ಬಂಟ್ವಾಳ: ಬಂಟ್ವಾಳ-ಮೂಡಬಿದಿರೆ ರಸ್ತೆ ನಡುವಿನ ಬಂಡಸಾಲೆ- ಕೂರಿಯಾಳ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಧೂಳುಮಯ ರಸ್ತೆಗೆ ಡಾಂಬರೀಕರಣಗೊಳಿಸುವಂತೆ ಸ್ಥಳೀಯರಿಂದ ವ್ಯಾಪಕ ಆಗ್ರಹ ಕೇಳಿ ಬಂದಿದೆ.

ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ರಸ್ತೆಗೆ ಹಲವು ವರ್ಷಗಳಿಂದ ಡಾಂಬರು ಕಾಣದೆ ಇದ್ದ ಜೆಲ್ಲಿಯೂ ಅಲ್ಲಲ್ಲಿ ಚದುರಿ ಹೋಗಿದೆ. ರಸ್ತೆ ಬದಿ ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲದೆ ಮಳೆಗಾಲದಲ್ಲಿ ರಸ್ತೆಯಲ್ಲೇ ನೆರೆನೀರು ನುಗ್ಗಿದ ಪರಿಣಾಮ ರಸ್ತೆಯುದ್ದಕ್ಕೂ ಹೊಂಡಮಯವಾಗಿದೆ.
ಈ ಧೂಳು ಮತ್ತು ಹೊಂಡಮಯ ರಸ್ತೆಗೆ ಡಾಂಬರೀಕರಣಗೊಳಿಸುವಂತೆ ಈಗಾಗಲೇ ಸ್ಥಳೀಯರು ಸೇರಿಕೊಂಡು ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಈ ರಸ್ತೆ ದುರವಸ್ಥೆಯಿಂದಾಗಿ ಊರಿಗೆ ಬರುತ್ತಿದ್ದ ಏಕೈಕ ಸರ್ಕಾರಿ ಬಸ್ ಸಂಚಾರವೂ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದರಿಂದಾಗಿ ಅನಾರೋಗ್ಯಪೀಡಿತರು ಬಾಡಿಗೆ ರಿಕ್ಷಾಗಳ ಮೂಲಕ ಪ್ರಯಾಣಿಸುವುದಕ್ಕೂ ಹಿಂದೇಟು ಹಾಕುವಂತಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಕೂಡಾ ಅಸಾಧ್ಯವಾಗಿದೆ. ಈ ರಸ್ತೆಯು ಸಂಪೂರ್ಣ ಡಾಂಬರೀಕರಣಗೊಂಡಾಗ ಮಾತ್ರ ಕುರಿಯಾಳ, ಕೆಂಪುಗುಡ್ಡೆ, ಎರ್ಮಾಳು, ಬಂಟ್ವಾಳ ರಸ್ತೆ ಸಂಪರ್ಕಿಸಲು ಸಹ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಇಲ್ಲಿನ ನಾಗರಿಕರಿಂದ ವ್ಯಕ್ತವಾಗಿದೆ.
-ಮೋಹನ್ ಕೆ.ಶ್ರೀಯಾನ್
