ಮಂಗಳೂರು: ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ಶಿವಮೊಗ್ಗಾದಲ್ಲಿ ಪಿಎಫ್ಐ ಕಾರ್ಯಕರ್ತರಿಂದ ನಡೆದ ದಾಂಧಲೆಯ ಬಗ್ಗೆ ಮಾತಾಡುತ್ತಾ, `ಪಿಎಫ್ಐ ಕಾರ್ಯಕರ್ತರು ಭಾರತದಲ್ಲೇ ಬೆಳೆದು ಇಲ್ಲಿನದ್ದೇ ನೀರು, ಗಾಳಿ ಆಹಾರ ಸೇವಿಸಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಆದರೂ ಅವರನ್ನು ಇದುವರೆಗೂ ಬಂಧಿಸಲಾಗಿಲ್ಲ, ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಒಂದು ವೇಳೆ ನಾವು(ಹಿಂದೂಗಳು) ವಂದೇ ಮಾತರಂ ಹಾಡಿದರೆ ಅದು ಕೋಮುವಾದ ಎಂದು ಬಿಂಬಿಸಲಾಗುತ್ತಿದೆ. ಆದರೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವುದು ಕಂಡುಬರುತ್ತಿಲ್ಲ ಯಾಕೆ ಎಂದು ಕಿಡಿ ಕಾರಿದರು.
ಅವರು ವಿಶ್ವ ಹಿಂದೂ ಪರಿಷತ್ನ ಸುವರ್ಣಮಹೋತ್ಸವದ ಅಂಗವಾಗಿ ಮಾ.1ರಂದು ಕೇಂದ್ರ ಮೈದಾನದಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಬಜರಂಗದಳ ಹಾಗೂ ವಿಎಚ್ಪಿಯಿಂದ ಫೆ.20ರಂದು ಮಂಗಳೂರಿನಲ್ಲಿ ನಡೆದ ಬೃಹತ್ ವಾಹನ ಜಾಥಾದ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.
ನಂತರ ಮಾತಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, `ಹಿಂದೂ ದರ್ಂವೊಂದು ಜೀವನ ಶೈಲಿಯಾಗಿದೆ. ಹಿಂದೂ ಧರ್ಮದ ಮೇಲೆ ದಾಳಿ ನಡೆದಾಗ ವಿಹಿಂಪ ಅದರ ವಿರುದ್ಧ ಸೆಟೆದು ನಿಲ್ಲುತ್ತದೆ. ದೇಶದ ಎಲ್ಲಾ ಜನರು ಸುಖದಿಂದ ಹಾಗೂ ಶಾಂತಿಯಿಂದ ಬದುಕಬೇಕೆಂಬುದು ನಮ್ಮೆಲ್ಲರ ಇಚ್ಚೆಯಾಗಿದೆ. ವಿಎಚ್ಪಿಕಳೆದ 50 ವರ್ಷಗಳಿಂದ ಜನರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುತ್ತಿದ್ದು, ಸಾಮಾಜಿಕ ಸಮಸ್ಯೆಗಳ ವಿರುದ್ಧವೂ ಹೋರಾಡುತ್ತಿದೆ ಎಂದವರು ನುಡಿದರು.
ನಳಿನ್ ಕುಮಾರ್ ಕಟೀಲ್ ಭಗವಾಧ್ವಜ ಹಾರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಈ ವೇಳೆ ಶರಣ್ ಪಂಪ್ವೆಲ್, ಭುಜಂಗ ಕುಲಾಲ್ ಮುಂತಾದವರು ಜೊತೆಗಿದ್ದರು. ವಜ್ರದೇಹಿ ಸ್ವಾಮೀಜಿ ತೆಂಗಿನ ಕಾಯಿ ಒಡೆಯುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಎಲ್ಲಿಂದ ಎಲ್ಲಿಯವರೆಗೆ ನಡೆಯಿತು ಬೈಕ್ ರ್ಯಾಲಿ?
ಬಂಟ್ಸ್ ಹಾಸ್ಟೆಲ್ನ ಹಿಂದೂ ಸಮಾಜೋತ್ಸವ ಕಚೇರಿಯಿಂದ ಹೊರಟ ಬೈಕ್ ರ್ಯಾಲಿ, ಮಲ್ಲಿಕಟ್ಟೆಯಾಗಿ ಅಲ್ಲಿಂದ ಬೆಂದೂರುವೆಲ್ಗೆ ಸಂಚರಿಸಿ ಬಲ್ಮಠ-ಹಂಪನಕಟ್ಟ-ಸ್ಟೇಟ್ ಬ್ಯಾಂಕ್-ಕಾರ್ಸ್ಟ್ರೀಟ್-ಲೇಡಿಹಿಲ್ ಮುಖಾಂತರ ಹಾದುಹೋಗಿ ಮತ್ತೆ ಬಂಟ್ಸ್ಹಾಸ್ಟೆಲ್ನಲ್ಲಿ ಮುಕ್ತಾಯಗೊಂಡಿತು.



