ಬಂಟ್ವಾಳ:ಇಂಟಾಕ್ ಮಂಗಳೂರು ಅಧ್ಯಾಯ, ಎಚ್.ಇ.ಸಿ.ಎಸ್, ಇಂಟಾಕ್ ಮತ್ತು ಮಂಚಿ ಕೊಲ್ನಾಡು ಪ್ರೌಢಶಾಲೆಯ ಇಂಟಾಕ್ ಹೆರಿಟೇಜ ಕ್ಲಬ್, ಸಹಯೋಗದೊಂದಿಗೆ ಮಂಚಿ- ಕೊಳ್ಳಾಡ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಮುಖವಾಡ ತಯಾರಿ ಮತ್ತು ಮುಖವರ್ಣಿಕೆಯ ಬಗ್ಗೆ ಕಾರ್ಯಕ್ರಮವನ್ನು ಕೊಳ್ನಾಡು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.

ಇಂಟಾಕ್ ಮಂಗಳೂರು ಅಧ್ಯಾಯದ ಸದಸ್ಯರು ಹಾಗೂ ಚಿತ್ರ ಕಲಾವಿದರಾದ ರಾಜೇಂದ್ರ ಕೇದಿಗೆ ಮಾತನಾಡಿ, ಮುಖವಾಡ ತಯಾರಿ ಮತ್ತು ಮುಖವರ್ಣಿಕೆಯ ಕಲೆ ವಿದ್ಯಾರ್ಥಿಗಳಲ್ಲಿ ಕಲಾ ಕೌಶಲ್ಯ ಬೆಳೆಸುವುದಲ್ಲದೆ ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸುತ್ತದೆ. ಕಲೆಯ ಸೊಗಡನ್ನು ಮೈಗೂಡಿಸಿಕೊಂಡು ಬೆಳೆಯುವಂತಾದರೆ ಕಲಾಪ್ರಜ್ಞೆ ನಮ್ಮದಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಕಲಾವಿದ ಹರೀಶ್ ಕೊಡಿಯಾಲ್ ಬೈಲ್ ವಿದ್ಯಾರ್ಥಿಗಳಿಗೆ ಮುಖವಾಡ ತಯಾರಿಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕಲಾವಿದೆ ರೇಷ್ಮಾ ಶೆಟ್ಟಿ ಮುಖವರ್ಣಿಕೆಯ ಕುರಿತಾಗಿ ವಿದ್ಯಾರ್ಥಿಗಳಿಗೆ ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಹಾಗೂ ಬಳಸುವ ಕುರಿತಾಗಿ ಮಾಹಿತಿ ನೀಡಿದರು.
ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕರು ಸುಭಾಷ್ ಚಂದ್ರ ಮಾತನಾಡಿ, ನಮ್ಮ ನಾಡಿನ ಸಾಂಪ್ರದಾಯಿಕ ಪರಂಪರೆಗಳನ್ನು ಉಳಿಸುವ ಜವಾಬ್ದಾರಿ ನಮ ಮೇಲಿದೆ. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಈ ಆಸಕ್ತಿ ತಳೆದರೆ ಇತಿಹಾಸ ಉಳಿಸುವ ಪ್ರಯತ್ನವಾಗುತ್ತದೆ ಎಂದರು.
ಮಂಚಿ ಕೊಳ್ಳಾಡು ಪ್ರೌಢಶಾಲೆ, ನೂಜಿಬೈಲು ಅನುದಾನಿತ ಶಾಲೆ, ಮೋಂತಿಮಾರು ಶಾಲೆ, ಇರಾ ಪ್ರಾಥಮಿಕ ಶಾಲೆ, ಪುದ್ದೊಟ್ಟು ಶಾಲೆ ಇಲ್ಲಿನ ಒಟ್ಟು 60 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಂಡರು. ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಇಂಟಾಕ್ ಮಂಗಳೂರು ಅಧ್ಯಾಯದ ಸದಸ್ಯರಾದ ಶರ್ವಾಣಿ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಂಚಿ, ಕೊಲ್ನಾಡು ಪ್ರೌಢಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು, ಮೋಂತಿಮಾರು ಶಾಲಾ ಶಿಕ್ಷಕಿ ಯಶೋಧ, ಪುದ್ದೊಟ್ಟು ಶಾಲಾ ಶಿಕ್ಷಕಿ ರೇಖಾ ಹಾಗೂ ಕೊಲ್ನಾಡು ಪ್ರೌಢಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಕ ಜಗನ್ನಾಥ ಪುರುಷ ಸ್ವಾಗತಿಸಿ, ತಾರಾನಾಥ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು, ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ವಂದಿಸಿದರು.
