ಕಲ್ಲಡ್ಕ: ಬೂದಿ ಮುಚ್ಚಿದ ಕೆಂಡದಂತಿರುವ ಕಲ್ಲಡ್ಕದಲ್ಲಿ ಮಾರ್ಚ್ 11ರವರೆಗೆ ನಿಷೇಧಾಜ್ಞೆ ಮುಂದುವರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಕಾಂಗ್ರೆಸ್ ಸಾಮರಸ್ಯ ಸಭೆಯ ಸಂದರ್ಭದಲ್ಲಿ ನಡೆದ ಗುಂಪು ಘರ್ಷಣೆಯ ಪರಿಣಾಮವೆಂಬಂತೆ ಅಲ್ಲಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು ಹೆಚ್ಚಿನ ಗಲಭೆಗಳು ಆಗದಂತೆ ಸೆಕ್ಷನ್ 144 ಮುಂದುವರಿಸಲಾಗಿದೆ. ಮೇರಮಜಲಿಗೆ ನೇಮೋತ್ಸವಕ್ಕೆಂದು ತೆರಳಿದ್ದ ಯುವಕರ ಬೈಕನ್ನು ಬಿ.ಸಿ ರೋಡ್ನ ಕನಪಾದೆ ಬಳಿ ತಡೆದ ಯುವಕರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ.

ಇದೇ ವೇಳೆ ಬಿ.ಸಿ ರೋಡ್ ಕೈಕಂಬದ ಮಿತ್ತಬೈಲ್ ಮಸೀದಿಯ ಉರೂಸ್ ಸಮಾರಂಭಕ್ಕೆ ಹಾಕಲಾಗಿದ್ದ ಬಂಟಿಂಗ್ಸ್ ಮತ್ತು ಟ್ಯೂಬ್ಲೈಟ್ಗಳಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಉದ್ಯೋಗಿಯಾಗಿರುವ ಮಹಿಳೆಯ ಮನೆಗೆ ಕಲ್ಲೆಸೆಯಲಾಗಿದೆ. ಜೊತೆಗೆ ವಿದ್ಯಾಕೇಂದ್ರಕ್ಕೂ ಕಲ್ಲೆಸೆಯಲಾಗಿದೆ. ಕಲ್ಲಡ್ಕದ ಸುತ್ತಮುತ್ತಲಿನ ಪ್ರದೇಶಗಳಾದ ಬೋಳಂಗಡಿ, ಮೆಲ್ಕಾರ್, ಬಿ.ಸಿ ರೋಡ್, ಕೈಕಂಬ, ಮಾರಿಪಳ್ಳ, ತುಂಬೆ ಹಾಗೂ ಇತರ ಕಡೆ ಬಿಗು ಬಂದೋಬಸ್ತ್ ಮಾಡಲಾಗಿದ್ದು ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿದ್ದಾರೆ.


