ನ.೧೮ ರಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ರಮಾನಾಥ ರೈ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ
ಬಂಟ್ವಾಳ : ಧಾರ್ಮಿಕ ಚಿಂತನೆಯ ಹಿನ್ನೆಲೆಯಲ್ಲಿ, ಆದರ್ಶಪ್ರಾಯರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಬೆಳ್ಳಿಪ್ಪಾಡಿ ರಮಾನಾಥ ರೈ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವು ನ.18 ರಂದು ಬಿ.ಸಿ.ರೋಡ್ ನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅವರು ತಿಳಿಸಿದ್ದಾರೆ.

ಶನಿವಾರ ಬಿ.ಸಿ.ರೋಡ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಅಂದು ಬೆಳಗ್ಗೆ ೮ ರಿಂದ ಮಹಾಗಣಪತಿ ಹೋಮ, ಉಪಾಹಾರದ ನಂತರ ಅಭಿನಂದನಾ ಸಮಾರಂಭ ನಡೆಯಲಿದೆ.ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳವರು ಕಾರ್ಯಕ್ರಮ ಉದ್ಘಾಟಿಸಿ ಅರ್ಶೀವಚನಗೈಲಿದ್ದಾರೆ ಎಂದು ಹೇಳಿದರು.

ಸಮಿತಿ ಅಧ್ಯಕ್ಷರು ಅಧ್ಯಕ್ಷತೆ ವಹಿಸಲಿದ್ದು.ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಅವರು ಅಭಿನಂದನಾ ಭಾಷಣ ಮಾಡುವರು. ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಅವರು ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿರುವರು. ಬಡಗಬೆಳ್ಳೂರು ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದ.ಕ. ನಿರ್ದೇಶಕ ದಿನೇಶ್ ಅವರು ಅತಿಥಿಗಳಾಗಿ ಭಾಗವಹಿಸಲಿರುವರು. ಮಧ್ಯಾಹ್ನ ಭೋಜನ ಬಳಿಕ ಶಾಂಭವಿ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಇಬ್ಬರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ನಿಸ್ವಾರ್ಥ ಮನೋಭಾವ,ಅಭಿಮಾನದಿಂದ ಸಮಾನ ಮನಸ್ಕರು ಸೇರಿಕೊಂಡು ಈ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆಯೇ ಹೊರತು ಯಾವುದೇ ರಾಜಕೀಯ ಅಥವಾ ಹಿಡನ್ ಅಜೆಂಡಾ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದರು.
ಸಮಿತಿ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ ಅಳದಂಗಡಿ ಅವರು ಮಾತನಾಡಿ, ಸರ್ವ ಧರ್ಮೀಯರೊಂದಿಗೆ ಅನ್ಯೋನ್ಯತೆ ಹೊಂದಿದ, ಸಮಾಜಕ್ಕೆ ನೀಡಿದ ಕೊಡುಗೆ,ಎಲ್ಲರ ಪ್ರೀತಿ ಪಾತ್ರರಾದ ಆದರ್ಶ ವ್ಯಕ್ತಿಗಳಾದ ಹರಿಕೃಷ್ಣ ಪುನರೂರು ಮತ್ತು ರಮಾನಾಥ ರೈ ಅವರನ್ನು ಗೌರವಿಸಲಾಗುತ್ತಿದೆ,ಪ್ರತಿಯೋರ್ವರು ಇದರಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಸಮಿತಿ ಪ್ರ.ಸಂಚಾಲಕ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾತನಾಡಿ,ಕಾರ್ಯಕ್ರಮವನ್ನು ಅಚ್ಚುಕಟ್ಟು ಮತ್ತು ಶಿಸ್ತುಬದ್ಧವಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಉಪಸಮಿತಿಗಳು ಶ್ರಮಿಸುತ್ತಿದೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಸಮಿತಿ ಪದಾಧಿಕಾರಿಗಳಾದ ವಿಶ್ವನಾಥ ಬಿ.ಸಿ.ರೋಡ್, ದೇವಪ್ಪ ಕುಲಾಲ್, ರಾಮಗಣೇಶ ಕೈಕುಂಜೆ, ಜಯರಾಮ ಶೇಖ, ಅನಾರು ಕೃಷ್ಣ ಶರ್ಮ, ಸೇಸಪ್ಪ ಮಾಸ್ಟರ್ ತುಂಬೆ, ಸೀತಾರಾಮ ಶೆಟ್ಟಿ, ಎಚ್.ಕೆ.ನಯನಾಡು, ರವೀಂದ್ರ ಕುಕ್ಕಾಜೆ,ಜಯರಾಮ ಪೂಜಾರಿ, ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಕಿಶೋರ್ ಕಿರಂತಬೆಟ್ಟು, ಕಿಶೋರ್ ಭಂಡಾರಿ, ಧ.ಗ್ರಾ.ಯೋಜನೆ ಮೇಲ್ವಿಚಾರಕ ಗಿರೀಶ್ ಉಪಸ್ಥಿತರಿದ್ದರು.



