ಬಂಟ್ವಾಳ :ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲ್ವೇ ನಿಲ್ದಾಣದ ಬಳಿ ಹೊಸತಾಗಿ ನಿರ್ಮಾಣವಾಗುವ ರಿಕ್ಷಾ ಪಾರ್ಕಿಂಗ್ನಲ್ಲಿ ಪರ್ಮಿಟ್ ಹೊಂದಿರುವ ರಿಕ್ಷಾಕ್ಕೆ ಮಾತ್ರ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ.ಕ.ಜಿಲ್ಲಾ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಗಳ ಒಕ್ಕೂಟದ ಬಂಟ್ವಾಳ ತಾಲೂಕು ಘಟಕದ ನಿಯೋಗ ಸಂಸದರಿಗೆ ಮನವಿ ಸಲ್ಲಿಸಿದೆ.

ಶುಕ್ರವಾರ ಪುನರ್ ಅಭಿವೃದ್ಧಿಗೊಂಡ ಬಂಟ್ವಾಳ ರೈಲ್ವೇ ನಿಲ್ದಾಣದ ಉದ್ಘಾಟನಾ ಸಮಾರಂಭದ ಬಳಿಕ ದ. ಕ.ಜಿಲ್ಲಾ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಗಳ ಒಕ್ಕೂಟದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ನೇತೃತ್ವದ ಆಟೋ ಚಾಲಕರ ನಿಯೋಗ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಮಂಗಳೂರು ರೈಲ್ವೆ ನಿಲ್ದಾಣದಲ್ಲಿರುವಂತೆ ಇಲ್ಲಿಯೂ ರಿಕ್ಷಾ ಪಾರ್ಕಿಂಗ್ ವ್ಯವಸ್ಥಿತ ರೀತಿಯಲ್ಲಿ ಕಾರ್ಯಾಚರಿಸುವಂತೆ ಕಾನೂನು ಬದ್ದವಾಗಿ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದವರಿಗೆ ನಿರ್ದೇಶಿಸುವಂತೆಯು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ರಿಕ್ಷಾ ಚಾಲಕರು ಸರದಿ ಪ್ರಕಾರ ರಿಕ್ಷಾ ಚಾಲಕರು ಬಾಡಿಗೆ ಮಾಡುತ್ತಿದ್ದು, ಯಾವುದೇ ತಕರಾರು ಬರುವುದಿಲ್ಲ. ಅದೇ ಕ್ರಮವನ್ನು ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿಯು ಸರತಿ ಸಾಲನ್ನು ಅನುಸರಿಸುವಂತೆ ಹಾಗೂ ಇಲ್ಲಿ ಪರ್ಮಿಟ್ ಹೊಂದಿರುವ ರಿಕ್ಷಾಗಳಿಗೆ ಮಾತ್ರ ಪಾರ್ಕಿಂಗ್ ಗೆ ಅನುಮತಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿ, ಮುಂದಿನ ದಿನದಲ್ಲಿ ಈ ಪಾರ್ಕಿಂಗ್ನಲ್ಲಿ ಯಾವುದೇ ರೀತಿಯಲ್ಲಿ ತಕರಾರು ಬಾರದಂತೆ ಮುಂಚಿತವಾಗಿಯೇ ಕ್ರಮಕ್ಕೆ ನಿರ್ದೇಶಿಸಬೇಕೆಂದು ಒತ್ತಾಯಿಸಲಾಗಿದೆ.
ಒಕ್ಕೂಟದ ಪದಾಧಿಕಾರಿಗಳಾದ ಸುರೇಶ್ ಬಿ.ಸಿ.ರೋಡ್, ಸತೀಶ್ ಗಾಣದ ಪಡ್ಪು ಮೊದಲಾದವರು ಈ ಸಂದರ್ಭ ಹಾಜರಿದ್ದರು.
