ಸುಬ್ರಹ್ಮಣ್ಯ: ಮರೀಚಿಕೆಯ ಬೆನ್ನು ಹತ್ತಿದರೆ ಹೇಗಾಗುತ್ತದೆ ಎಂಬುವುದಕ್ಕೆ ಈ ಘಟನೆ ಸ್ಪಷ್ಟವಾದ ಉದಾಹರಣೆಯಾಗಿದೆ.
ಆಕೆಯ ಹೆಸರು ಸವಿ. ನಟ ಧ್ರುವ ಸರ್ಜಾನ ಪಕ್ಕಾ ಅಭಿಮಾನಿ ಈಕೆ. ಆಕೆಗೆ ಧ್ರುವ ಸರ್ಜಾನ ಪರಿಚಯ ಇತ್ತೋ ಇಲ್ವೋ ಗೊತ್ತಿಲ್ಲ ಆದ್ರೆ, ಆತನನ್ನು ಹುಡುಕ್ಲೇ ಬೇಕು ಎಂದು ಹಟಕ್ಕೆ ಬಿದ್ದ ಸವಿ ಸುಬ್ರಹ್ಮಣ್ಯದಿಂದ ನೇರವಾಗಿ ಬೆಂಗಳೂರು ಬಸ್ ಹತ್ತಿ ಜಯನಗರ ಸ್ಟಾಪ್ನಲ್ಲಿ ಇಳಿದಳು. ಜಯನಗರದಂಥಾ ದೊಡ್ಡ ಸಿಟಿಯನ್ನು ಕಂಡು ಸವಿಯ ಕಣ್ಣು ಕಟ್ಟಿತು. ಸಿಕ್ಕಸಿಕ್ಕಲ್ಲಿ ಧ್ರುವನಿಗಾಗಿ ಸಿಕ್ಕಾಪಟ್ಟೆ ಹುಡುಕಾಡಿದಳು. ಆದ್ರೆ ಧ್ರುವ ಸಿಗ್ಲೇ ಇಲ್ಲ.

ಧ್ರುವನನ್ನು ಸಂಪರ್ಕಿಸಲು ಬೇಕಾದ ಫೋನ್ ನಂಬರ್, ವಿಳಾಸ ಯಾವುದೂ ಆಕೆ ಬಳಿ ಇರಲಿಲ್ಲ. ಇನ್ನೇನು ಮಾಡುವುದು ಎಂದು ತಿಳಿಯದ ಸವಿ ರಿಕ್ಷಾ ಏರಿ ಕುಳಿತಳು. ಬೆಂಗಳೂರಿನ ರಿಕ್ಷಾ ಚಾಲಕರೆಂದರೆ ಪಕ್ಕಾ ಜನರಲ್ಲ ಎಂಬ ನಂಬಿಕೆ ಇದೆ. ಆದರೆ ಈ ರಿಕ್ಷಾ ಡ್ರೈವರ್ ಮಾತ್ರ ಅದನ್ನು ಹುಸಿ ಮಾಡಿದ.
ಅಷ್ಟಕ್ಕೂ ಅವನ ಹೆಸರು ಅನಂತ್. ಬೆಂಗಳೂರಿನ ಮೂಡಲಪಾಳ್ಯದ ನಿವಾಸಿ. ಧ್ರುವನನ್ನು ಹುಡುಕಲು ಸಹಾಯ ಮಾಡಿದ ಈತ ಕೊನೆಗೆ ಆತ ಸಿಗದಿದ್ದಾಗ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಆಶ್ರಯ ನೀಡಿ ಸಹಾಯ ಮಾಡಿದ್ದಾನೆ. ನಂತರ ಆಕೆಯ ಪೂರ್ವಪರ ಪರಿಶೀಲಿಸಿ ಆಕೆಯ ಮನೆಗೆ ಕರೆ ಮಾಡಿ ಸುರಕ್ಷಿತವಾಗಿ ಮನೆಗೆ ಒಪ್ಪಿಸಿದ್ದಾನೆ.
ಸುಬ್ರಹ್ಮಣ್ಯದ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿರುವ ಸವಿ ಕಳೆದ ವಾರ ಇದ್ದಕಿದ್ದಂತೆ ನಾಪತ್ತೆಯಾಗಿದ್ದಳು. ಕಂಗಾಲಾಗಿದ್ದ ಪೋಷಕರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು, ಅಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಮಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ಸುಖಾಂತ್ಯಗೊಂಡಿದೆ.
