ಅಣ್ಣಳಿಕೆ: ಅಗಲಿದ ಯಕ್ಷಗಾನ ಕಲಾವಿದರ ಸಂಸ್ಮರಣೆ
ಬಂಟ್ವಾಳ: ಇಲ್ಲಿಗೆ ಸಮೀಪದ ಅಣ್ಣಳಿಕೆ ಯಕ್ಷಾಭಿಮಾನಿಗಳು ಮತ್ತು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಅಗಲಿದ ಯಕ್ಷಗಾನ ಕಲಾವಿದರ ಸಂಸ್ಮರಣೆ ಕಾರ್ಯಕ್ರಮ ಅಣ್ಣಳಿಕೆ ಶ್ರೀ ವಿಘ್ನೇಶ್ವರ ಸಭಾಂಗಣ ದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಗಲಿದ ಹಾಸ್ಯ ಕಲಾವಿದ ಸಿದ್ದಕಟ್ಟೆ ಪದ್ಮನಾಭ ಶೆಟ್ಟಿಗಾರ್, ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಮತ್ತು ಹಿರಿಯ ಅರ್ಥಧಾರಿ ಶಂಭು ಶರ್ಮ ವಿಟ್ಲ ಇವರಿಗೆ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ನುಡಿನಮನ ಸಲ್ಲಿಸಿದರು.
ಇದೇ ವೇಳೆ ಜಿಲ್ಲೆಯ ಆಯ್ದ ಕಲಾವಿದರಿಂದ ‘ಶ್ರೀ ರಾಮಾನುಗ್ರಹ’ (ಕನ್ಯಾತರಂಗ) 17ನೇ ವರ್ಷದ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.
ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ನಿವೃತ್ತ ಮುಖ್ಯಶಿಕ್ಷಕ ಶ್ರೀಪತಿ ಭಟ್ ಪುಂಚೋಡಿ, ಮುಖ್ಯಶಿಕ್ಷಕ ಹರಿಪ್ರಸಾದ್ ಭಟ್ ಹೋರಂಗಳ ಶುಭ ಹಾರೈಸಿದರು.
ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ, ಕಾರ್ಯಕ್ರಮ ಸಂಘಟಕ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ ಸ್ವಾಗತಿಸಿ, ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ವಂದಿಸಿದರು



