
ಅತ್ಯಂತ ಕಿರಿಯ ಪ್ರಾಯದಲ್ಲೇ ಅಗಾಧ ಪ್ರತಿಭೆಯನ್ನು ಮೇಳೈಸಿಕೊಂಡಿರುವ ತ್ವಿಶಾ ಶೆಟ್ಟಿ ಜನರಲ್ ಇನ್ಶೂರೆನ್ಸ್ ಸಮೀಕ್ಷಕರಾಗಿರುವ ಪೆರಾರ ಮಂಡಬೆಟ್ಟು ಗುತ್ತು ರವಿರಾಜ್ ಶೆಟ್ಟಿ ಹಾಗೂ ಮಂಗಳೂರಿನ ಗುರುಪುರ ಕೈಕಂಬದಲ್ಲಿ `ಟ್ರೂ ವಿಷನ್’ ಎಂಬ ಆಪ್ಟಿಕಲ್ ಶಾಪ್ ನಡೆಸುತ್ತಿರುವ ಯಶಸ್ವಿ ವಾಣಿಜ್ಯೋದ್ಯಮಿ ಶ್ರೀಮತಿ ಸೋಂತಾಡಿ ರೂಪಾ ಆರ್. ಶೆಟ್ಟಿ ಅವರ ಮಗಳು.
ತ್ವಿಶಾಗೆ 13 ತಿಂಗಳು ತುಂಬುತ್ತಿದ್ದಂತೆ ಆಕೆ ಸಭೆ, ಸಮಾರಂಭಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದಳು. ಆಕೆಯ ಪ್ರತಿಭೆಯನ್ನು ಗುರುತಿಸಿದ ಆಕೆಯ ಹೆತ್ತವರು ತ್ವಿಶಾಳ ಕನಸಿಗೆ ನೀರೆರೆದು ಪೋಷಿಸಿದರು. 4 ವರ್ಷ ಪ್ರಾಯದ ತ್ವಿಶಾಳನ್ನು ಸಂದೇಶ ಬೇಸಿಗೆ ಶಿಬಿರದಲ್ಲಿ ಭರತನಾಟ್ಯ ತರಗತಿಗೆ ಸೇರಿಸುವ ಮೂಲಕ ಆಕೆಯ ನೃತ್ಯ ಜೀವನಕ್ಕೆ ಮುನ್ನುಡಿ ಬರೆದರು. ಹೀಗೆ ಭರತನಾಟ್ಯ ಕಲಿಯಲು ಆರಂಭಿಸಿದ ತ್ವಿಶಾ, ಗುರುಗಳಾದ ‘ಕರ್ನಾಟಕ ಜ್ಯೋತಿ’ ಗುರು ಶ್ರೀಮತಿ ಗೀತಾ ಸರಳಾಯ ಮತ್ತು ವಿದೂಷಿ ಶ್ರೀಮತಿ ರಶ್ಮಿ ಚಿದಾನಂದ್ ಅವರ ಮಾರ್ಗದರ್ಶನದಲ್ಲಿ ತನ್ನ ತರಬೇತಿಯನ್ನು ಮುಂದುವರಿಸಿದಳು. ಸದ್ಯ ಆಕೆ ಕರ್ನಾಟಕ ಸರಕಾರ ನಡೆಸುವ ಕಿರಿಯರ ವಿಭಾಗದ ನೃತ್ಯ ಪರೀಕ್ಷೆಯನ್ನು ಎದುರಿಸಲು ಎನ್ ಬಿಯ ಗುರುದ್ವಯರು ಮತ್ತು ಶ್ರೀಮತಿ ಉಷಾ ಪ್ರವೀಣ್ ಅವರ ಬಳಿ ಕರ್ನಾಟಿಕ್ ಹಾಡುಗಾರಿಕೆಯನ್ನು ಕಲಿಯುತ್ತಿದ್ದಾಳೆ.
ಶೈಕ್ಷಣಿಕವಾಗಿಯೂ ತೀಕ್ಷ್ಣಮತಿಯಾಗಿರುವ ತ್ವಿಶಾ ಮಂಗಳೂರಿನ ಬೆಂದೂರ್ ನಲ್ಲಿರುವ ಸಂತ ತೆರೆಸಾ ಐಸಿಎಸ್ಇ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಭರತನಾಟ್ಯವಲ್ಲದೆ ನಾಟಕ, ಹಾಡುಗಾರಿಕೆ, ಚಿತ್ರಕಲೆ, ಅಂದದ ಬರವಣಿಗೆ, ಛದ್ಮವೇಷ, ನೆನಪು ಶಕ್ತಿ ಸ್ಪರ್ಧೆ ಮುಂತಾದ ವಿಷಯಗಳನ್ನೂ ಹವ್ಯಾಸವಾಗಿ ಬೆಳೆಸಿದ್ದಾಳೆ. ಹಾಗೆಯೇ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಕೂಡಾ ಗಳಿಸಿದ್ದಾಳೆ. ಗುರುದೇವ್ ಲಲಿತಕಲಾ ಅಕಾಡೆಮಿಯವರು ಮಂಡ್ಯಾದಲ್ಲಿ ನಡೆಸಿದ ಭರತನಾಟ್ಯಂ ಸ್ಪರ್ಧೆಯಲ್ಲಿ ತ್ವಿಶಾ ಸಮಾಧಾನಕರ ಬಹಮಾನವನ್ನು ಗೆದ್ದಿದ್ದಾಳೆ.
ಮಲೈ ಮಹದೇಶ್ವರ ದೇವಸ್ಥಾನ ಮೈಸೂರು, ಗಂಗೂಬಾಯಿ ಹಾನಗಲ್ ಪ್ರತಿಷ್ಠಾನ ಹುಬ್ಬಳ್ಳಿ, ಅಬ್ಬಕ್ಕೋತ್ಸವ, ವೇಣೂರು, ಧರ್ಮಸ್ಥಳ ಮಸ್ತಕಾಭಿಷೇಕ, ಕರಾವಳಿ ಉತ್ಸವ, ಆಳ್ವಾಸ್ ನುಡಿಸಿರಿ, ಪತ್ರಿಕಾ ಸಮಾವೇಶ ಮುಂತಾದೆಡೆಗಳಲ್ಲಿ 200ಕ್ಕೂ ಅಧಿಕ ಏಕ ಮತ್ತು ಎನ್ ಬಿ ತಂಡದ ಜೊತೆ ಗ್ರೂಪ್ ಪ್ರದರ್ಶನ ನೀಡಿರುವ ಹೆಗ್ಗಳಿಕೆ ತ್ವಿಶಾಳದ್ದಾಗಿದೆ.








