ಬಂಟ್ವಾಳ :ಕೇಂದ್ರ ಸರಕಾರದ ಮಹತ್ತರ ಯೋಜನೆಯಲ್ಲೊಂದಾದ ಅಮೃತ್ ಭಾರತ ಸ್ಟೇಷನ್ ಯೋಜನೆಯಡಿ 2024 ರ ಮಾಚ್೯ ನಲ್ಲಿ 26.18 ಕೋ. ರೂ. ವೆಚ್ಚದಲ್ಲಿ ಪುನ‌ರ್ ಅಭಿವೃದ್ಧಿಗೆ ಶಂಕುಸ್ಥಾಪನೆಗೊಂಡ “ಬಂಟವಾಳ ರೈಲ್ವೇ ನಿಲ್ದಾಣ” ಪ್ರಸ್ತುತ  ಅತ್ಯಾಧುನಿಕವಾಗಿ ಹೈಟೆಕ್ ಸ್ವರೂಪ ಪಡೆದುಕೊಂಡು ಲೋಕಾರ್ಪಣೆಗೂ ಸಿದ್ದಗೊಂಡಿದೆ.

 
oppo_2
oppo_2


ರೈಲ್ವೆ ನಿಲ್ದಾಣದ ಪುನ‌ರ್ ನಿರ್ಮಾಣದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರೈಲ್ವೇ ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಅವರು ಜುಲೈ 17 ರಂದು ಲೋಕಾರ್ಪಣೆಗೊಳ್ಳುಲಿದೆ  ಎಂದು ತಿಳಿಸಿದ್ದಾರೆ.

 

ರೈಲು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಿ ನಿಲ್ದಾಣದ ಮೂಲ ಸೌಕರ್ಯವನ್ನು ಆಧುನೀಕರಣಗೊಳಿಸಲಾಗಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಿರುವುದರ ಜೊತೆಗೆ ಸಂಚಾರ ವ್ಯವಸ್ಥೆಯ ಸುಧಾರಣೆ ಮತ್ತು ಸೌಂದರ್ಯವರ್ಧನೆಗೆ ಒತ್ತು ನೀಡಲಾಗಿದೆ ಎಂದ ಅವರು, ಈ ಯೋಜನೆಯ ಪ್ರಮುಖ ಭಾಗವಾಗಿ, ನಿರೀಕ್ಷಣಾ ಮಂದಿರಗಳು ಮತ್ತು ಟಿಕೆಟ್‌ ಬುಕ್ಕಿಂಗ್ ಕೌಂಟರುಗಳ ಸುಧಾರಣೆ ಮಾಡಲಾಗಿದೆ ಎಂದರು.

ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮತ್ತು  ಹೆಚ್ಚುವರಿ ಅನುಕೂಲತೆಗಳನ್ನು ರೂಪಿಸಲಾಗಿದೆ. ನಿಲ್ದಾಣದ ವಿನ್ಯಾಸವನ್ನು ಸುಧಾರಿಸಲು ಸುತ್ತಾಟ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದ್ದು, ವಾಹನಗಳ ಸಂಚಾರವನ್ನು ಸರಳಗೊಳಿಸಲು ಡ್ರಾಪ್-ಆಫ್ ಮತ್ತು ಪಿಕ್-ಅಪ್ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಮತ್ತು ಸುರಕ್ಷತೆಯು ಹೆಚ್ಚಾಗಿದೆ ಎಂದು ವಿವರಿಸಿದರು.
ಪ್ಲಾಟ್ ಫಾರ್ಮ್ ಮೂಲ ಸೌಕರ್ಯವನ್ನು ಬಲಪಡಿಸಲು ಪೂರ್ಣ ಉದ್ದದ ಪ್ಲಾಟ್ ಫಾರ್ಮ್ ಸೆಕ್ಟರುಗಳನ್ನು ಒದಗಿಸಲಾಗಿದ್ದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ ಪ್ರಯಾಣಿಕರಿಗೆ ರಕ್ಷಣೆ ಸಿಗಲಿದೆ. ನಿಲ್ದಾಣ ಕಟ್ಟಡದ ಮುಂಭಾಗದಲ್ಲಿನ ಪ್ಲಾಟ್ ಫಾರ್ಮ್ ಮೇಲ್ಮ ಸುಧಾರಣೆ ಮಾಡಲಾಗಿದ್ದು, ಸುರಕ್ಷತೆ, ದೀರ್ಘಾವಧಿ ಬಳಕೆ ಮತ್ತು ಸುಲಭ ಸಂಚಾರಕ್ಕೆ ಅನುಕೂಲವಾಗಿದೆ ಎಂದ ಅವರು, ಯೋಜನೆಯ ಭಾಗವಾಗಿ, ನಿಲ್ದಾಣದ ಒಳಾಂಗಣ ಸುಧಾರಣೆ, ಆಧುನಿಕ ಫರ್ನಿಚರ್, ಬೆಳಕು ವ್ಯವಸ್ಥೆ ಮತ್ತು ಲ್ಯಾಂಡ್ ಸ್ಕೆಪಿಂಗ್ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ನಿಲ್ದಾಣವು ಹೆಚ್ಚು ಆರಾಮದಾಯಕ ಹಾಗೂ ಆಕರ್ಷಕ ವಾತಾವರಣವನ್ನು ಹೊಂದಿದೆ.ಪ್ರವೇಶ,ನಿರ್ಗಮನ ಕಮಾನುಗಳು ನಿರ್ಮಿಸುವ ಮೂಲಕ ನಿಲ್ದಾಣದ ವಾಸ್ತು ಶೈಲಿಯನ್ನು ಸುಧಾರಿಸಲಾಗಿದ್ದು, ವಿಶಿಷ್ಟ ಹಾಗೂ ಸ್ವಾಗತಾರ್ಹ ರೂಪ ನೀಡಲಾಗಿದೆ ಎಂದರು.



ವಿದ್ಯುತ್‌ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡಲಾಗಿದೆ. ಉನ್ನತ ಮಟ್ಟದ ಬೆಳಕು ವ್ಯವಸ್ಥೆ, ಎಲ್ ಇ ಡಿ ಪ್ಲಾಟ್ ಫಾರ್ಮ್ ಹೆಸರು ಫಲಕಗಳು, ಎಲ್ ಇ ಡಿ ಸೈನ್ ಬೋರ್ಡುಗಳು ಮತ್ತು ಫಸಾಡ್ ಲೈಟಿಂಗ್ ಅಳವಡಿಸಲಾಗಿದೆ, ಇದರಿಂದ ದೃಶ್ಯತೆ ಹೆಚ್ಚುವುದರ ಜೊತೆಗೆ ವಿದ್ಯುತ್ ಉಳಿತಾಯವೂ ಸಾಧ್ಯವಾಗಿದೆ. ಪ್ರಯಾಣಿಕರ ಮಾಹಿತಿಗಾಗಿ ಕೋಚ್ ಇಂಡಿಕೇಷನ್ ಫಲಕಗಳು, ರೈಲು ಇಂಡಿಕೇಷನ್ ಬೋರ್ಡುಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ ಮತ್ತು ಗಡಿಯಾರಗಳು ಒದಗಿಸಲಾಗಿದ್ದು, ಒಟ್ಟಾರೆ ಬಂಟ್ವಾಳ ರೈಲು ನಿಲ್ದಾಣದ ಪುನರ್ ಅಭಿವೃದ್ಧಿ ಯೋಜನೆಯು ಪ್ರಯಾಣಿಕರ ಆರಾಮ, ಸಂಚಾರ ವ್ಯವಸ್ಥೆಯ ಸುಧಾರಣೆ ಮತ್ತು ಮೂಲ ಸೌಕರ್ಯ ನವೀಕರಣದ ಮೇಲೆ ಕೇಂದ್ರೀಕರಿಸಿ, ನಿಲ್ದಾಣವನ್ನು ಆಧುನಿಕ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದರು.
ಈ ಸಂದರ್ಭ ನೈರುತ್ಯ ರೈಲ್ವೆ ಮೈಸೂರು ವಿಭಾಗದ ಹಿರಿಯ ಪ್ರಚಾರ ನಿರೀಕ್ಷಕ ಎಚ್ ಶಿವಕುಮಾರ್ ಹಾಗೂ ಮನು ಎಚ್ ಆರ್ ಜೊತೆಗಿದ್ದರು. 

By Suddi9

Leave a Reply

Your email address will not be published. Required fields are marked *