ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ, ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಲಕ್ಷಪ್ಪ ಕೋಡಿ ನಿವಾಸಿ ನರಸಿಂಹ ಶೆಟ್ಟಿ ಯಾನೆ ಮಾಣಿ ನರಸಿಂಹ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಜಿಲ್ಲೆಗೆ ಗಡಿಪಾರು ಮಾಡುವ ಕುರಿತಂತೆ ಜಿಲ್ಲಾ ಪೊಲೀಸ್ ಕಾರಣ ಕೇಳಿ ಜಾರಿಗೊಳಿಸಿದ್ದ ನೋಟಿಸನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಿಂಪಡೆದಿದ್ದಾರೆ.

ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರು ಸಲ್ಲಿಸಿರುವ ಪ್ರಸ್ತಾವನೆಯ ಆಧಾರದ ಹಿನ್ನಲೆಯಲ್ಲಿ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ನರಸಿಂಹ ಶೆಟ್ಟಿ ಮಾಣಿ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನೋಟಿಸ್ ಜಾರಿಗೊಳಿಸಿ ಈ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸೆ. 9, 2026ರೊಳಗಾಗಿ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರ ಹಾಜರುಪಡಿಸುವಂತೆ ಸೂಚಿಸಲಾಗಿತ್ತು.
ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ರಿಟ್ ಪಿಟಿಷನ್ ನಂಬರ್ 104096/2026 ರ ಅನ್ವಯ ನರಸಿಂಹ ಮಾಣಿಯವರ ಗಡಿಪಾರು ಪ್ರಕ್ರಿಯೆಯನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸೋಮವಾರವೇ ಮರುನೋಟಿಸ್ ಜಾರಿಗೊಳಿಸಿದ್ದಾರೆ.
ಗಡಿಪಾರು ಪ್ರಕ್ರಿಯೆಯನ್ನು ಮುಂದುವರೆಸಬೇಕಾದಲ್ಲಿ ವಾದಿದಾರರು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.ಹೊಸದಿಗಂತ ಹಿ.ಜಾ.ವೇ.ಮುಖಂಡ ನರಸಿಂಹ ಮಾಣಿಯವರನ್ನು ದ.ಕ.ಜಿಲ್ಲೆಯಿಂದ ಹೊರಜಿಲ್ಲೆಗೆ ಗಡಿಪಾರು ನೋಟೀಸು ಜಾರಿಗೊಳಿಸಿರುವ ಕುರಿತಾಗಿ ಸೋಮವಾರ ಸುದ್ದಿ ಪ್ರಕಟಿಸಿ ಗಮನಸೆಳೆದಿತ್ತು.ಇದೀಗ ನರಸಿಂಹಮಾಣಿ ಅವರನ್ನು ದ.ಕ.ಜಿಲ್ಲೆಯಿಂದ ಹೊರಜಿಲ್ಲೆಗೆ ಗಡಿಪಾರುಗೊಳಿಸುವ ಕುರಿತಂತೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೇ ಉಚ್ಚ ನ್ಯಾಯಾಲಯದ ರಿಟ್ ಪಿಟಿಷನ್ ವೊಂದರ ಅನ್ವಯ ಗಡಿಪಾರು ನೋಟೀಸನ್ನು ಹಿಂಪಡೆದಿದ್ದಾರೆ.
