ಬಂಟ್ವಾಳ :ಸ್ವತಂತ್ರ ಭಾರತದಲ್ಲಿ ನಡೆಯುತ್ತಿರುವ ಜಿಹಾದಿ ಘಟನೆಗಳು, ಭಯೋತ್ಪಾದನೆ, ಮತಾಂತರ, ಲವ್ ಜಿಹಾದ್, ಗೋ ಹತ್ಯೆಯಂತಹ ಸವಾಲುಗಳಿಗೆ ‘ಹಿಂದೂ ರಾಷ್ಟ್ರ’ವೇ ಏಕೈಕ ಪರಿಹಾರವಾಗಿದ್ದು, ಸಮಸ್ತ ಹಿಂದೂ ಸಮಾಜ ಜಾತಿ-ಪಂಥ ಮರೆತು ಒಗ್ಗೂಡಬೇಕು. ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯದ ಸಂಕಲ್ಪದೊಂದಿಗೆ, ದಿನಕ್ಕೆ ಒಂದು ಗಂಟೆಯಾದರೂ ಧರ್ಮ ಕಾರ್ಯಕ್ಕಾಗಿ ಮೀಸಲಿಟ್ಟು ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಡಾ. ಪ್ರಣವ್ ಮಲ್ಯ ಕರೆ ನೀಡಿದ್ದಾರೆ.ಬಂಟ್ವಾಳ ತಾಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಸಭಾಗೃಹದಲ್ಲಿ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪುತ್ತೂರಿನ ನ್ಯಾಯವಾದಿ ಗಿರೀಶ್ ಮಳಿ ಮಾತನಾಡಿ, ಅವರು ಹಿಂದೂ ಸಮಾಜವು, ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿದ್ದರೂ ಅನೇಕ ಶೋಷಣೆ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ, ಪ್ರತಿಯೊಂದು ಹಳ್ಳಿಯಲ್ಲು ಧರ್ಮ ಶಿಕ್ಷಣವನ್ನು ವಿಸ್ತರಿಸುವುದು ಹಾಗೂ ಪ್ರತಿ ಹಿಂದೂ ಮನೆಯಲ್ಲಿ ಗೋಸಂವರ್ಧನೆಯ ಸಂಕಲ್ಪ ಮಾಡುವುದು ಅತ್ಯಂತ ಮುಖ್ಯವಾಗಿದೆ. ಧರ್ಮದ ಅಸ್ತಿತ್ವ ಮತ್ತು ಗೋಸಂಪತ್ತಿನ ರಕ್ಷಣೆಗಾಗಿ ನಾವೆಲ್ಲರೂ ಒಗ್ಗೂಡಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಹಿಂದೆ ವಿಜ್ಞಾನ ಮತ್ತು ಆಧ್ಯಾತ್ಮಿಕ ಅಧಿಷ್ಠಾನವಿದೆ ಎಂದು ಸನಾತನ ಸಂಸ್ಥೆಯ ನ್ಯಾ. ತೀರ್ಥೇಶ್ ಅವರು ತಿಳಿಸಿದರು.
ಕೇವಲ ಸಂಪ್ರದಾಯದ ಆಚರಣೆಯಷ್ಟೇ ಸಾಲದು, ಅದರ ಹಿಂದಿನ ಶಾಸ್ತ್ರವನ್ನು ಅರಿತು ಧರ್ಮಪಾಲನೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಬರಲಿರುವ ಭೀಕರ ಆಪತ್ಕಾಲವನ್ನು ಎದುರಿಸಲು ನಮಗೆ ಭೌತಿಕ ಶಕ್ತಿಗಿಂತ ಆಧ್ಯಾತ್ಮಿಕ ಬಲದ ಅವಶ್ಯಕತೆಯಿದೆ ಎಂದರು.
ದೀಪಪ್ರಜ್ವಲನೆ, ವೇದಮಂತ್ರ ಘೋಷದೊಂದಿಗೆ ಸಭೆಯನ್ನು ಆರಂಭಿಸಲಾಯಿತು. ರಾಯಿ ಗ್ರಾ.ಪಂ. ಅಧ್ಯಕ್ಷರಾದ ಸಂತೋಷ್ ಕುಮಾರ್ ರಾಯಿ, ಉದ್ಯಮಿ ದುರ್ಗಾದಾಸ್ ಶೆಟ್ಟಿ ಮಾವಂತೂರು, ಗರುಡ ಮಹಾಕಾಳಿ ಟ್ರಸ್ಟಿ ಜಗದೀಶ್ ಆಳ್ವ, ರಂಜನ್ ಶೆಟ್ಟಿ ಅರಳ ಹಾಗೂ ಸುಕುಮಾರ್ ಶೆಟ್ಟಿ ಅರಳ ಅವರು ಉಪಸ್ಥಿತರಿದ್ದರು.
