ಬಂಟ್ವಾಳ: ಕೃಷಿ ಭೂಮಿ-ಕೃಷಿ ಬದುಕಿಗೆ ತೊಂದರೆಯಾದರೆ ಅದರಿಂದ ಭವಿಷ್ಯ ಬರಡಾಗುತ್ತದೆ, ಹಾಗಾಗಿ ರೈತರ ಏಳಿಗೆಗೆ ಹೆಚ್ಚಿನ ಒತ್ತು ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅವರುಬುಧವಾರ ಸಂಜೆ ಬಂಟ್ವಾಳ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ಎ.ಎಂಆರ್ ಪವರ್ ಪ್ರಾಜೆಕ್ಟ್ ನಿಂದಾಗಿ ಮುಳುಗಡೆಯಾದ ಜಮೀನುಗಳ ಸಂತ್ರಸ್ತ ರೈತರಿಗೆ ಎಎಂಆರ್ ಪವರ್ ಪ್ರಾಜೆಕ್ಟ್ ವತಿಯಿಂದ ನೀಡಲಾದ 3.30ಕೋಟಿ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.


ಎಎಂಆರ್ ಪವರ್ ಪ್ರಾಜೆಕ್ಟ್ ಶಂಭೂರಿನಲ್ಲಿ ಆರಂಭಗೊಳ್ಳುವ ವೇಳೆ ತಾನು ಮಾಜಿ ಶಾಸಕನಾಗಿದ್ದೆ, ಆಗ ಈ ಯೋಜನೆಗೆ ವಿರೋಧ ವ್ಯಕ್ತವಾದಾಗ ನಡೆದ ಪ್ರತಿಭಟನೆಯಲ್ಲಿ ತಾನೂ ಪಾಲ್ಗೊಂಡಿದ್ದೆ ಎಂದ ಅವರು, ಬಳಿಕ ಶಾಸಕನಾಗಿದ್ದ ಅವಧಿಯಲ್ಲಿ ಸಂತ್ರಸ್ತ ರೈತರಿಗೆ ಪರಿಹಾರ ಕೊಡುವುದಾಗಿ ನೀಡಿದ್ದ ಭರವಸೆ ಈಗ ಈಡೇರುತ್ತಿರುವುದು ಸಂತಸ ತಂದಿದೆ ಎಂದರು. ಎಕ್ರೆಗೆ 1 ಲಕ್ಷ ರೂ ನಂತೆ ಪರಿಹಾರ ಮೊತ್ತವನ್ನು ನೀಡಿದ ಎಎಂಆರ್ ಕಂಪೆನಿಗೂ ಅವರು ಈ ಸಂದರ್ಭ ಕೃತಜ್ಞತೆ ಸಲ್ಲಿಸಿದರು. ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದ ತಾ.ಪಂ.ಸದಸ್ಯ ಸಂಪತ್ ಕುಮಾರ್ ಶೆಟ್ಟಿ ಮತ್ತು ಪದ್ಮಶೇಖರ್ ಜೈನ್ ತಂಡದ ಕಾರ್ಯವನ್ನು ಅವರು ಶ್ಲಾಘಿಸಿದರು.
ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಸಚಿವರ ಉತ್ಸುಕತೆಯಿಂದ ಎಎಂಆರ್ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಎಎಂರ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ಹೈದ್ರಾಬಾದ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದಾ, ನಿವೃತ್ತ ತಹಶೀಲ್ದಾರ್ ಮಲ್ಲೇಸ್ವಾಮಿ, ಸಲೀಂ ಬರಿಮಾರು ಮೊದಲಾದವರು ಉಪಸ್ಥಿತರಿದ್ದರು. ಒಟ್ಟು 33 ಎಕರೆ ಕೃಷಿ ಜಮೀನು ಮುಳುಗಡೆಯಾಗಿದ್ದು 42 ಜನ ಸಂತ್ರಸ್ತರಿಗೆ 3.3ಕೋಟಿ ಹಣದ ಚೆಕ್ನ್ನು ನೀಡಲಾಯಿತು. ತಾ.ಪಂ.ಸದಸ್ಯ ಸಂಪತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆದಂಕುಂಞ ವಂದಿಸಿದರು.

