ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಬಸ್ನಿಲ್ದಾಣ ಬಳಿ ಮಂಗಳೂರಿನಿಂದ ವಿಟ್ಲ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದನ್ನು ತಡೆದ ಐವರ ತಂಡವು ಬಸ್ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ‘ಸೆಲೆನಾ’ ಎಂಬ ಹೆಸರಿನ ಖಾಸಗಿ ಬಸ್ಸಿನಲ್ಲಿ ಬಸ್ ಚಾಲಕನಾಗಿರುವ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ಇಬ್ರಾಹಿಂ ಮತ್ತು ನಿರ್ವಾ ಹಕನಾಗಿರುವ ಸ್ಥಳೀಯ ನಿವಾಸಿ ಅಬ್ದುಲ್ ಸಲಾಂ ಎಂಬವರು ಪ್ರತಿದಿನ ಬಸ್ಸಿನಲ್ಲಿ ಪ್ರಯಾಣಿಸುವ ಯುವತಿಯರಿಗೆ ತಮಾಷೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಐವರ ತಂಡವು ಗುರುವಾರ ಸಂಜೆ ಬಸ್ ತಡೆದು ನಿಲ್ಲಿಸಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಅಭಿಷೇಕ್, ಸದಾನಂದ ಗೌಡ, ಕುಶಲ ಮೇರ, ರವಿರಾಜ್ ಮತ್ತು ಯತಿನ್ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಠಾನೆ ಪೊಲೀಸರು ತಿಳಿಸಿದ್ದಾರೆ
