ಮುಂಬಯಿ, ಆ.08: ಉಪನಗರ ಥಾಣೆ ಪಶ್ಚಿಮದ ನೌಪಾಡ ಪರಿಸರದ ಬಿ-ಕೆಬಿನ್ ಪರಿಸರದ ಕೃಷ್ಣ ನಿವಾಸ ಕಟ್ಟಡವು ಇಂದಿಲ್ಲಿ ಮುಂಜಾನೆ ಸುಮಾರು 2.50ರ ವೇಳೆಗೆ ಕುಸಿದು ಬಿದ್ದಿದ್ದು ಬಂಟ್ವಾಳ ಮೂಲದ 5 ಜನರೊಂದಿಗೆ ನವವಿವಾಹಿತೆ ರಶ್ಮೀ ಭಟ್ ಸೇರಿದಂತೆ ಒಟ್ಟು 12 ಜನರು ದುರ್ಮರಣಕ್ಕೀಡಾಗಿದ್ದಾರೆ.
ನೌಪಾಡ ಪರಿಸರದ ಪಗ್ಡಿಚಾಳ್ನಲ್ಲಿನ ಸುಮಾರು 60 ವರ್ಷಗಳ ಕೃಷ್ಣ ನಿವಾಸ ಹೆಸರಿನ ಮೂರು ಅಂತಸ್ತಿನ ಹಳೆ ಕಟ್ಟಡ ಇದಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದು ವಾಸಕ್ಕೆ ಅಯೋಗ್ಯ ಮತ್ತು ತೀವ್ರ ಅಪಾಯಕಾರಿ ಕಟ್ಟಡವಾಗಿತ್ತು. ಥಾಣೆ ಮುನ್ಸಿಪಾಲ್ ಕಾರ್ಪೋರೇಶನ್ ಮತ್ತು ವಾರ್ಡ್ ಅಧಿಕಾರಿಗಳು ಕಟ್ಟಡ ಮಾಲಿಕರಿಗೆ ನೋಟಿಸ್ ನೀಡಿದ್ದರೂ ನಿವಾಸಿಗಳು ವಾಸ್ತವ್ಯ ತೆರವು ಮಾಡದಿರುವುದೇ ಘಟನೆಗೆ ಮೂಲ ಕಾರಣ ಎಂದು ಸ್ಥಾನೀಯರು ಆರೋಪಿಸಿದ್ದಾರೆ.
ಕಟ್ಟಡ ಮಾಲೀಕರು ಮತ್ತು ಬಿಲ್ಡರ್ ಮಧ್ಯೆ ತಕರಾರುವಿದ್ದು ವಿವಾದ ವ್ಯಾಜ್ಯ ಕೋರ್ಟ್ನ ಲ್ಲಿದೆ ಎನ್ನಲಾಗಿದೆ. ಇದೀಗಲೇ 12 ಮೃತದೇಹಗಳನ್ನು ಗುರುತಿಸಲಾಗಿದ್ದು, 10 ಜನರನ್ನು ರಕ್ಷಿಸಿ ಸ್ಥಳಿಯ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಅವರಲ್ಲಿ 7 ಜನರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಆಗ್ನಿಶಾಮಕ ದಳದ ಮತ್ತು ಸ್ಥಾನೀಯ ಸಮಾಜ ಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿದ್ದು ಥಾಣೆ ಪೋಲಿಸ್ ಅಧಿಕಾರಿಗಳು ಕೇಸು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಮೃತರಲ್ಲಿ ಐವರು ಬಂಟ್ವಾಳ ಮೂಲದವರು:
