲ್ವರಗೆ ಸರ್ವೆಸ್ ರಸ್ತೆ ಅಭಿವೃದ್ದಿಗೆ 24 ಕೋಟಿ ರುಪಾಯಿ ಅನುದಾನ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವುದಾಗಿ ತಿಳಿಸಿದರು. ಶಿರಾಡಿ ಕಾಮಗಾರಿ ಮುಗಿದಿದ್ದು ವಾಹನ ಸಂಚಾರ ಆರಂಭಗೊಂಡಿದೆ. ಬಿ.ಸಿ.ರೋಡು – ಹಾಸನ ಚತುಷ್ಪಥ ಹೆದ್ದರಿಯ ಅಡ್ಡಹೊಳೆವರೆಗಿನ ಕಾಮಗಾರಿಗೆ ಟೆಂಡರ್ ಆಗಿದ್ದು, ದಶಂಬರ್ನಲ್ಲಿ ಕೆಲಸ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಬಂಟ್ವಾಳ ಕ್ಷೇತ್ರಕ್ಕೆ ದೀನ್ದಯಾಳ್ ವಿದ್ಯದ್ದೀಕರಣ ಯೋಜನೆಯಲ್ಲಿ ಸಬ್ಸ್ಟೇಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸಿಆರ್ಎಫ್ ಯೋಜನೆ, ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ, ಹಾಗೂ ಎನ್ಆರ್ಇಜಿ ಯೋಜನೆಯಡಿ ಕೇಂದ್ರ ಸರ್ಕಾರದ ಅತ್ಯಧಿಕ ಅನುದಾನ ಬಂಟ್ವಾಳ ಕ್ಷೇತ್ರಕ್ಕೆ ಮಂಜೂರಾಗಿದೆ ಎಂದು ನಳಿನ್ ಕುಮಾರ್ ತಿಳಿಸಿದರು.
ರಾಜ್ಯ ಸರ್ಕಾರ ಚುನಾವಣೆಗೆ ಸೀಮಿತ: (ಬಾಕ್ಸ್)
ರಾಜ್ಯ ಸರ್ಕಾರ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಬಿಬಿಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಗಂಭೀರ ಆರೋಪ ಮಾಡಿದ್ದಾರೆ. ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸ ಬೇಕಿತ್ತು. ಆದರೆ ರಾಜ್ಯ ಸರ್ಕಾರ ಈವರೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸದೇ ಬೇಜವಬ್ದಾರಿತನವನ್ನು ಪ್ರದರ್ಶಿ ಸಿದೆ ಎಂದು ದೂರಿದರು. ಕಸ್ತೂರಿ ರಂಗನ್ ವರದಿ ಜಾರಿಯ ಬಗ್ಗೆ ಕೇರಳ, ಗೋವ, ಗುಜರಾತ್ ಮೊದಲಾದ ರಾಜ್ಯಗಳು ವರದಿ ನೀಡಿದ್ದರೂ ಕರ್ನಾಟಕ ಸರ್ಕಾರ ಯಾವುದೇ ವರದಿ ಸಲ್ಲಿಸಿಲ್ಲ. ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಈ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ. ಸೆ. 9ಕ್ಕೆ ಕೇಂದ್ರ ಸರ್ಕಾರ ಈ ಬಗ್ಗೆ ಸವೋಚ್ಚನ್ಯಾಯಲಯದ ಮುಂದೆ ಹಾಜರಾಗಬೇಕಿದ್ದು ಕಸ್ತೂರಿ ರಂಗನ್ ವರದಿಯ ಅಡ್ಡ ಪರಿಣಾಮ ರಾಜ್ಯದ ಮೇಲೆ ಉಂಟಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆಪಾದಿಸಿದರು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿ.ಆನಂದ, ದೇವದಾಸ ಶೆಟ್ಟಿ, ದಿನೇಶ್ ಭಂಡಾರಿ, ರಾಮದಾಸ ಬಂಟ್ವಾಳ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಆನಂದ ಶಂಭೂರು, ದೇವಪ್ಪ ಪೂಜಾರಿ, ಗೋವಿಂದ ಪ್ರಭು ಮತ್ತಿತರರು ಹಾಜರಿದ್ದರು.

