ಉಳ್ಳಾಲ: ರಾಜ್ಯದಲ್ಲಿ ಮೊದಲ ಬಾರಿ ಕೆಎಸ್ ಆರ್ ಪಿ ಮಹಿಳಾ ಪೊಲೀಸ್ ಪಡೆ ಶೀಘ್ರವೇ ಆರಂಭವಾಗಲಿದೆ ಎಂದು ಬೆಂಗಳೂರು ಕೆಎಸ್ ಆರ್ ಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಐ.ಪಿ.ಎಸ್ ಹೇಳಿದ್ದಾರೆ.
ಅವರು ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 7ನೇ ಪಡೆ ಇದರ ಆಶ್ರಯದಲ್ಲಿ ಅಸೈಗೋಳಿ ಕವಾಯತು ಮೈದಾನದಲ್ಲಿ ಮೇ.26ರಂದು ಮಂಗಳವಾರ ಬೆಂಗಳೂರಿನ ಕೆಎಸ್ ಆರ್ ಪಿ 1,3,4,9 ಮತ್ತು 10 ನೇ ಪಡೆ, ಹಾಗೂ ಶಿಗ್ಗಾವಿ ಘಟಕಗಳ ಸ್ಪೆಷಲ್ ರಿಸರ್ವ್ ಪೊಲೀಸ್ ಖಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿ ಗಳ ನಿರ್ಗಮನ ಪಥಸಂಚಲನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಹಿಳಾ ಕೆಎಸ್ ಆರ್ ಪಿ ಪಡೆಯನ್ನು ಬೆಳಗಾಂನಲ್ಲಿ ಆರಂಭಿಸಲಾಗಿದೆ. ಮೊದಲ ಮಹಿಳಾ ಕಂಪೆನಿಯಲ್ಲಿ 120 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ತರಬೇತಿ ಕೇಂದ್ರಗಳ ಸ್ಥಾಪನೆ ಆಗಬೇಕಾಗಿರುವುದರಿಂದ ಸದ್ಯ 220 ಮಂದಿಯ ಮಹಿಳಾ ಪೇದೆಗಳನ್ನು ನೇಮಿಸಲಾಗುವುದು ಎಂದ ಅವರು ರಾಜ್ಯದ ಕೆಎಸ್ಆರ್ಪಿ ಪಡೆಯನ್ನು ಸಂಪೂರ್ಣ ಆಧುನೀಕರಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಕಾರ್ಯಚಟುವಟಿಕೆಗಳನ್ನು ಈಗಾಗಲೇ ಆರಂಭಿಸಲಾಗಿದೆ. 1000 ಯುವ ಪೇದೆಗಳು ಮತ್ತು 60 ಸಬ್ ಇನ್ಸ್ ಪೆಕ್ಟರ್ಗಳನ್ನು ಆಯ್ಕೆ ಮಾಡಿ ಪಡೆಗೆ ಸೇರಿಸಲಾಗಿದೆ. ಮುಂದಿನ ವರ್ಷವೂ ಅಷ್ಟೇ ಮಂದಿಯನ್ನು ಪಡೆಗೆ ಆಯ್ಕೆ ಮಾಡುವ ಆದೇಶ ಸರಕಾರದಿಂದ ಬಂದಿದೆ. ಇದರಿಂದ ಹಿರಿಯರನ್ನು ಕೂಡಿಕೊಂಡು ಹಳೇಯದಾಗಿದ್ದ ಕೆಎಸ್ಆರ್ಪಿ ಪಡೆ ಯುವ ಪಡೆಯಾಗಿ ಮಾರ್ಪಾಡಾಗಿದೆ. ಮೂರು ತಿಂಗಳ ಅವಧಿಯಲ್ಲಿ 900 ಪೇದೆಗಳ ಭಡ್ತಿಯನ್ನು ಸರಕಾರ ನಡೆಸಿದೆ. ಇದರಿಂದ ಹಲವು ವರ್ಷಗಳಿಂದ ಪೇದೆಯಾಗಿಯೇ ಸೇವೆ ಸಲ್ಲಿಸುತ್ತಿದ್ದ ಹಲವರು ಎಎಸ್ ಐ ಭಡ್ತಿಯನ್ನು ಪಡೆದು ನಿವೃತ್ತಿ ಹೊಂದಿದ್ದಾರೆ. ಮುಂದೆ ಕೆಲ ತಿಂಗಳುಗಳಲ್ಲಿ 1000 ಹೆಡ್ ಕಾನ್ಸ್ ಸ್ಟೇಬಲ್ ಗಳ ಭಡ್ತಿಯೂ ನಡೆಯಲಿದೆ. ಇದರಿಂದ 38 ವರ್ಷಗಳಲ್ಲಿ ಸಿಗುತ್ತಿದ್ದ ಭಡ್ತಿ 30 ವರ್ಷಗಳಲ್ಲಿ ಸಿಗುತ್ತದೆ. ಈ ಮೂಲಕ ನಿವೃತ್ತಿಗೂ ಮುನ್ನ ಆರ್ ಎಸ್ ಐ, ಆರ್ ಪಿಐ ಕೂಡಾ ಆಗುವ ಅವಕಾಶ ಇದೆ. ನೂತನ ಬಸ್ ಗಳ ವ್ಯವಸ್ಥೆ ಮತ್ತು ಕಡ್ಡಾಯವಾಗಿ ವರ್ಷದಲ್ಲಿ 15 ದಿನಗಳ ಕ್ಯಾಷುವಲ್ ರಜೆಯನ್ನು ಒದಗಿಸುವುದು ಹಾಗೂ 10 ದಿನಗಳ ಕೋರಿಕೆ ರಜೆಯನ್ನು ನೀಡುವುದಾಗಿ ತಿಳಿಸಿದ ಅವರು ಪೊಲೀಸ್ ಅನುಯಾಯಿಗಳಿಗೆ ಜಮೇದಾರ್ ಭಡ್ತಿ ಒದಗಿಸಲಾಗುವುದು ಎಂದರು. ಈ ಸಂದರ್ಭ ಬೆಂಗಳೂರು ಕೆಎಸ್ ಆರ್ ಪಿಯ ಪೊಲೀಸ್ ಮಹಾನಿರೀಕ್ಷಕಿ ಮಾಲಿನಿ ಕೃಷ್ಣಮೂತರ್ಿ ಐಪಿಎಸ್, ಪೊಲೀಸ್ ಕಮೀಷನರ್ ಮುರುಗನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ, ಕೆಎಸ್ ಆರ್ ಪಿ 7ನೇ ಪಡೆಯ ಕಮಾಂಡೆಂಟ್ ಸಿ.ರಂಗಸ್ವಾಮಿ ಉಪಸ್ಥಿತರಿದ್ದರು.










