ಮೂಡುಬಿದರೆ: ನೂತನ ಗ್ರಾ.ಪಂ ವಾಲ್ಪಾಡಿ ವ್ಯಾಪ್ತಿಯ ಮೂವತ್ತು ವರ್ಷದ ಹಿಂದಿನ ಅರ್ಬಿ ಕಿರುಸೇತುವೆ ಜೀಣರ್ಾವಸ್ಥೆಯಲ್ಲಿದ್ದು, ಕುಸಿತದ ಭೀತಿಯಲ್ಲಿದೆ.
ವಾಲ್ಪಾಡಿ ಕೇಂದ್ರ ಸ್ಥಳದಿಂದ ಮಾಡದಂಗಡಿ ಮೂಲಕ ಆನೆಗುಡ್ಡೆ, ಪೆರಿಬೆಟ್ಟು ಹಾಗೂ ಧರೆಗುಡ್ಡೆ ಗ್ರಾ.ಪಂ ಅನ್ನು ಸಂಪರ್ಕಿಸುವ ಈ ಅರ್ಬಿ ಕಟ್ಟೆ ಸೇತುವೆ ನಿರ್ಮಾಣವಾಗಿದಾಗಿನಿಂದ ದುರಸ್ತಿಯ ಮುಖ ಕಂಡಿಲ್ಲ. ಇದೀಗ ಈ ಕಿರು ಸೇತುವೆ ಆಯುಷ್ಯ ಕಡಿಮೆಯಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕುಸಿಯುವ ಸಂಭವವಿದೆ. ಸೇತುವೆಯ ಕಂಬಗಳೇನೋ ತಕ್ಕಮಟ್ಟಿಗೆ ಗಟ್ಟಿಯಾಗಿದ್ದರೂ ಮಧ್ಯಭಾಗದಲ್ಲಿ ಬಿರುಕು ಮೂಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ದುರಸ್ತಿಯನ್ನು ಎದುರು ನೋಡುತ್ತಿರುವ ಅರ್ಬಿ ಕಿರುಸೇತುವೆ
ಸದ್ಯಕ್ಕೆ ದ್ವಿಚಕ್ರ ವಾಹನಗಳು ಓಡಾಟ ಮಾಡುತ್ತಿದ್ದು, ಸೇತುವೆಯ ದುಸ್ಥಿತಿಯನ್ನು ಅರಿತ ಹೆಚ್ಚಿನವರು ಈ ಮಾರ್ಗವಾಗಿ ಹೋಗುವುದನ್ನೇ ಕಡಿಮೆಗೊಳಿಸುತ್ತಿದ್ದಾರೆ. ಸ್ಥಳೀಯರು ಈ ಸೇತುವೆಯಲ್ಲಿ ನಡೆದಾಡಲು ಭಯಪಡುವಂತಾಗಿದೆ. ಒಂದು ವೇಳೆ ಈ ಸಂಕ ಕುಸಿದರೆ ವಾಲ್ಪಾಡಿ, ಮಾಡದಂಗಡಿಯಿಂದ ಆನೆಗುಡ್ಡೆ, ಪರಿಬೆಟ್ಟುವಿಗೆ ಹೋಗುವವರು ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ಮೂಡುಕೊಣಾಜೆ, ಕುಕ್ಕುದಕಟ್ಟೆಯಾಗಿ ಸುಮಾರು 7 ಕಿ.ಮೀ.ನಷ್ಟು ಹೆಚ್ಚುವರಿ ಕ್ರಮಿಸಬೇಕಾಗುತ್ತದೆ.
ಪಂಚಾಯಿತಿಗೆ ಸವಾಲು:
ಪ್ರಸಕ್ತ ವರ್ಷದಲ್ಲಿ ಶಿರ್ತಾಡಿ ಗ್ರಾ.ಪಂನಿಂದ ಬೇರ್ಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಾಲ್ಪಾಡಿ ಪಂಚಾಯಿತಿ ಮುಂದೆ ಮೂಲಭೂತ ಸೌಕರ್ಯವನ್ನು ಗ್ರಾಮಸ್ಥರಿಗೆ ಸಮರ್ಪಕವಾಗಿ ಕಲ್ಪಿಸುವ ಸವಾಲಿದೆ. ಪಂಚಾಯಿತಿ ವಾಪ್ತಿಯ ರಸ್ತೆ, ಕಿರು ಸೇತುವೆಗಳ ಅಭಿವೃದ್ಧಿಪಡಿಸುವ ಕೆಲಸ ಮೊದಲಾಬೇಕಾಗಿದೆ. ಮಾಡದಂಗಡಿಯಿಂದ ಅರ್ಬಿಕಟ್ಟೆ ಆನೆಗುಡ್ಡೆ, ಪೆರಿಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಯೂ ಆಗಬೇಕಾಗಿದೆ. ಸದಸ್ಯಕ್ಕೆ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶವಿದ್ದು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ನಿರ್ಮಾಣ ಮಾಡಬೇಕಾಗಿದೆ.
ಪಂಚಾಯಿತಿ ಕಚೇರಿ ಹಾಗೂ ಆಡಳಿತಾತ್ಮಕ ಖರ್ಚು ವೆಚ್ಚಗಳಿದ್ದರೂ ಅರ್ಬಿಕಟ್ಟೆ ಕಿರುಸೇತುವೆಯನ್ನು ಶೀಘ್ರವೇ ಅಭಿವೃದ್ಧಿಪಡಿಸುವ ಅನಿವಾರ್ಯತೆಯೂ ಇದೆ. ಶಾಸಕರು, ಸಂಸದರ ಮನವಿ ಸಲ್ಲಿಸಿ, ಅನುದಾನ ತರಿಸಿ ಸೇತುವೆಯನ್ನು ದುರಸ್ತಿಗೊಳಿಸುವಲ್ಲಿ ನೂತನ ಸದಸ್ಯರು ಹೊಸ ಪಂಚಾಯಿತಿಯ ಆಸಕ್ತಿವಹಿಸಬೇಕಾಗಿದೆ.
3 ದಶಕಗಳ ಹಿಂದಿನ ಸೇತುವೆಗೆ ಕಾಯಕಲ್ಪ ಅನಿವಾರ್ಯ. ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಪ್ರಥಮ ಆಧ್ಯತೆಯಾಗಿ ಅರ್ಬಿ ಕಟ್ಟೆ ಕಿರುಸೇತುವೆಯನ್ನು ಮರುಜೀವಗೊಳಿಸಬೇಕು.
-ಆಶ್ರಪ್
ಗ್ರಾಮಸ್ಥರು, ವಾಲ್ಪಾಡಿ ಗ್ರಾ.ಪಂ
*ಯಶೋಧರ ವಿ.ಬಂಗೇರ

