ಸುದ್ದಿ9 ಮಂಗಳೂರು: ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜ (44) ಉತ್ತರ ಆಫ್ರಿಕಾ ರಾಜಧಾನಿ ಮೊರಕ್ಕೊ ನಗರದ ಕ್ಯಾಸಾಬ್ಲಾಂಕಾದಲ್ಲಿ ಮಂಗಳವಾರ ಪೊಲೀಸ್ ಬಲೆಗೆ ಬಿದಿದ್ದು, ಆತನನನ್ನು ನಾಳೆ ಅಥವಾ ನಾಡಿದ್ದು ಭಾರತಕ್ಕೆ ಕಳಿಸಲಿದೆ. ಮುಂಬೈ ಕರೆತಂದ ನಂತ ಮಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು ಎಂಬ ಸುದ್ದಿ ಇದೆ.
ಮಂಗಳೂರಿನ ಭಾರತೀಯ ಹೋಟೆಲ್ ಉದ್ಯಮಿಯೊಬ್ಬರಿಂದ 5 ಕೋಟಿ ರೂ. ವಸೂಲಿಗೆ ಬೆದರಿಕೆ ಒಡ್ಡಿದ್ದೇ ಬನ್ನಂಜೆ ರಾಜನಿಗೆ ಮುಳುವಾಗಿದೆ. ಹಣ ಕೊಡಲು ಒಪ್ಪದ ಉದ್ಯಮಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೊರಕ್ಕೋದಲ್ಲಿ ಹೆಗ್ಡೆ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಬನ್ನಂಜೆಯನ್ನು ಭಾರತದ ಸಿಬಿಐ ಪೊಲೀಸರ ಮಾಹಿತಿಯಾಧರಿಸಿ ವಶಕ್ಕೆ ಪಡೆಯಲಾಗಿದೆ. ನಂತರ ಸಂಸ್ಥೆಯ ನೆರವಿನಿಂದ ಬನ್ನಂಜೆ ರಾಜನನ್ನು ಭಾರತೀಯ ಗುಪ್ತ ಚರ ವಿಭಾಗದ ವಿಶೇಷ ಘಟಕ ವಶಕ್ಕೆ ಪಡೆದಿದೆ. ಆದರೆ ಉತ್ತರ ಆಫ್ರಿಕಾದಲ್ಲಿ ಬನ್ನಂಜೆ ರಾಜನ ವಿರುದ್ಧ ಯಾವುದೇ ಪ್ರಕರಣವಿಲ್ಲದ ಹಿನ್ನೆಲೆಯಲ್ಲಿ ಭಾರತಕ್ಕೆ ಕರೆತರಬೇಕಿದ್ದರೆ 48 ಗಂಟೆಗಳೊಳಗೆ ಸೂಕ್ತ ದಾಖಲೆ ನೀಡಬೇಕು ಎಂದು ಅಲ್ಲಿನ ಪೊಲೀಸರು ಹೇಳಿದ್ದು, ಅದಕ್ಕಾಗಿ ಬೆಂಗಳೂರು ಪೊಲೀಸರು ಆತನ ಪ್ರಕರಣವನ್ನು ಕೆದಕಿ ಕೆದಕಿ ಮೊರಕ್ಕೋ ಪೊಲೀಸರ ವಶಕ್ಕೆ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಬನ್ನಂಜೆ ರಾಜ ವಿರುದ್ಧ 1 ಕೊಲೆ, ಹಫ್ತಾ ಬೆದರಿಕೆ ಮತ್ತಿತರ 6 ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಪರಾಧ ಪ್ರಕರಣ ಸಹಿತ ರಾಜ್ಯದ ವಿವಿಧ ಪೊಲೀಸ್ ಠಾಣೆಗಳು 36 ಪ್ರಕರಣ ದಾಖಲಾಗಿವೆ. ಮುಂಬೈ, ಬೆಂಗಳೂರು, ದಕ್ಷಿಣ ಕನ್ನಡ ಸಹಿತ ಈತನ ವಿರುದ್ಧ 41 ಕೇಸ್ಗಳಿವೆ. 200ರಲ್ಲಿ ದುವೈಯಲ್ಲಿ ನಕಲಿ ಪಾಸ್ಪೋರ್ಟ್ ವಂಚನೆ ಪ್ರಕರಣದಲ್ಲಿಅರೆಸ್ಟ್ ಮಾಡಲಾಗಿತ್ತು. ಆದರೆ ಆಸ್ಪತ್ರೆ ಸೇರುವ ನೆಪದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಅಲ್ಲಿಂದ ಪರಾರಿಯಾಗಿದ್ದ.
