ಬಂಟ್ವಾಳ: ಸ್ವಚ್ಚ ಭಾರತದ ಹವಾ ಒಂದಡೆಯಾದರೆ , ನಿರ್ಮಲ ಬಂಟ್ವಾಳದ ಕನಸು ಇನ್ನೊಂದಡೆ. ಆದರೆ ಯಾವುದು ಕೂಡಾ ನಮಗೆ ಅನ್ವಯಿಸದಲ್ಲ ಎನ್ನವ ರೀತಿ ಬಂಟ್ವಾಳ ಪುರಸಭೆ ವರ್ತಿಸುತ್ತಿದ್ದು, ಕಸದಲ್ಲಿ ರಾಜಕೀಯ ಮಾಡುತ್ತಿದೆ, ಬಂಟ್ವಾಳ ಪುರಸಭೆಗೆ ಕಸ ವಿಲೇವಾರಿ ಕಗ್ಗಂಟಾಗಿ ಹೋಗಿದೆ. ನಗರದ ವಿವಿದೆಡೆ ರಾಶಿ ಬಿದ್ದಿರುವ ಕಸದ ರಾಶಿಯಿಂದ ನಗರದ ಅಂದ ಕದಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿ ಪ್ರಕಟ ಗೊಳ್ಳುತ್ತಿದ್ದರೂ ಬಂಟ್ವಾಳ ಪುರಸಭೆ ದಿವ್ಯ ನಿರ್ಲಕ್ಷ ವಹಿಸುತ್ತಿದೆ. ಇದೀಗ ಅಂಗಡಿ ವ್ಯಾಪರಿಗಳಿಂದ ಶುಲ್ಕ ವಸೂಲಿ ಮಾಡಿಯೂ ಕಸ ವಿಲೇವಾರಿ ಮಾಡದ ಬಗ್ಗೆ ಬಿ.ಸಿ.ರೋಡಿನ ವ್ಯಾಪಾರಿಗಳು ಆಕ್ರೋಶಗೊಂಡಿದ್ದಾರೆ. ಬಂಟ್ವಾಳದಿಂದ ಧರ್ಮಸ್ಥಳ ಕಡೆಗೆ ಹೋಗುವ ದಾರಿಯಲ್ಲಿ ಸಾರ್ವಜನಿಕರಿಗೆ ಸ್ವಾಗತಿಸಲು ಕಸದ ರಾಶಿ ರಾಶಿ. ಪುರಸಭೆಯ ಬೋಗೊಡಿ, ಕೈಕಂಬ, ದೀಪಿಕಾ ಸ್ಕೂಲ್ ಸೇರಿದಂತೆ ಎಲ್ಲಾ ಕಡೆ ಕಸದ ರಾಶಿ ಬಿದ್ದಿದೆ.


ಗುತ್ತಿಗೆದಾರರ ಬದಲಾವಣೆ: ಕಳೆದ ಕೆಲವು ವರ್ಷಗಳಿಂದ ದಿನಾ ಸುದ್ದಿಯಾಗುತ್ತಿರುವ ತ್ಯಾಜ್ಯದ ಸಮಸ್ಯೆ ಮತ್ತೆ ಆರಂಭವಾಗಿದೆ. ಸರಿಯಾಗಿ ಕಸವನ್ನು ವಿಲೇವಾರಿ ಮಾಡದ ಆರೋಪದ ಹಿನ್ನಲೆಯಲ್ಲಿ ಶರದ್ ಶೆಟ್ಟಿ ಅವರ ಗುತ್ತಿಗೆಯನ್ನು ಅವರ ಟೆಂಡರ್ನ ಅವಧಿ ಮುಗಿಯುವ ಮೊದಲೇ ಎಮ್ಮೆಕೆರೆ ಸಲಾಂ ಎಂಬವರಿಗೆ ಪುರಸಭೆ ನಿಯಮಬಾಹಿರವಾಗಿ ಕಸ ವಲೇವಾರಿ ಮಾಡಲು ರೈಟ್ ಎಂದಿದೆ. ಆದರೆ ಹೊಸದಾಗಿ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರ ಕಸವನ್ನು ವಲೇವಾರಿ ಮಾಡುವಲ್ಲಿ ಎಡವಿದ್ದಾರೆ ಎಮದು ಆರೋಪ ವ್ಯಕ್ತಪಡಿಸುತ್ತಿದಾರೆ. ಕೇವಲ ಒಬ್ಬರೇ ಕಸ ಗುಡಿಸುತ್ತಿದ್ದು ಪೇಟೆ ಸೇರಿದಂತೆ ಎಲ್ಲಾ ಕಡೆ ಕಸದ ರಾಶಿ ತುಂಬಿ ಹೋಗಿದೆ.
ಕಳೆದ ನಾಲ್ಕೈದು ದಿನಗಳಿಂದ ಕಸ ಕೊಂಡೊಯ್ಯಲು ಪುರಸಭೆಯ ಟ್ರಾಕ್ಟರ್ ಬಾರದೇ ಇರುವುದರಿಂದ ಅಂಗಡಿ ವ್ಯಾಪಾರಿಗಳು ಕಸ, ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ರಸ್ತೆ ಬದಿಯಲ್ಲಿ ಇರಿಸಿದ್ದಾರೆ. ಇದರಿಂದಾಗಿ ಅಂಗಡಿ ಬಾಗಿಲುಗಳ ಮುಂದೆಯೇ ಕಸದ ಚೀಲಗಳು ರಾಶಿ ಬಿದ್ದಿವೆ. ಇದು ಅಂಗಡಿಗಳಿಗೆ ಬರುವ ಸಾರ್ವಜನಿಕರಿಗೂ ತೊಂದರೆ ನೀಡುತ್ತಿದೆ. ತಿಂಗಳ ಶುಲ್ಕ ಸಂಗ್ರಹಿಸಿಲು ನಿಗದಿತ ದಿನದಂತೆ ಒಕ್ಕರಿಸುವ ಕಸ ಸಂಗ್ರಹಣ ನೌಕರರು ಸಂಗ್ರಹಿಸಿಟ್ಟ ಕಸ ಕೊಂಡೊಯ್ಯಲು ನಿರ್ಲಕ್ಷ ತೋರಿರುವ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಮನೆ, ಅಂಗಡಿ, ಹೊಟೇಲುಗಳ ಕಸ ಸಂಗ್ರಹಣೆಗೆ ನಿರ್ದಿಷ್ಟ ಶುಲ್ಕ ನಿಗದಿ ಪಡಿಸಿರುವ ಪುರಸಭೆ ಶುಲ್ಕ ಪಾವತಿಸಿದರೂ ನಾಲ್ಕೈದು ದಿನ ಕಸ ವಿಲೇವಾರಿಗೊಳಿಸದಿರವುದು ಯಾಕೆ ಎಂದು ಇಲ್ಲಿನ ನಾಗರೀಕರು ಪ್ರಶ್ನಿಸುತ್ತಿದ್ದಾರೆ.

