ಬಂಟ್ವಾಳ; : ಅಧ್ಯಯನ ಶೀಲತೆ ಇಲ್ಲದೆ ಪತ್ರಕರ್ತನಾಗಲು ಅಸಾಧ್ಯ, ಅಂಕಿ ಅಂಶ, ನಿಖರಮಾಹಿತಿಗಳಿಲ್ಲದ ವರದಿಗಾರಿಕೆ ನಿಷ್ಪ್ರಯೋಜಕ. ಇನ್ನೊಬರ ನೋವು ನಲಿವುಗಳನ್ನು ಗುರುತಿಸುವವನು ನಿಜವಾದ ಪತ್ರಕರ್ತ, ಸಂತಸದ ಮೂಲಕ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವವನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದು ಉದಯವಾಣಿ ಮಂಗಳೂರು ಬ್ಯೂರೋಚೀಫ್ ಮನೋಹರ ಪ್ರಸಾದ್ ಹೇಳಿದರು.

ಅವರುಬುಧವಾರ ಮಾಧ್ಯಮ ಸಮಾವೇಶ 2015ರಲ್ಲಿ ನಡೆದ`ಮಾಧ್ಯಮ: ಸಾಮಾಜಿಕ ಬದ್ಧತೆ- ಭದ್ರತೆ’ ವಿಚಾರ ಸಂಕಿರಣದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ ಪತ್ರಕರ್ತನಿಗೆ ಸಮಾಜದ ಅಂಕು ಡೊಂಕುಗಳನ್ನು ನಿರ್ಭಯವಾಗಿ ಹೇಳುವ ಅವಕಾಶ ಎಷ್ಟಿದೆ ಎಂಬ ಪ್ರಶ್ನೆಇದೆ. ಪ್ರಸ್ತುತ ಪತ್ರಕರ್ತನ ಬದುಕು ಮರಕೋತಿಯಾಟದ ಮದ್ಯೆ ಸಿಲುಕಿ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯುವಂತೆ ಮಾಡುತ್ತಿದೆ.ಯಾರ ಬದ್ದತೆಗಾಗಿ ಬರೆಯಬೇಕಾಗಿದೆ ಎಂಬ ಜಿಜ್ಞಾಸೆ ಪತ್ರಕರ್ತನಲ್ಲಿದೆ ಎಂದು ತಿಳಿಸಿದರು.
ವಿಜಯಕರ್ನಾಟಕದ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್ ಮಾತನಾಡಿ ಹೊಟ್ಟೆಪ್ಪಾಡಿಗಾಗಿ ಪತ್ರಿಕೆಯನ್ನು ನಂಬಿ ಬಂದ ಪತ್ರಕರ್ತ ಹಲವು ಕಟ್ಟುಪಾಡುಗಳ ಮಧ್ಯೆ ಇರಬೇಕಾದ ಪರಿಸ್ಥಿತಿಯಿದೆ. ಪತ್ರಿಕಾ ಕ್ಷೇತ್ರದೊಳಗೆ ಅಭದ್ರತೆ ಕಾಡುವುದು ಸಹಜವಾಗಿದೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಎತ್ತಿಹಿಡಿಯುವ ಪತ್ರಕರ್ತ ಜನರಿಂದ ಗೌರವ ಪಡೆಯುತ್ತಾನೆ. ಪತ್ರಿಕಾ ಸಂಸ್ಥೆಗಳು ಕಿತ್ತಾಡುತ್ತಿದೆ ಹೊರತಾಗಿ ಪತ್ರಕರ್ತರ ನಡುವೆ ಕಿತ್ತಾಟವಿಲ್ಲ ಎಂದು ಹೇಳಿದರು.
ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ, ಲೇಖಕ ಡಾ| ಸದಾನಂದ ಪೆರ್ಲ ಮಾತನಾಡಿ ಅತಂತ್ರ – ಸ್ವತಂತ್ರಗಳ ಮಧ್ಯೆ ಬದುಕುವ ಪರಿಸ್ಥಿತಿ ಪತ್ರಕರ್ತನದ್ದಾಗಿದೆ.ಪತ್ರಕರ್ತ ಸಮಾಜವನ್ನು ಎದುರು ಹಾಕಿಕೊಳ್ಳುವ ಬದಲು ಅಭಿವೃದ್ಧಿಗೆ ಪೂರಕಾವದ ಸುದ್ದಿ ಮಾಡಿದಾಗ ಸಮಾಜ ಆತನನ್ನು ಗುರುತಿಸುತ್ತದೆ. ಬಂಡವಾಳ ಶಾಹಿಗಳ ಕೈಯಲ್ಲಿ ಪ್ರತಿಕೋಧ್ಯಮ ನಡೆಯುತ್ತಿರುವುದು ವಾಸ್ತವ ಸ್ಥಿತಿಯಾಗಿದೆ ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಮಾತನಾಡಿ ಉತ್ತಮ ಬರವಣಿಗೆಯಿಂದ ವ್ಯವಸ್ಥೆಯ ಬದಲಾವಣೆ ಮಾಡಬಹುದಾಗಿದೆ.ಪುತ್ತೂರು ಮಾರುಕಟ್ಟೆಯ, ವಿಟ್ಲ ರಸ್ತೆ ಅಗಲೀಕರಣದ ವಿಚಾರದಲ್ಲಿ ಪತ್ರಕರ್ತರು ಸಾಕಷ್ಟು ವರದಿಗಳನ್ನು ಮಾಡಿ ತಮ್ಮ ಬದ್ದತೆಯನ್ನು ತೋರಿಸಿದ್ದಾರೆಂದು ಹೇಳಿದರು.
ಪತ್ರಕರ್ತರಾದ ದನಂಜಯ ಮೂಡಬಿದ್ರೆ, ಕಲೀಂ ಸೇರಾಜೆ, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಗಳಾದ ಕಾರ್ತಿಕ್ , ಪ್ರವೀಣ್, ಸಾಗರ್ ಹೆಗ್ಡೆ ಸಂವಾದದಲ್ಲಿ ಭಾಗವಹಿಸಿದರು.
ಈ ಸಂದರ್ಭ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬಂಟ್ವಾಳ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಬೆಳ್ತಂಗಡಿ ಉಪಾಧ್ಯಕ್ಷ ಆರ್ ಎನ್ ಪೂವನಿ ಉಪಸ್ಥಿತರಿದ್ದರು.
ಮಾಧ್ಯಮ ಸಮ್ಮೇಳನ ಸಮಿತಿ ಉಪಾಧ್ಯಕ್ಷ ರತ್ನದೇವ್ ಶೆಟ್ಟಿ ಪುಂಜಾಲ್ಕಟ್ಟೆ ಸ್ವಾಗತಿಸಿದರು. ಶಿಕ್ಷಕ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಸದಸ್ಯ ಗೋಪಾಲ ಅಂಚನ್ಆಲದಪದವು ಕಾರ್ಯಕ್ರಮ ನಿರೂಪಿಸಿದರು.





