ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕಳ ಗ್ರಾಮದ ಬೆರ್ಕಳ ಎಂಬಲ್ಲಿ ಪಾನಮತ್ತ ಅಳಿಯನೊಬ್ಬ ಸ್ವತಃ ತನ್ನ ಅತ್ತೆ ಮತ್ತು ಮಾವನಿಗೆ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಆರೋಪಿಯನ್ನು ಸ್ಥಳೀಯ ನಿವಾಸಿ ಕಿಟ್ಟು ಎಂಬವರ ಪುತ್ರ ನಾರಾಯಣ ಎಂದು ಗುರುತಿಸಲಾಗಿದೆ. ಈತನಿಗೆ ಇಲ್ಲಿನ ನಿವಾಸಿ ಕರಿಯ ಮತ್ತು ಅಂಜಲ ದಂಪತಿ ಕಳೆದ 14 ವರ್ಷಗಳ ಹಿಂದೆ ತನ್ನ ಪುತ್ರಿಯನ್ನು ವಿವಾಹ ಮಾಡಿ ಕೊಟ್ಟು, ಇವರ ಮನೆ ಪಕ್ಕದಲ್ಲೇ ಪ್ರತ್ಯೇಕ ಮನೆಯನ್ನೂ ಒದಗಿಸಿ ಕೊಟ್ಟಿದ್ದರು ಎನ್ನಲಾಗಿದೆ. ಈತನು ಪಾನಮತ್ತನಾಗಿ ಭಾನುವಾರ ರಾತ್ರಿ ಅತ್ತೆ-ಮಾವನಿಗೆ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಪುಂಜಾಲಕಟ್ಟೆ ಠಾಣೆಗೆ ಸೋಮವಾರ ದೂರು ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
