ಮೂಡುಬಿದಿರೆ:ಮಾರೂರು ಗ್ರಾಮದಿಂದ ಭಾನುವಾರ ರಾತ್ರಿ ನಾಪತೆಯಾಗಿದ್ದ ಕೂಲಿಕಾರ್ಮಿಕನ ಶವ ನೆತ್ತೋಡಿ ಸಮೀಪದ ಬೊಲ್ಲೇರು ಪಲ್ಗುಣಿ ನದಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಮಾರೂರಿನ ಸುಬ್ಬ(50) ಎಂದು ಗುರುತಿಸಲಾಗಿದೆ. ಈತ ಅವಿವಾಹಿತ. ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಇದೇ ಕಾರಣಕ್ಕೆ ಆತ ಭಾನುವಾರ ರಾತ್ರಿ ಮನೆಯವರಿಗೆ ಹೇಳದೆ ಹೊರಹೋಗಿದ್ದ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.
ಬುಧವಾರ ಮನೆಯವರು ಹುಡುಕಾಟ ನಡೆಸಿದಾಗ ನೆತ್ತೋಡಿ ಬೊಲ್ಲೇರು ಪಲ್ಗುಣಿ ನದಿಯ ಬಂಡೆಕಲ್ಲು ಮಧ್ಯೆ ಸಿಲುಕಿರುವುದು ಕಂಡುಬಂತು. ಸ್ಥಳೀಯರಾದ ಹರೀಶ್, ಗಿರೀಶ್, ಶ್ರೀಧರ್, ರಾಜು, ಸುರೇಂದ್ರ ಮತ್ತು ಭಾಸ್ಕರ ಆಚಾರ್ಯ ಜತೆ ಅಗ್ನಿ ಶಾಮಕ ಸಿಬಂದಿಗಳು ನೀರಿಗಿಳಿದು ಶವವನ್ನು ಮೇಲೆಕ್ಕೆತ್ತುವಲ್ಲಿ ಸಹಕರಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಸುಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಮೃತರ ಅಕ್ಕನ ಮಗ ರಮೇಶ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