ಕಟ್ಟಡದಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದ ಹಿಂಭಾಗದ ಮೂಲ ನಿವಾಸಿಗಳು ಸುಮಾರು ನಾಲ್ಕು ದಶಕಗಳಿಂದ ಇಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಆ ಪಯ್ಕಿ ರಾಮಚಂದ್ರ ಪಾಂಡುರಂಗ ಭಟ್ (62.), ಮೀರಾ ರಾಮಚಂದ್ರ ಭಟ್ (58.), ರಶ್ಮೀ ಆರ್.ಭಟ್ (25.), ರುಚಿತ ಆರ್.ಭಟ್ (23.) ಮತ್ತು ಸುಭ್ರಾಯ ಭಟ್ (56.) ಮೃತಪಟ್ಟ ದುರ್ದೇವಿಗಳು. ಸರ್ಕಾರ ಮತ್ತು ಮಹಾರಾಷ್ಟ್ರ ಶಾಸನವು ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿದ್ದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮಚಂದ್ರ ಭಟ್ ಓರ್ವ ಅಸಮಾನ್ಯ ಸಮಾಜ ಸೇವಕರಾಗಿದ್ದು, ಕ್ಯಾಟರರ್ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದರು. ಜಿಎಸ್ಬಿ ಸೇವಾ ಸಮಾಜ ಥಾಣೆ ಇದರ ಸಕ್ರೀಯ ಕಾರ್ಯಕರ್ತರಾಗಿ ಜವಾನರೆಣಿಸಿದ್ದರು. ಅವರು ಇಬ್ಬರು ಸುಪುತ್ರಿಯರನ್ನು ಹೊಂದಿದ್ದು ರಶ್ಮೀ ಭಟ್ ಅವರು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಗುಜರಾತಿ ಮೂಲದ ಕರಣ್ ಮಾಂಗೇ ಅವರೊಂದಿಗೆ ವಿವಾಹವಾಗಿದ್ದರು. ದುಬಾಯಿಯಲ್ಲಿ ವೃತ್ತಿನಿರತ ಪತಿ ಕರಣ್ ಜೊತೆ ದುಬಾಯಿಗೆ ತೆರಳಿದ್ದು, 2 ದಿನಗಳ ಹಿಂದೆಯಷ್ಟೇ ವಾಪಸ್ಸಾಗಿದ್ದರು. ರುಚಿತಾ ಭಟ್ ಅವಿವಾಹಿತರಾಗಿದ್ದು ಪಾಲಕರ ಜೊತೆಯೇ ವಾಸವಾಗಿದ್ದು ವಿಧಿಯಲೀಲೆಯಂತೆ ಹೆತ್ತರವ ಜೊತೆಯೇ ಸಾವನ್ನಪ್ಪಿದ್ದಾರೆ. ರಾಮಚಂದ್ರ ಸಹೋದರ ಸುಭ್ರಾಯ ಭಟ್ ಮುಂಬಯಿಯಲ್ಲಿನ ಗಲ್ಫ್ಆಯಿಲ್ ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದು, ಅಣ್ಣನ ಮನೆಯಲ್ಲಿ ವಾಸವಾಗಿದ್ದು ಘಟನೆಯಿಂದ ಇಡೀ ಪರಿಸರವೇ ಸ್ಮಶಾನಮೌವನ್ನಾವರಿಸಿದೆ.
