ಬೀಡಿ ಕಾರ್ಮಿಕರ ಹಿತ ಕಡೆಗಣಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರ-ಎಐಟಿಯುಸಿ
ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ನೀತಿಗಳು ದೇಶದ ಕಾರ್ಮಿಕರು ಮತ್ತು ರೈತರ ಹಿತಾಸಕ್ತಿಗಳಿಗೆ ವಿರೋಧವಾಗಿದೆ ಎಂದು ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ಇದರ ಅಧ್ಯಕ್ಷರಾದ ಪಿ.ಸಂಜೀವರವರು ಹೇಳಿದರು. ಅವರು ಇತ್ತೀಚೆಗೆ ಬಂಟ್ವಾಳ ಹೋಟೇಲ್ ಪ್ರೀತೇಶ್ ನ ಪ್ರಿನ್ಸೀ ಸಭಾಂಗಣದಲ್ಲಿ ಜರುಗಿದ ಬಂಟ್ವಾಳ ತಾಲೂಕು ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ ನ 66 ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡುತ್ತಾ ಕೇಂದ್ರ ಸರಕಾರ ಬೀಡಿ ಮತ್ತು ಸಿಗರೇಟ್ ಉದ್ದಿಮೆಗೆಗೆ ಸಂಬಂಧಪಟ್ಟಂತೆ ಜಾರಿಗೆ ತಂದಿರುವ ಅಔಖಿPಂ ಕಾಯಿದೆ ತೀರಾ ಕಾರ್ಮಿಕ ವಿರೋಧಿಯಾಗಿದೆ. ಇದರಿಂದಾಗಿ ಬೀಡಿ ಕೈಗಾರಿಕೆಯನ್ನು ನಂಬಿಕೊಂಡಿರುವ ಲಕ್ಷಾಂತರ ಬೀಡಿ ಮಜೂರರು ಮತ್ತು ಸಿಗರೇಟ್ ಉದ್ಯಮದಲ್ಲಿ ದುಡಿಯುವ ಕಾರ್ಮಿಕರು ಬೀದಿ ಪಾಲಾಗುವ ಸಾಧ್ಯತೆಯಿದೆ. ಅದಲ್ಲದೆ ಬೀಡಿ ಕಾರ್ಮಿಕರಿಗೆ ಭವಿಷ್ಯನಿಧಿಯಿಂದ ಸಿಗುತ್ತಿದ್ದ 1000 ಪಿಂಚಣಿಯನ್ನು ಕಸಿದುಕೊಳ್ಳಲು ಕೇಂದ್ರ ಸರಕಾರ ಮತ್ತು ಭವಿಷ್ಯನಿಧಿ ಟ್ರಸ್ಟಿ ನಲ್ಲಿ ತೀರ್ಮಾನ ಖಂಡನೀಯ ಎಂದು ವಿವರಿಸಿದರು.


ಅನಂತರ ಭಾರತ ಕಮ್ಯೂನಿಸ್ಟ್ ಪಕ್ಷದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ರವರು ಮಾತನಾಡಿ ಚುನಾವಣಾ ಪೂರ್ವದಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ಮೋದಿಯವರು ಮುಂದೆ ದೇಶದ ಜನತೆಗೆ ಒಳ್ಳೆಯ ದಿನಗಳು ಬರುತ್ತದೆ ಎಂದು ಘೋಷಣೆ ನೀಡುತ್ತಾ ಅಧಿಕಾರ ವಹಿಸಿಕೊಂಡ ಮೇಲೆ ಇವೆಲ್ಲವನ್ನೂ ಮರೆತು ತೀರಾ ಜನವಿರೋಧಿ ಮತ್ತು ರೈತವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬರುತ್ತಿರುವುದು ಖೇದನೀಯವಾಗಿದೆ. ರೈತರ ಫಲವತ್ತಾದ ಭೂಮಿಯನ್ನು ದೇಶೀಯ ಮತ್ತು ವಿದೇಶಿಯ ಕಾರ್ಪೊರೇಟ್ ಸಂಸ್ಥೆಗಳಿಗೆ ಮತ್ತು ಭೂ ಸ್ವಾಧೀನ ಮಸೂದೆಗೆ ತಿದ್ದುಪಡಿ ತರಲು ಹೊರಟಿರುವುದು ಅಪಾಯಕಾರಿ ಧೋರಣೆಯಾಗಿದೆ. ಅಲ್ಲದೆ ಕಪ್ಪು ಹಣವನ್ನು ವಿದೇಶದಿಂದ ದೇಶಕ್ಕೆ ತಂದು ಆ ಹಣದಿಂದ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸುತ್ತೇನೆ ಎಂದು ಜನತೆಗೆ ನೀಡಿದ ಆಶೋತ್ತರಗಳನ್ನು ಹುಸಿ ಮಾಡಿದ್ದಾರೆ ಎಂದು ಹೇಳಿದರು.