ಈತನ ಪತ್ತೆಗಾಗಿ ಪೊಲೀಸ್ ಇಲಾಖೆ ಅಂತಾರಾಷ್ಟ್ರೀಯ ರೆಡ್ ಕಾರ್ನರ್ ಲುಕ್ ಔಟ್ ನೋಟಿಸ್ ನೀಡಿತ್ತು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಬನ್ನಂಜೆ ರಾಜ ಬಂಧನ ಪ್ರಕರಣ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಆರ್ಕೆ ಯಾನೆ ಬನ್ನಂಜೆ ರಾಜ: ಬನ್ನಂಜೆ ಸುಂದರ ಶೆಟ್ಟಿಗಾರ್ ಮತ್ತು ವಿಲಾಸಿನಿಯವರ ಮಗ ರಾಜೇಂದ್ರ ಕುಮಾರ್ ಯಾನೆ ಆರ್ಕೆ ಯಾನೆ ಬನ್ನಂಜೆ ರಾಜ. ಕಾಲೇಜಿನ ಮೊದಲ ಮಹಡಿಯಿಂದ ತನ್ನ ವಿರೋಧಿಯನ್ನು ಕೆಳಗೆ ದೂಡಿ ಹಾಕುವ ಮೂಲಕ 1990ರಲ್ಲಿ ಪಿಯುಸಿ ಕಲಿಯುತ್ತಿದ್ದಾಗಲೇ ಅಪರಾಧಕ್ಕೆ ಇಳಿದಿದ್ದ. ಬಿಎ ಮುಗಿಸಿ ಮಾಂಡವಿ ಮೋಟರ್ಸ್ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ್ದ. ಬಸ್ ಏಜೆಂಟ್ ಆಗಿ ಕೆಲಸ ಮಾಡಿದ್ದ. ಬೆಂಗಳೂರಿನಲ್ಲಿ ಸ್ವಲ್ಪ ಸಮಯ ಬಸ್ ಏಜೆಂಟ್ ಆಗಿ ಕೆಲಸ ಮಾಡಿದ್ದ. 1998ರಲ್ಲಿ ಕೊಕ್ಕರ್ಣೆ ವಿಠಲ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಸ್ಥಳೀಯ ರಾಜಕಾರಣಿಯೊಬ್ಬರ ಸಹಾಯದಿಂದ ಪರಾರಿಯಾಗಿದ್ದ. ದುಬೈಯಲ್ಲಿ ಇದ್ದುಕೊಂಡೇ ಭೂಗತ ಜಗತ್ತನ್ನು ನಿಯಂತ್ರಿಸುತ್ತಿದ್ದ ಬನ್ನಂಜೆ ರಾಜ ಬೆಂಗಳೂರು ಬನ್ನೇರುಘಟ್ಟ ವಾಣಿಜ್ಯೋದ್ಯಮಿಗೆ ಬೆದರಿಕೆ ಒಡ್ಡಿ 1 ಕೋಟಿ ರೂ. ನೀಡುವಂತೆ ಬೇಡಿಕೆ ಸಲ್ಲಿಸಿದ್ದ.
2006 ಮಂಗಳೂರಿನ ಬಿಲ್ಡರ್ ಸುಬ್ಬರಾವ್ ಅವರನ್ನು ಹತ್ಯೆಗೊಳಿಸಿದ್ದ ಸಂದರ್ಭ ಸುದ್ದಿವಾಹಿಯೊಂದಕ್ಕೆ ಕರೆ ಮಾಡಿ ಆತನನ್ನು ನಾನೇ ಕೊಂದದ್ದು ಎಂದು ಹೇಳಿದ್ದ. ಆದರೆ ಪೊಲೀಸರು ಮಾತ್ರ ಆತನ ವಿರುದ್ಧ ಚಾರ್ಜ್ಶಟಿನಲ್ಲಿ ಹೆಸರು ಸೇರಿಸದೆ ಕೈಬಿಟ್ಟಿದ್ದರು. ಹತ್ಯೆ ಸೇರಿದಂತೆ ಬೆಂಗಳೂರು, ಮಂಗಳೂರು, ಉಡುಪಿ, ಮಣಿಪಾಲ, ಮಲ್ಪೆ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಕೊಲೆ, ಅಪಹರಣ, ಲೂಟಿ, ಬೆದರಿಕೆ ಸೇರಿದಂತೆ 30ಕ್ಕೂ ಅಧಿಕ ಪ್ರಕರಣಗಳಿವೆ. ಒಂದು ವರ್ಷದ ಹಿಂದೆ (2013 ಡಿ.19)ಅಂಕೋಲದ ಸಹಕಾರಿ ಧುರೀಣ ಉದ್ಯಮಿ ಆರ್.ಎನ್.ನಾಯಕ್ ಹತ್ಯೆಯನ್ನು ಬನ್ನಂಜೆ ರಾಜನ ಸೂಚನೆಯಂತೆ ಆತನ ಸಹಚರರು ಮಾಡಿದ್ದರು. ಆರಂಭದಲ್ಲಿ ಮುತ್ತಪ್ಪ ರೈ ಗ್ಯಾಂಗ್ ಜತೆ ಗುರುತಿಸಿಕೊಂಡಿದ್ದ. ದಯಾನಂದ ಪೈ ಹತ್ಯೆ ಪ್ರಕರಣ ಕೂಡಾ ಇವನನ್ನು ಸುತ್ತಿಕೊಂಡಿದೆ.
ಮಲ್ಪೆಯ ಕಾಲೇಜ್ನಲ್ಲಿ ಹೊಡೆದಾಟ ಪ್ರಕರಣದಲ್ಲಿ ಭಾಗಿಯಾದ ನಂತರ ಸಣ್ಣಪುಟ್ಟ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದ. ತನ್ನ ವ್ಯಾಪ್ತಿಯನ್ನು ಬೆಂಗಳೂರು, ಮಂಗಳೂರಿಗೆ ಸೀಮಿತಗೊಳಿಸಿ ನಂತರ ದುಬೈಗೆ ತೆರಳಿದ್ದ. ನಂತರ ಭೂಗತನಗಿ ಉದ್ಯಮಿಗಳಿಗೆ ಹಫ್ತಾ ಬೆದರಿಕೆ ಒಡ್ಡುತ್ತಿದ್ದ.
