ಬಂಟ್ವಾಳ: ಬಿ.ಸಿ.ರೋಡಿನಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಂ ಸಮಸ್ಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಮರ್ಪಕ ಕಾರ್ಯ ನಿರ್ವಹಣೆ ಹಾಗೂ ಇನ್ನೂ ರೈಲು ಮೇಲ್ಸೆತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸದೇ ಇರುವುದು ಕಾರಣ ಎಂದು ಆರೋಪಿಸಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ತುಂಗಪ್ಪ ಬಂಗೇರಾ ಹಾಗೂ ಪುರಸಭಾ ಸದಸ್ಯ ಗೋವಿಂದ ಪ್ರಭು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸ್ಯಾಮ್ಯುಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಳೆದ ಹಲವಾರು ದಿನಗಳಿಂದ ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಂ ಸಮಸ್ಯೆ ಉಂಟಾಗುತ್ತಿದ್ದು ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯ ದುಷ್ಪಾರಿಣ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದರಿಂದ ಬೇಸತ್ತ ತುಂಗಪ್ಪ ಬಂಗೇರ ಹಾಗೂ ಗೋವಿಂದ ಪ್ರಭು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸಾಮ್ಯುಲ್ ಅವರನ್ನು ಸ್ಥಳಕ್ಕೆ ಕರೆಸಿ ಇಲ್ಲಿನ ಅವ್ಯಸ್ಥೆಯ ಬಗ್ಗೆ ಗಮನಕ್ಕೆ ತಂದರು.


ಇದೇ ವೇಳೆ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬೆಳ್ಳಿಯಪ್ಪನವರು ಸ್ಥಳಕ್ಕೆ ಆಗಮಿಸಿ ಟ್ರಾಫಿಕ್ ಸಮಸ್ಯೆಯ ತೀವ್ರತೆಯ ಬಗ್ಗೆ ಅಧಿಕಾರಿಯ ಗಮನಕ್ಕೆ ತಂದು ಮುಖ್ಯ ವೃತ್ತದ ಬಳಿ ರಸ್ತೆ ಅಗಲೀಕರಣಗೊಳಿಸದೆ ರೈಲು ಮೇಲ್ಸೆತುವೆಯನ್ನು ನಿರ್ಮಿಸಿ ಯಾವುದೇ ಪ್ರಯೋಜನವಿಲ್ಲ ಎಂದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ ಉಂಟಾಗುವುದರಿಂದ ಮುಖ್ಯ ವೃತ್ತದ ಬಳಿ ಇರುವ ಕಂದಕಕ್ಕೆ ಮಣ್ಣು ತುಂಬಿ ಸಮತಟ್ಟು ಗೊಳಿಸುವುದರಿಂದ ವಾಹನ ದಟ್ಟಣೆ ತಡೆಯ ಬಹುದಾಗಿದ್ದು ಈ ಕಾಮಗಾರಿಯನ್ನು ತ್ವರಿತವಾಗಿ ನಡೆಸುವಂತೆ ಗೋವಿಂದ ಪ್ರಭು ಸಲಹೆ ನೀಡಿದರು.
ಶನಿವಾರ ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆ ನಡೆಯಲಿದ್ದು ಅದಕ್ಕಿಂತ ಮೊದಲು ಸಂಸದರನ್ನು ಇಲ್ಲಿಗೆ ಕರೆದುಕೊಂಡು ಬಂದು ಇಲ್ಲಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡಬೇಕೇಂದು ತಿಳಿಸಿದರು. ಇದೇ ರೀತಿ ಮುಂದುವರಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.





