ಮುಂಬೈ: ಮುಂಬೈಯ ಮಲ್ಗಾಂವ್ ನೌಕಾ ಬಂದರಿನಲ್ಲಿ ಪರಿಶೀಲನೆಯಲ್ಲಿದ್ದ ನೌಕಾ ಪಡೆಯ ಹಡಗಿನಲ್ಲಿ ಉಂಟಾದ ಅನಿಲ ಸೋರಿಕೆ ದುರಂತದಲ್ಲಿ ಓರ್ವ ನೌಕಾಪಡೆಯ ಅಧಿಕಾರಿ ಮೃತಪಟ್ಟರೆ ಇತರ ಏಳು ಮಂದಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಐಎನ್ ಎಸ್ ಕೊಲ್ಕತ್ತಾದಲ್ಲಿ ಅಕಸ್ಮಾತ್ತಾಗಿ ಕಾರ್ಬನ್ ಡೈ ಆಕ್ಸೈಡ್ ವಿಭಾಗದಲ್ಲಿ ಸೋರಿಕೆಯುಂಟಾಗಿತ್ತು. ಈ ವಿಷಾನಿಲವನ್ನು ಅಧಿಕವಾಗಿ ಉಸಿರಾಡಿದ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡರು. ಇತರ ಏಳು ಮಂದಿ ನೌಕರರು ತೀವ್ರ ಅಸ್ವಸ್ಥಗೊಂಡು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅತ್ಯಾಧುನಿಕ ಯುದ್ಧ ತಂತ್ರಜ್ಞಾನಗಳನ್ನು ಹೊಂದಿರುವ ಐಎನ್ ಎಸ್ ಕೊಲ್ಕತ್ತಾದಲ್ಲಿ ನೌಕಾಪಡೆಗೆ ಸಂಬಂಧಿಸಿದ ಅತ್ಯಾಧುನಿಕ ಕ್ಷಿಪಣಿಗಳು, ಸಬ್ ಮೆರೀನ್ ನಿಯಂತ್ರಕ ತಂತ್ರಜ್ಞಾನ ಹಾಗೂ ಇತರ ಯುದ್ಧ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ನೌಕಾಪಡೆಗೆ ಸಂಬಂಧಿಸಿದ ನೌಕೆಗಳಲ್ಲಿ ಕಳೆದ ಏಳು ತಿಂಗಳಲ್ಲಿ ನಡೆದ 12ನೇ ಅಪಘಾತ ಇದಾಗಿದೆ.
ಐಎನ್ ಎಸ್ ಸಿಂಧುರಕ್ಷಕ್, ಸಿಂಧುರತ್ನ, ಐರಾವತ, ಸೇರಿದಂತೆ 12 ಯುದ್ಧನೌಕೆಗಳಲ್ಲಿ ದುರಂತಗಳು ಸಂಭವಿಸಿವೆ. ಈ ದುರಂತಗಳಿಂದ ನೌಕಾಪಡೆಯ ಯುದ್ಧನೌಕೆಗಳು ಮತ್ತು ಜಲಾಂತರ್ಗಮಿಗಳ ಸುರಕ್ಷತೆಯ ಬಗ್ಗೆ ಸಂಶಯಗಳು ಮೂಡಿವೆ.

