ಮೂಡುಬಿದಿರೆ : ಎಲ್ಲಾ ಧರ್ಮಗಳನ್ನು ಮೀರುವ ಮಾನವ ಧರ್ಮವನ್ನು ನಾವು ಪಾಲಿಸುವ ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಮತ-ಧರ್ಮಗಳ ಮಧ್ಯೆ ನಡೆಯುವ ಘರ್ಷಣೆಗಳನ್ನು ದೂರ ಮಾಡಿ ಸಂಘರ್ಷ ರಹಿತ ಜೀವನಕ್ಕೆ ಆದ್ಯತೆ ನೀಡಬೇಕೆಂದು ಎಂದು ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ಗಂಟಾಲ್ಕಟ್ಟೆ ಬದ್ರಿಯಾ ಜುಮ್ಮಾ ಮಸ್ಜೀದ್ ಇದರ ನವೀಕೃತ ಮೇಲಂತಸ್ತು ಕಟ್ಟಡದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಶುಕ್ರವಾರ ಸಂಜೆ ಮಸ್ಜೀದ್ನ ವಠಾರದಲ್ಲಿ ನಡೆದ ಸರ್ವ ಧರ್ಮೀಯರ ಸೌಹಾರ್ದಕೂಟದಲ್ಲಿ ಆಶೀರ್ವಚನ ನೀಡಿದರು.
ನಾವು ಹುಟ್ಟಿದ ನಾಡನ್ನು ಪ್ರೀತಿಸಬೇಕು. ನಮಗೆ ಮೊದಲಾಗಿ ನಮ್ಮ ಕಷ್ಟಗಳಿಗೆ ಸ್ಪಂದಿಸುವ ನೆರೆಕರೆಯವರನ್ನು ಪ್ರೀತಿಸಿದಾಗ ಧ್ವೇಷ-ವೈಷಮ್ಯ ಮಾಯವಾಗುತ್ತದೆ. ಇಂದು ದೇಶದಲ್ಲಿ ಪ್ರತಿಕೂಲ ವಾತಾವರಣವಿದೆ ಸಮಾಜ ಮತ್ತು ಧರ್ಮದ ನಡುವೆ ಕಂದಕವನ್ನುಂಟು ಮಾಡಲು ವಿಷ ಬೀಜವನ್ನು ಬಿತ್ತುವ ಕೆಲಸಗಳು ನಡೆಯುತ್ತಿವೆ ಈ ಸಂದರ್ಭದಲ್ಲಿ ಎಲ್ಲಾ ಧರ್ಮಗಳನ್ನು ಒಗ್ಗೂಡಿಸುವಂತಹ ಕೆಲಸವನ್ನು ಇಂತಹ ಸೌಹಾರ್ದಕೂಟಗಳಿಂದ ನಡೆಯಬೇಕಾಗಿದೆ ಎಂದು ಹೇಳಿದ ಶ್ರೀಗಳು ಎಲ್ಲಾ ಧರ್ಮಿಯರು ಹೊಡಿ-ಬಡಿ ಸಂಸ್ಕøತಿಯನ್ನು ಬಿಟ್ಟು ಸೌಹಾರ್ದಯುತವಾಗಿ ಬಾಳುವಂತಾಗಬೇಕು ಎಂದರು.
ಕೃಷ್ಣಾಪುರ ಚೊಕ್ಕಬೆಟ್ಟು ಜುಮ್ಮಾ ಮಸ್ಜಿದ್ನ ಖತೀಬ ಹಾಜಿ ಯು.ಕೆ ಅಬ್ದುಲ್ ಅಝೀಝ ದಾರಿಮಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸರ್ವಧರ್ಮವನ್ನು ಹೊಂದಿರುವ ದೇಶ ಭಾರತ. ಪರಸ್ಪರ ಹೊಂದಾಣಿಕೆಯನ್ನು ತಿಳಿದುಕೊಳ್ಳುವುದೇ ಸೌಹಾರ್ದತೆಯ ತಿರುಳು. ಎಲ್ಲಾ ಧರ್ಮಗಳು ಕೂಡಾ ಒಳಿತನ್ನೇ ಹೇಳಿವೆ ಆದರೆ ನಾವು ನಮ್ಮ ಸ್ವಾರ್ಥಕ್ಕಾಗಿ ಸಂಘರ್ಷವನ್ನು ಸೃಷ್ಠಿಸುತ್ತಿದ್ದೇವೆ.
ಧರ್ಮನಿಷ್ಠೆಯಷ್ಟೇ ರಾಷ್ಟ್ರ ನಿಷ್ಠೆಯೂ ಮುಖ್ಯ. ಈ ದೇಶದಲ್ಲಿ ಬಹು ಸಂಸ್ಕøತಿಯ ಗಟ್ಟಿ ಅಡಿಪಾಯವಿದೆ ಅದು ಎಂದೂ ನಶಿಸಿ ಹೋಗಲಾರದು. ರಾಷ್ಟ್ರಕ್ಕೆ ದ್ರೋಹ ಮಾಡಬಾರದು ಕೆಟ್ಟದನ್ನು ಮಾಡಿದರೆ ದೇಶ ಸಹಿಸುವುದಿಲ್ಲ ಎಂದ ಅವರು ಈ ನೆಲದ ಮಣ್ಣನ್ನು ಮುಸ್ಲಿಂಮರೂ ಗೌರವಿಸಬೇಕೆಂದರು.
ಮೂಡುಬಿದಿರೆ ಟೌನ್ ಜುಮ್ಮಾ ಮಸ್ಜಿದ್ನ ಖತೀಬರಾದ ಮೂಸಲ್ ಫೈಝಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾ ನೆರವೇರಿಸಿದರು.
ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಉದ್ಯಮಿ ಶ್ರೀಪತಿ ಭಟ್, ಮೂಡುಬಿದಿರೆ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ನ ಅಬ್ದುಲ್ ರೆಹಮಾನ್, ಹಾಜಿ ಅಬ್ದುಲ್ ರಹ್ಮಾನ್ ಹಾಸ್ಕೋ, ಹಾಜಿ ಅಬ್ದುಲ್ ಲತೀಫ್ ತೋಡಾರು, ಸಿವಿಲ್ ಇಂಜನಿಯರ್ ಮಹಮ್ಮದ್ ಇಕ್ಬಾಲ್, ಉದ್ಯಮಿಗಳಾದ ಶ್ರೀಧರ್ ಮರ್ಚೆಂಟ್, ಪದ್ಮಯ್ಯ ಸುವರ್ಣ, ಲ್ಯಾನ್ಸಿ ಮಿನೇಜಸ್, ವೇಣೂರು ಸಿ.ಎ.ಬ್ಯಾಂಕಿನ ನಿವೃತ್ತ ಪ್ರಬಂಧಕ ಹೆಚ್. ಮಹಮ್ಮದ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸನ್ಮಾನ : ಮಸೀದಿ ನಿರ್ಮಾಣದ ಸಂಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಹಾಜಿ ಉಮರಬ್ಬ ಬಾನಿಲು ಮತ್ತು ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟೀಸ್ನ ಮಾಲಿಕ ಶ್ರೀಪತಿ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಮಾತಿನ ಕಾರ್ಯದರ್ಶಿ ಆಲಿದ್ ಸ್ವಾಗತಿಸಿದರು. ಮಹಮ್ಮದ್ ಇರ್ಫಾನ್ ಮೌಲಾವಿ ಕಲಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