ಅನಂತರ ಕಳೆದ 5 ದಶಕಗಳಿಂದ ಬಂಟ್ವಾಳ ತಾಲೂಕು ಮತ್ತು ದ.ಕ ಜಿಲ್ಲೆಯಾದ್ಯಂತ ರೈತ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕು ಭಾದ್ಯತೆಗಳಿಗಾಗಿ ಸಕ್ರಿಯವಾಗಿ ದುಡಿದ ಧೀಮಂತ ಮುಖಂಡ ಹಾಗೂ ಸಂಘದ ಅಧ್ಯಕ್ಷರೂ ಆಗಿರುವ ಕಾಮ್ರೇಡ್ ಡಿ.ಹೆನ್ರಿ ಲೋಬೋ ರವರಿಗೆ ಫಲಪುಷ್ಪಗಳನ್ನಿತ್ತು ಶಾಲು ಹೊದಿಸಿ ಸನ್ಮಾನಿಸಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸನ್ಮಾನಿತರು ಈ ಜಿಲ್ಲೆಯಲ್ಲಿ ರೈತ ಕಾರ್ಮಿಕರ ಹೋರಾಟಕ್ಕೆ ಒಂದು ಭವ್ಯ ಪರಂಪರೆ ಇದೆ. ರೈತರಿಗೆ ಭೂಮಿ ಒದಗಿಸಲು ಅಸಂಘಟಿತ ಬೀಡಿ ಕಾರ್ಮಿಕರು ಮತ್ತು ಹಂಚು, ಬೀಜ, ನೆಯ್ಗೆ ಮುಂತಾದ ಕಾರ್ಮಿಕರ ಹಕ್ಕು ಭಾದ್ಯತೆಗಳಿಗೆ ನಿರಂತರವಾದ ಹೋರಾಟ ಚಳುವಳಿಗಳನ್ನು ರೂಪಿಸಿದ ಎಐಟಿಯುಸಿ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷಕ್ಕೆ ಸಲ್ಲುವ ಸನ್ಮಾನವೆಂದು ನಾನು ಭಾವಿಸುತ್ತಾ ನನ್ನ ಜೀವನದ ಅಂತ್ಯದವರೆಗೂ ಕಾರ್ಮಿಕರ ಹಿತಾಸಕ್ತಿಗಳ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಅನಂತರ ಸಂಘದ ಮಹಾಸಭೆಯಲ್ಲಿ ಮಂಡಿಸಿ ಅಂಗೀಕಾರವಾದ 8 ನಿರ್ಣಯಗಳನ್ನು ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ ನ ಕಾರ್ಯದರ್ಶಿ ಸುರೇಶ್ ಕುಮಾರ್ ರವರು ಸಂಕ್ಷಿಪ್ತವಾಗಿ ವಿವರಿಸಿದರು.
ಸಭೆ ಪ್ರಾರಂಭದಲ್ಲಿ ಯೂನಿಯನ್ ನ ಕಾರ್ಯದರ್ಶಿ ಕಾ.ಬಿ.ಶೇಖರ್ ರವರು ಗತ ವರ್ಷದ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಯೂನಿಯನ್ ಕೋಶಾಧಿಕಾರಿ ಪ್ರೇಮನಾಥ ಕೆ ಲೆಕ್ಕ ಪತ್ರವನ್ನು ಮಂಡಿಸಿದರು. ಚಟುವಟಿಕೆ ಮತ್ತು ಲೆಕ್ಕ ಪತ್ರದ ಬಗ್ಗೆ ಚರ್ಚೆ ನಡೆದು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಅನಂತರ ಮುಂದಿನ 2015-16 ನೇ ಸಾಲಿಗೆ 32 ಜನರಿರುವ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರು ಬಿ.ಬಾಬು ಭಂಡಾರಿ, ಉಪಾಧ್ಯಕ್ಷರುಗಳಾಗಿ ರತಿ.ಎಸ್.ಭಂಡಾರಿ ಮತ್ತು ಕೆ. ಜಯಂತ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಶೇಖರ್, ಸಹಕಾರ್ಯದರ್ಶಿಗಳಾಗಿ ಕು.ಗೀತಾ, ಚಂದಪ್ಪ ನಾವೂರು, ಸರೋಜಿನಿ ನೋರ್ನಡ್ಕ ಹಾಗೂ ಕೋಶಾಧಿಕಾರಿಯಾಗಿ ಪ್ರೇಮನಾಥ ಕೆ. ಆಯ್ಕೆ ಯಾದರು.
ಸಭೆಯನ್ನುದ್ದೇಶಿಸಿ ಹಿರಿಯ ಕಾರ್ಮಿಕ ಮುಂದಾಳು ಬಿ.ವಿಶ್ವನಾಥ ನಾಯಕ್, ಕೆಎಸ್ ಆರ್ ಟಿಸಿ ನೌಕರರ ಸಂಘಟನೆಯ ಮಂಗಳೂರು ಕಾರ್ಯದರ್ಶಿ ಪ್ರವೀಣ್ ಕುಮಾರ್ ಸಾಂಧರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್ ಉಪಾಧ್ಯಕ್ಷ ಎಂ.ಶಿವಪ್ಪ ಕೋಟ್ಯಾನ್, ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಸರಸ್ವತಿ ಕಡೇಶಿವಾಲಯ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಬೇಬಿ, ಅಮ್ಟಾಡಿ ಪಂಚಾಯತ್ ಸದಸ್ಯೆಶ್ರೀಮತಿ ಚಂದ್ರಾವತಿ, ನಾವೂರು ಪಂಚಾಯತ್ ಸದಸ್ಯೆ ಶ್ರೀಮತಿ ಗಿರಿಜಾ, ಚಂದಪ್ಪ ನಾವೂರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಸಹಕಾರ್ಯದರ್ಶಿ ಕಾ.ಕು.ಗೀತಾ ವಂದಿಸಿದರು. ಸಂಘದ ಕೋಶಾಧಿಕಾರಿ ಪ್ರೇಮನಾಥ ಕೆ. ಕಾರ್ಯಕ್ರಮ ನಿರೂಪಿಸಿದರು.


