ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಕಳೆದ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಗೆ ಭೂ ಕುಸಿತ ಉಂಟಾಗಿ ಇಲ್ಲಿನ ಎರಡು ಮನೆಗಳು ಕುಸಿತದ ಭೀತಿ ಎದುರಿಸುತ್ತಿದೆ.
ಇಲ್ಲಿನ ನಿವಾಸಿ ಹರೀಶ ಪೂಜಾರಿ ಎಂಬವರಿಗೆ ಸರ್ಕಾರದಿಂದ ಮಂಜೂರಾದ ನಿವೇಶನದಲ್ಲಿ ನಿರ್ಮಾ ಣಗೊಳ್ಳುತ್ತಿರುವ ಮನೆಯು ಗೋಡೆ ಹಂತದಲ್ಲಿದ್ದು, ಕುಸಿತದ ಭೀತಿ ಎದುರಿಸುತ್ತಿದೆ. ಇವರ ಮನೆ ಪಕ್ಕದಲ್ಲಿ ಭೂ ಕುಸಿತ ಉಂಟಾಗಿ ಇಲ್ಲಿನ ನಿವಾಸಿಯೊಬ್ಬರ ಬಾವಿ ಮತ್ತು ನೀರು ಮೇಲೆತ್ತುವ ಪಂಪ್ ಕೂಡ ಮಣ್ಣಿನಡಿ ಸಿಲುಕಿಕೊಂಡಿತ್ತು ಎನ್ನಲಾಗಿದೆ. ಇದೀಗ ಇಲ್ಲಿನ ಇನ್ನೊಂದು ಹೆಂಚಿನ ಮನೆ ಕೂಡಾ ಕುಸಿತದ ಭೀತಿ ಎದುರಿಸುತ್ತಿದೆ.
ಈಗಾಗಲೇ ರಾಯಿ ಗ್ರಾಮಕರಣಿಕರು ಸ್ಥಳ ಪರಿಶೀಲನೆ ನಡೆಸಿ ಕಂದಾಯ ಇಲಾಖೆಗೆ ಕಡತ ಸಲ್ಲಿಸಿದ್ದರೂ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಇದಕ್ಕಾಗಿ ಕೂಡಲೇ ಜಿಲ್ಲಾಡಳಿತವು ಪ್ರಾಕೃತಿಕ ವಿಕೋಪ ಯೋಜನೆಯಡಿ ಇಲ್ಲಿನ ಮನೆಗಳಿಗೆ ಸೂಕ್ತ ಪರಿಹಾರಧನ ನೀಡುವುದರ ಜೊತೆಗೆ ಭೂ ಕುಸಿತ ತಡೆಯಲು ತಡೆಗೋಡೆ ನಿಮರ್ಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

