ಮೂಡುಬಿದರೆ: ಸಹೋದರರಿಬ್ಬರು, ತಮ್ಮ ಸಹೋದರನನ್ನೇ ರಾಡ್ನಿಂದ ಹೊಡೆದು ಕೊಲೆ ಮಾಡಿ, ಕೆರೆ ಎಸೆದಿರುವ ಪ್ರಕರಣ ಮೂಡುಬಿದರೆ ಪೊಲೀಸ್ ಠಾಣಾ ವ್ಯಾಪ್ತಿ ಕೆಲ್ಲಪುತ್ತಿಗೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಕಳದಲ್ಲಿ ಮೆಕ್ಯಾನಿಕ್ ವೃತ್ತಿ ಮಾಡುತ್ತಿದ್ದ ದಿನೇಶ್ ರಾವ್ (35) ಕೊಲೆಗೀಡಾಗಿದ್ದು,ಸಹೋದರರಾದ ಸುಬ್ರಹ್ಮಣ್ಯದಲ್ಲಿ ಅರ್ಚಕ ವೃತ್ತಿ ನಡೆಸುತ್ತಿದ್ದ ಜಗದೀಶ್ ರಾವ್ (30) ಮತ್ತು ಮನೆ ಸಮೀಪ ಅಂಗಡಿ ಹೊಂದಿದ ಸುರೇಶ್ ರಾವ್ (42) ಕೊಲೆಗೈದ ಆರೋಪಿಗಳಾಗಿದ್ದಾರೆ

ರಾಡ್ ಹೊಡೆದು ಕೊಲೆ:
ಅವಿವಾಹಿತ ದಿನೇಶ್ ಕುಡಿದು ಆಗಾಗ್ಗೆ ಸಹೋದರರ ಜೊತೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಬುಧವಾರ ರಾತ್ರಿ ದಿನೇಶ್ ತನ್ನ ಸಹೋದರರಾದ ಜಗದೀಶ್ ಮತ್ತು ಸುರೇಶ್ ಜತೆ ಜಗಳಕ್ಕಿಳಿದನೆನ್ನಲಾಗಿದೆ. ಜಗಳ ವಿಕೋಪಕ್ಕೆ ಹೋಗಿ ಜಗದೀಶ್ ಎಂಬಾತ ಕಬ್ಬಿಣದ ರಾಡ್ನಿಂದ ದಿನೇಶ್ನ ತಲೆಗೆ ಹೊಡೆದ ರಭಸಕ್ಕೆ ಆತ ಕುಸಿದುಬಿದ್ದು ಮೃತಪಟ್ಟನೆನ್ನಲಾಗಿದೆ.
ಮನೆಯವರು ಬೊಬ್ಬೆ ಹೊಡೆದಾಗ ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ಹೇಳಿ ಮನೆ ಹತ್ತಿರದ ಕೆರೆಗೆ ಎಸೆದು ವಾಪಾಸು ಮನೆಗೆ ಬಂದು ಮಲಗಿದ್ದಾರೆನ್ನಲಾಗಿದೆ.ಮರುದಿನ ಬೆಳಿಗ್ಗೆ ಕೆರೆಯಲ್ಲಿ ಶವ ಪತ್ತೆಯಾಗಿರುವುದು ಊರಲ್ಲಿ ಸುದ್ದಿಯಾಗಿ ಕೊಲೆ ರಹಸ್ಯ ಬಯಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳಿಬ್ಬರನ್ನು ವಿಚಾರಣೆ ನಡೆಸಿದಾಗ ಆತ ಹೊಡೆಯಲು ನಮ್ಮನ್ನು ಅಟ್ಟಿಸಿಕೊಂಡು ಬಂದಾಗ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆಂದು ಸುಳ್ಳು ಹೇಳಿದ್ದರು.
ಮೃತದೇಹದ ತಲೆಯಲ್ಲಿ ಗಾಯವಿರುದನ್ನು ಕಂಡ ಪೋಲಿಸರು ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೊಪಿಗಳ ವಿರುದ್ಧ ಪೋಲಿಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂದಿಸಿರುವ ಪೊಲೀಸರು, ಮೂಡುಬಿದರೆ ಕೋರ್ಟ್ ಗೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ರವಿಕುಮಾರ್ ಶುಕ್ರವಾರ ಭೇಟಿ ಪರಿಶೀಲನೆ ನಡೆಸಿದರು.

