ನವದೆಹಲಿ: ಡಿಸೆಂಬರ್ ೨೫ ರಂದು “ಉತ್ತಮ ಆಡಳಿತ ದಿನ” ಎಂದು ಆಚರಿಸಿ ಮಕ್ಕಳ ರಜೆಗೆ ಕತ್ತರಿ ಪ್ರಯೋಗ ಮಾಡಹೊರಟಿದ್ದ ಕೇಂದ್ರ ಸರಕಾರ ಇದೀಗ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನೀಡಿ ಮಕ್ಕಳ ರಜೆಯನ್ನು ಸಜೆಯನ್ನಾಗಿ ಪರಿವರ್ತಿಸಲು ನೋಡುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

“ಉತ್ತಮ ಆಡಳಿತದ”ದ ಬಗ್ಗೆ ಮಕ್ಕಳು ಪ್ರಬಂಧ ಬರೆದು ಡಿಸೆಂಬರ್ ೨೫ ರಂದು ಸಲ್ಲಿಸಿದರೆ ೨೦೦೦ ರೂ ಬಹುಮಾನವನ್ನು ಗೆಲ್ಲಬಹುದು ಎಂದು ಸೋಮವಾರ ಹೊಸ ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ. ಉತ್ತಮ ಆಡಳಿತದ ಬಗ್ಗೆ ವಿವಿಧ ವಿಷಯಗಳ ಬಗ್ಗೆ ಈ ಪ್ರಬಂಧ ಸ್ಪರ್ಧೆ ನಡೆಯಲಿದ್ದು, ಆ ವಿಷಯಗಳನ್ನು ಡಿಸೆಂಬರ್ ೨೪ ರಂದು ಘೋಷಿಸಲಾಗುತ್ತದೆ. ಪ್ರಬಂಧವನ್ನು ವಾಟ್ಸ್ ಆಪ್ ಮೂಲಕ ಸಲ್ಲಿಸಲು ಡೆಸೆಂಬರ್ ೨೫ ರಂದು ಮಾತ್ರ ಸಮಯವಿರುತ್ತದೆ. ಒಟ್ಟು ೩೬ ಅತ್ಯುತ್ತಮ ಪ್ರಬಂಧಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಸುತ್ತೋಲೆ ತಿಳಿಸದೆ. ಈ ಸ್ಪರ್ಧೆ ಸ್ವಯಂ ಪ್ರೇರಿತವಾಗಿರುವುದರಿಂದ ಇಚ್ಛೆ ಬಂದ ಮಕ್ಕಳು ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ.

