ಉಳ್ಳಾಲ: ಆತ ಸುಮಾರು 20-21ರ ಹರೆಯದ ಯುವಕ. ನೋಡಲು ಸ್ಫುರದ್ರೂಪಿ ಯುವಕನಾದರೂ ಮಾತನಾಡಲೂ ಆಗುವುದಿಲ್ಲ, ಸರಿಯಾಗಿ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಸ್ವಯಂ ಸೇವಕರೊಬ್ಬರ ಸಹಾಯದಿಂದ ಆಸ್ಪತ್ರೆ ಸೇರಿ ಮೂರು ತಿಂಗಳಾದರೂ ಸಂಬಂಧಿಕರು, ಹೆತ್ತವರ ಪತ್ತೆ ಇನ್ನೂ ಆಗಿಲ್ಲ, ಯುವಕ ಬಾಯನ್ನೂ ಬಿಟ್ಟಿಲ್ಲ.


ಇದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಾನಸಿಕ ರೋಗಿಗಳ ವಾರ್ಡ್ನಿಂದ ಶುಕ್ರವಾರ ಬಿಡುಗಡೆಗೊಂಡ ಯುವಕನ ದುರಂತ ಕತೆ. ಮೂರು ತಿಂಗಳ ಹಿಂದೆ ಉಳ್ಳಾಲದ ಪ್ಯಾರಡೈಸ್ ಹೊಟೇಲಿನ ಸಮೀಪದ ಚರಂಡಿಯಲ್ಲಿ ಬಿದ್ದಿದ್ದ ಯುವಕನನ್ನು ಹೋಪ್ ಸ್ವಯಂ ಸೇವಾ ಸಂಸ್ಥೆಯ ರಾಝಿಕ್ ಉಳ್ಳಾಲ ಅವರು ಪ್ರಾಥಮಿಕ ಶುಶ್ರೂಷೆ ನೀಡಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಮಾನಸಿಕವಾಗಿ ಬಳಲುತ್ತಿದ್ದ ಯುವಕನಿಗೆ ಬೇಕಾದ ಚಿಕಿತ್ಸೆ ಎಲ್ಲವನ್ನು ಆಸ್ಪತ್ರೆ ವತಿಯಿಂದ ನೀಡಲಾಯಿತು. ಮೂರು ತಿಂಗಳಾದರೂ ಯುವಕ ಚೇತರಿಕೆ ಕಂಡಿಲ್ಲ.
ಬೆಂಗಳೂರಿಗೆ ದಾಖಲು: ಮೂರ್ಛೆ ರೋಗವನ್ನು ಹೊಂದಿರುವ ಈತನಲ್ಲಿ ಚೇತರಿಕೆ ಕಂಡಿಲ್ಲ. ನಿರಂತರ ಔಷಧದಿಂದ ಚೇತರಿಸುವ ವಿಶ್ವಾಸವಿದೆ. ಮನೆಮಂದಿಯ ಪತ್ತೆಯೂ ಆಗದೆ, ಮುಂದಿನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನಾದ್ಯಂತ ಸವಲತ್ತುಗಳು ಇಲ್ಲದೇ ಇರುವುದರಿಂದ ರಾಝಿಕ್ ಉಳ್ಳಾಲ್ ಇವರು ಯುವಕನನ್ನು ಆಟೋ ರಾಜ ಎಂಬವರು ನಡೆಸುತ್ತಿರುವ ಬೆಂಗಳೂರಿನ ಹೋಪ್ ಫಾರ್ ಹೋಂ ಸಂಸ್ಥೆಗೆ ಸೇರಿಸಲಿದ್ದಾರೆ. ಈತನ ಬಗ್ಗೆ ಸಂಬಂಧಿಕರು ಅಥವಾ ಪರಿಚಯದವರು ಇದ್ದಲ್ಲಿ ರಾಝಿಕ್ ಉಳ್ಳಾಲ್ ಇವರನ್ನು ಸಂಪರ್ಕಿಸಿ ಎಂದು ಚಿಕಿತ್ಸೆ ನೀಡಿದ ವೈದ್ಯರಾದ ಡಾ. ಅಜಯ್ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ರಾಝಿಕ್ ಉಳ್ಳಾಲ್ ಇವರು ನೊಂದವರ ಸಹಾಯ ಮಾಡುತ್ತಾ ಬಂದಿದ್ದಾರೆ. ಸದ್ಯ ಯುವಕನ ಚೇತರಿಕೆಗಾಗಿ ಕಳೆದ ಮೂರು ತಿಂಗಳಿನಿಂದ ರಾಝಿಕ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಇಂತಹ ಹೋಪ್ ಸ್ವಯಂ ಸೇವಾ ಸಂಸ್ಥೆಗೆ ಎಲ್ಲರ ಸಹಕಾರ ಅಗತ್ಯ ಎಂದು ಹಿತೈಷಿ ನಝೀರ್ ಎಂಬಬವರು ತಿಳಿಸಿದ್ದಾರೆ.