ಮೃತದೇಹಗಳನ್ನು ಸ್ಥಾನೀಯ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ರಾಮಚಂದ್ರ ಭಟ್ ಅವರ ಮೂವರು ಸಹೋದರರಾದ ಸದಾಶಿವ ಭಟ್, ಪ್ರಮೋದ್ ಭಟ್ (ಬಂಟ್ವಾಳ) ಮತ್ತು ಶಂಕರಿ ಪ್ರಮೋದ್ ಭಟ್ (ನಾದಿನಿ), ಪದ್ಮನಾಭ ಭಟ್ (ಬಿ.ಸಿ ರೋಡು ಕೈಕಂಬದಲ್ಲಿನ ವಿನಾಯಕ ರೇಡಿಯೋ ಮಾಲೀಕ) ಮತ್ತು ವಾಮನ ಭಟ್ (ಹೈದರಾಬಾದ್) ನಗರಕ್ಕಾಗಮಿಸಿದ್ದು, ಅವರೆಲ್ಲರ ನಿರ್ದಾರದಂತೆ ಪಾರ್ಥೀವ ಶರೀರಗಳ ಅಂತ್ಯಸಂಸ್ಕಾರ ಥಾಣೆ ಅಲ್ಲಿನ ಸ್ಮಶಾನಭೂಮಿಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ರಾಮಚಂದ್ರ ಪಿ.ಭಟ್ ಇಡೀ ಪರಿವಾರವು ಕಟ್ಟಾ ಧರ್ಮಶ್ರದ್ಧಾಳುಗಳಾಗಿದ್ದು, ದೇವರ ಅಲಂಕಾರ ಗೈಯುವಲ್ಲಿ ನಿಪುಣರಾಗಿದ್ದರು. ಸುಮಾರು 23 ಕೋಟಿರೂಪಾಯಿ ಮೌಲ್ಯದ ಸ್ವರ್ಣಾಭರಣ ಭೂಷಿತವಾಗಿ ಪೂಜಿಸಲ್ಪಡುವ ಜಿಎಸ್ಬಿ ಸೇವಾ ಮಂಡಳ್ ಸಯಾನ್ ಸಂಭ್ರಮಿಸುವ ಕಿಂಗ್ಸರ್ಕಲ್ ಪ್ರಸಿದ್ಧಿಯ ವಾರ್ಷಿಕ ಗಣೇಶೋತ್ಸವದಲ್ಲಿ ಭಕ್ತಿಪೂರ್ವಕವಾಗಿ ಸಕ್ರೀಯ ಸೇವಾಳುವಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ ಭಟ್ ಅವರ ಅಗಲಿಕೆ ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ. ಮಾತ್ರವಲ್ಲದೆ ಅವರ ಸ್ಥಾನವನ್ನು ಇನ್ಯಾರೂ ತುಂಬಲಸಾಧ್ಯ ಎಂದು ಜಿಎಸ್ಬಿ ಸೇವಾ ಮಂಡಳ್ ಸಯಾನ್ ಗಣೇಶೋತ್ಸವ ಸಮಿತಿ ಸಂಚಾಲಕ ಸತೀಶ್ ರಾಮ ನಾಯಕ್ ಮಾಟುಂಗಾ ಮತ್ತು ಮೃತರ ದೊಡ್ಡಪ್ಪ ಹಾಗೂ ಗಣೇಶೋತ್ಸವದ ಪ್ರಧಾನ ಆರ್ಚಕ ಕೃಷ್ಣ ಭಟ್ ತಿಳಿಸಿದ್ದು ತೀವ್ರ ಸಂತಾಪ ಸೂಚಿಸಿದ್ದಾರೆ. ಸುದ್ದಿ ತಿಳಿದಾಕ್ಷಣ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜಿಎಸ್ಬಿ ಬಂಧುಗಳು ಅಂತಿಮ ನಮನ ಸಲ್ಲಿಸಿದ್ದಾರೆ.
ಜಿಎಸ್ಬಿ ಸೇವಾ ಮಂಡಳ್ ಸಯಾನ್ ಇದರ ಅಧ್ಯಕ್ಷ ರಾಘವೇಂದ್ರ ಜಿ.ಭಟ್, ಉಪಾಧ್ಯಕ್ಷ ರಮಾನಾಥ ಕಿಣಿ, ಗೌ| ಕಾರ್ಯದರ್ಶಿ ರಮೇಶ್ ಭಂಡಾರ್ಕರ್, ಖಜಾಂಜಿ ಸುರೇಶ್ ಭಟ್, ಜತೆ ಕಾರ್ಯದರ್ಶಿ ಪ್ರಶಾಂತ್ ಪುರಾಣಿಕ್, ಜತೆ ಕೋಶಾಧಿಕಾರಿ ಪ್ರಶಾಂತ್ ಮಲ್ಯ, ಗಣೇಶೋತ್ಸವ ಸಮಿತಿ ಸಂಚಾಲಕ ಡಾ| ಭುಜಂಗ ಪೈ, ಜತೆ ಸಂಚಾಲಕ ಜಿ.ಡಿ.ರಾವ್ ಮತ್ತಿತರರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಚಿತ್ರ ವರದಿ : ರೋನ್ಸ್ ಬಂಟ್ವಾಳ್





