ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಮಂಗಳೂರು-ಬೆಂಗಳೂರು ಮತ್ತು ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪ್ರಮುಖ ವೃತ್ತಕ್ಕೆ ಈಗಾಗಲೇ ‘ಸ್ವಾಮಿ ವಿವೇಕಾನಂದ ವೃತ್ತ’ ನಾಮಕರಣಗೊಳಿಸುವಂತೆ ಇಲ್ಲಿನ ಪುರಸಭೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ನಿರ್ಣಯ ಕೈಗೊಂಡಿದ್ದರೂ ವಿವಿಧ ಹೆಸರು ನಾಮಕರಣಗೊಳಿಸುವಂತೆ ಮನವಿ ಸಲ್ಲಿಕೆ ಪ್ರಕ್ರಿಯೆ ಮತ್ತೆ ಮುಂದುವರಿದಿದೆ.
ಕಳೆದ 2013ರ ಜನವರಿ 23 ರಂದು ಅಂದಿನ ಪುರಸಭಾಧ್ಯಕ್ಷ ಬಿ.ದಿನೇಶ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿ.ಸಿರೋಡಿನ ಪ್ರಮುಖ ವೃತ್ತಕ್ಕೆ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಪ್ರಯುಕ್ತ ‘ ಸ್ವಾಮಿ ವಿವೇಕಾನಂದ ವೃತ್ತ’ ಎಂದು ನಾಮಕರಣಗೊಳಿಸಿ ಸರ್ವಾನುಮತದ ನಿರ್ಣಯ ಕೈಗೊಂಡಿತ್ತು.
ಕಳೆದ 2013ರಲ್ಲಿ ದೇಶದಾದ್ಯಂತ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಆಚರಿಸಲಾಗಿದ್ದು, ಇದಕ್ಕಾಗಿ ಈ ವೃತ್ತಕ್ಕೆ ‘ಸ್ವಾಮಿ ವಿವೇಕಾನಂದ ವೃತ್ತ’ ಎಂದು ನಾಮಕರಣಗೊಳಿಸುವಂತೆ ಸ್ಥಳೀಯ ನಾಗರಿಕರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಿರ್ಣಯ (ನಿರ್ಣಯ ಸಂಖ್ಯೆ 495) ಕೈಗೊಳ್ಳಲಾಗಿದೆ ಎಂದು ಪುರಸಭೆ ಸ್ಪಷ್ಟಪಡಿಸಿತ್ತು.
ಇದೀಗ ಬಿ.ಸಿರೋಡು-ಸುರತ್ಕಲ್ ಚತುಷ್ಪಥ ರಸ್ತೆ, ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಪುನರ್ ನಿಮರ್ಾಣಗೊಳ್ಳುತ್ತಿರುವ ಹೊಸ ಕಿರು ವೃತ್ತಕ್ಕೆ ನಾಮಕರಣಕ್ಕಾಗಿ ಬೇರೆ ಬೇರೆ ಹೆಸರುಗಳ ಬಗ್ಗೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಕೆಯಾಗುತ್ತಿದೆ.
ಮನವಿ ಸಾಲು:
ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘವು ಈ ವೃತ್ತಕ್ಕೆ ‘ಬ್ರಹ್ಮಶ್ರೀ ನಾರಾಯಣ ಗುರು’ ನಾಮಕರಣಗೊಳಿಸುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿದೆ. ಇತ್ತೀಚೆಗಷ್ಟೇ ಬಿ.ಸಿ.ರೋಡ್ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಸಂಸದ ನಳಿನ್ ಕುಮಾರ್ ಇವರಿಗೆ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ನೇತೃತ್ವದ ಬಿಜೆಪಿ ಮುಖಂಡರ ನಿಯೋಗವೊಂದು ಭೇಟಿ ಮಾಡಿ ‘ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ ನಾಮಕರಣಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಇದರಿಂದಾಗಿ ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಕೈಗೊಂಡ ‘ಸ್ವಾಮಿ ವಿವೇಕಾನಂದ ವೃತ್ತ’ ನಾಮಕರಣದ ನಿರ್ಣಯ ಬಗ್ಗೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.
ಈ ನಡುವೆ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ‘ಮಹಾತ್ಮ ಗಾಂಧೀಜಿ ವೃತ್ತ’ ನಾಮಕರಣಕ್ಕೆ ಬೇಡಿಕೆ ಸಲ್ಲಿಸಿದ್ದರೆ, ಎಡಪಕ್ಷಗಳು ಮಾಜಿ ಶಾಸಕ ದಿ.ಬಿ.ವಿ.ಕಕ್ಕಿಲ್ಲಾಯ ಇವರ ಹೆಸರನ್ನು ನಾಮಕರಣಗೊಳಿಸಬೇಕು ಎನ್ನುತ್ತಿದೆ. ಇನ್ನೊಂದೆಡೆ ಬಂಟ್ವಾಳ ತಾಲ್ಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘವು ‘ಡಾ.ಅಂಬೇಡ್ಕರ್ ವೃತ್ತ’ ಎಂದು ನಾಮಕರಣಗೊಳಿಸುವಂತೆ ಪುರಸಭೆಗೆ ಮನವಿ ಸಲ್ಲಿಸಿದೆ.
ಒಟ್ಟಿನಲ್ಲಿ ವೃತ್ತ ನಾಮಕರಣಕ್ಕೆ ವಿವಿಧ ಹೆಸರಿನ ಬೇಡಿಕೆ ಬಗ್ಗೆ ಮನವಿ ಸಲ್ಲಿಕೆ ಪ್ರಕ್ರಿಯೆ ಮಾತ್ರ ಇನ್ನೂ ಮುಂದುರಿದಿದ್ದು, ಈ ಬಗ್ಗೆ ಇದೇ 30ರಂದು ನಡೆಯಲಿರುವ ಕಾಂಗ್ರೆಸ್ ಆಡಳಿತದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಮತ್ತೆ ಚರ್ಚೆಗೆ ಬರುವ ನಿರೀಕ್ಷೆಯಿದೆ ಎನ್ನುತ್ತಿದ್ದಾರೆ ಪುರಸಭಾ ಸದಸ್ಯರು.
-ಮೋಹನ್ ಕೆ.ಶ್ರೀಯಾನ್ ರಾಯಿ



