ಬಂಟ್ವಾಳ:ಹೋಮ, ಹವನ,ಪೂಜೆಯನ್ನು ನಮ್ಮಸಮಾಜದಲ್ಲಿ ವ್ಯಕ್ತಿಗತ ಸಾಧನೆಗಾಗಿ ಮಾಡುವ ಸಂಪ್ರದಾಯವಿದ್ದು,ಇಲ್ಲಿ ರಾಮ ತಾರಕ ಯಜ್ಞವನ್ನು ಸಮಸ್ತ ಹಿಂದೂ ಸಮಾಜದ ಹಿತಕ್ಕಾಗಿ ಆಯೋಜಿಸಿರುವುದು ಅಭಿನಂದನೀಯವಾಗಿದೆ ಎಂದುಅಖಿಲ ಭಾರತ ಗ್ರಾಮ ವಿಕಾಸ ಟೋಳಿ ಸದಸ್ಯರಾದ ರಮೇಶ್ ಹೊಸು ಅವರು ಹೇಳಿದ್ದಾರೆ.

ಭಾನುವಾರ ತಾಲೂಕಿನ ಪುದು-ಕಳ್ಳಿಗೆ ಗ್ರಾಮದ ನೆತ್ತರಕೆರೆಯಲ್ಲಿ ನಡೆದ”ಶ್ರೀ ರಾಮ ನಾಮ ತಾರಕ ಜಪ ಯಜ್ಞ” ದ ಪ್ರಯುಕ್ತ ನಡೆದ ಸುಧರ್ಮ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣಗೈದರು.
ಸಮಸ್ತ ಹಿಂದೂ ಸಮಾಜದ ಹಿತವನ್ನುಬಯಸುವ ಧರ್ಮವಿದ್ದರೆ ಅದು ಹಿಂದೂ ಧರ್ಮಮಾತ್ರ, ನಾವಿಂದು ಇಂಗ್ಲಿಷ್ ವ್ಯಾಮೋಹದಿಂದಾಗಿ ನಮ್ಮ ನೈಜ ಸಂಸ್ಕೃತಿಯನ್ನು ಮರೆಯುತ್ತಿದ್ದೆವೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಇಂತಹ ಧಾರ್ಮಿಕ ಆಚರಣೆಗಳು ಹಿಂದೂ ಸಮಾಜದ ಸಂಘಟನೆ, ನಮ್ಮತನವನ್ನು ಉಳಿಸಿ,ಬೆಳೆಸಿ ಸ್ವಾವಲಂಬಿ ಬದುಕಿಗೆ ಹಾಗೂ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.
ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವದಾಸ್ ಕೆ.ಆರ್ ಕೊಡ್ಮಾಣ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನೆತ್ತರಕೆರೆಯಂತಹ ಪವಿತ್ರವಾದ ಮಣ್ಣಿನಲ್ಲಿ ಸಮಸ್ತ ಹಿಂದೂ ಸಮಾಜವನ್ನು ಒಟ್ಟುಸೇರಿಸಿಕೊಂಡು ಸಾಮೂಹಿಕವಾಗಿ ರಾಮ ನಾಮ ಜಪ ಯಜ್ಞವನ್ನು ಆಯೋಜಿಸಿ ಸತ್ಯ ದರ್ಶನ ಮಾಡಿದ ಎಲ್ಲರಿಗೂ ಶ್ರೀ ರಾಮನ ಅನುಗ್ರಹವಿರಲಿ ಎಂದರು.
ಬಂಟ್ವಾಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಾಲಕ ಡಾ ಬಾಲಕೃಷ್ಣ, ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಕಾರ್ಯದರ್ಶಿ ಬಿನುತ್ ಕುಮಾರ್, ಕೋಶಾಧಿಕಾರಿ ಕಿಶೋರ್ ಕುಮಾರ್ ಮವೇದಿಕೆಯಲ್ಲಿ ಉಪಸ್ಥಿತರಿದ್ದರು
ಶ್ರೀ ರಾಮ ತಾರಕ ಜಪ ಯಜ್ಞದ ಸಂಯೋಜಕರಾದ ದಾಮೋದರ ನೆತ್ತರಕೆರೆ ಪ್ರಸ್ತಾವನೆಗೈದು, ಸ್ವಾಗತಿಸಿದರು,ಇನ್ನೋರ್ವ ಸಂಯೋಜಕರಾದ ತೇವು ತಾರಾನಾಥ ಕೊಟ್ಟಾರಿ ವಂದಿಸಿದರು.
ಮನಿಷಾ ಮಾತಾಜಿ ಹಾಗೂ ಲತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು
