`ಧರ್ಮಾವಲೋಕನ’ ಎಂಬ ವಿಶಿಷ್ಟ ಕಾರ್ಯಕ್ರಮದ ಪೂರ್ವಭಾವಿ ಸಭೆ
ಕೈಕಂಬ: ಹಿಂದೂ ಸಮಾಜಕ್ಕೆ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಧಾರ್ಮಿಕ ಆಚಾರ-ವಿಚಾರ, ಸಂಸ್ಕೃತಿ, ಆಚರಣೆಗಳು ಆಧುನಿಕ ಕಾಲಘಟ್ಟದಲ್ಲಿ ನಶಿಸಿ ಹೋಗುತ್ತಿದೆ. ದೈವ-ದೇವಾರಾಧನೆಯ ಮೂಲ ಹಾಗೂ ನೈಜ ಸಂಸ್ಕೃತಿ-ಆಚರಣೆಯ ಪುನರ್-ಅನುಸಂಧಾನ ಮತ್ತು ಹಿಂದೂ ಸಮುದಾಯ ಒಗ್ಗೂಡಿಸುವ ಉದ್ದೇಶದಿಂದ ಸಮುದಾಯಗಳು ಮತ್ತು ಸಂಘ-ಸAಸ್ಥೆಗಳನ್ನು ಒಂದೇ ವೇದಿಕೆಯಡಿ ಕರೆತಂದು ವಿಚಾರ-ವಿಮರ್ಶೆ ಮಾಡಿ, ಹಿಂದೂ ಧಾರ್ಮಿಕತೆಯ ಪ್ರಾವಿತ್ರ್ಯತೆ ಉಳಿಸುವ ವಿಷಯದಲ್ಲಿ ಮುಂದಿನ ಪೀಳಿಗೆಗೆ ನಮ್ಮಿಂದಾದ ಕೊಡುಗೆ ನೀಡುವ ಪ್ರಯತ್ನವಾಗಿ ಮುಂಬರುವ ದಿನಗಳಲ್ಲಿ ಆಯೋಜಿಸಲಾಗುವ `ಧರ್ಮಾವಲೋಕನ’ ಎಂಬ ವಿಶಿಷ್ಟ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಚಾಲನೆ ನೀಡಲಾಯಿತು.

ಧರ್ಮಾವಲೋಕನ ಸಭೆಯ ಪೂರ್ವಭಾವಿ ಸಭೆ ನ. ೯ರಂದು ಮಂಗಳೂರಿನ ಖಾಸಗಿ ಸಭಾಗೃಹದಲ್ಲಿ ನಡೆಯಿತು. `ಧರ್ಮಾವಲೋಕನ’ ಸಭೆಯು ಡಿಸೆಂಬರ್ ೧೪ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ರಾಮಕೃಷ್ಣ ಪಿಯು ಕಾಲೇಜಿನ ಸಭಾಭವನದಲ್ಲಿ ಮಧ್ಯಾಹ್ನ ೩ರಿಂದ ರಾತ್ರಿ ೧೦ರವರೆಗೆ ನಡೆಯಲಿದೆ. ಸಭಾಧ್ಯಕ್ಷರನ್ನಾಗಿ ಗುರುಪುರ ದೋಣಿಂಜೆಗುತ್ತು ಗಡಿಕಾರ ಪ್ರಮೋದ್ ಕುಮಾರ್ ರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪೂರ್ವಭಾವಿ ಸಭೆಯನ್ನುದ್ದೇಶಿಸಿ ರೈ ಅವರ ಮಾತನಾಡಿ, ದೇವಸ್ಥಾನ ಮತ್ತು ದೈವಸ್ಥಾನಗಳ ಧಾರ್ಮಿಕ ವಿಚಾರದಲ್ಲಿ ಅಂದರೆ, ಆಚಾರ-ವಿಚಾರದಲ್ಲಿ ಭಕ್ತರಲ್ಲಿ ನಂಬಿಕೆ, ಭಯಭಕ್ತಿ ಕಡಿಮೆಯಾಗುತ್ತಿದೆ. ಇದಕ್ಕೆ `ವಾಣಿಜ್ಯೀಕರಣ’, ವ್ಯಕ್ತಿ ಪ್ರತಿಷ್ಠೆ, ರಾಜಕೀಯ ಕಾರಣವಾಗಿದ್ದರೂ, ಇದರಿಂದ ಹೊರಬಂದು ದೈವ-ದೇವಾರಾಧನೆ, ನಾಗಾರಾಧನೆ, ಯಕ್ಷಗಾನದಂತಹ ಆಚರಣೆಗಳ ಮೂಲ ಪರಂಪರೆಯ ಚೌಕಟ್ಟಿನ ಬಗ್ಗೆ ಹಿರಿಯರು ಹಾಕಿ ಕೊಟ್ಟಿರುವ ಶಿಷ್ಟಾಚಾರ ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ. ಈ ದೃಷ್ಟಿಯಿಂದ ಧರ್ಮಾವಲೋಕನ ಸಭೆ ಮಹತ್ವವೆನಿಸಲಿದ್ದು, ಇದರಲ್ಲಿ ಹಿಂದೂ ಸಮಾಜ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಯಾವುದೇ ಧಾರ್ಮಿಕ ಆಚರಣೆಯಲ್ಲಿ ದೇವರು, ದೈವಗಳು ಎಲ್ಲಕ್ಕೂ ಮಿಗಿಲಾದ ಶಕ್ತಿಗಳಾಗಿರಬೇಕು. ದೈವಾರಾಧನೆಯಲ್ಲಿ `ಕೊಡಿಯಡಿ’ಗೆ(ಧ್ವಜಸ್ತಂಭ) ಮಹತ್ವ ಸಲ್ಲಬೇಕು. ಆರಾಧನೆಯಲ್ಲಿ ಆಡಂಬರ, ಅದ್ದೂರಿಗಳಿಗೆ ಆದ್ಯತೆ ನೀಡದೆ, ಸತ್ಯಕ್ಕೆ ಮಹತ್ವ ಸಿಗಬೇಕು. ಈ ಮೂಲಕ ಮನುಷ್ಯ ನೆಮ್ಮದಿಯಿಂದ ಜೀವಿಸಲು ಸಾಧ್ಯವಿದೆ. ಇದರಿಂದ ಹೊರತಾದ ಡಂಭಾಚಾರ ಬೇಡ. ಭವಿಷ್ಯದ ಪೀಳಿಗೆ ಇದನ್ನರಿತಾದ ಮಾತ್ರ ದೈವಾರಾಧನೆ ಅಥವಾ ದೇವಾರಾಧನೆ ಧಾರ್ಮಿಕ ಆಚಾರ-ವಿಚಾರ, ಸಂಸ್ಕೃತಿ-ಸAಸ್ಕಾರಗಳು ತನ್ನ ನೈಜ ಸ್ವರೂಪದಲ್ಲಿ ಜೀವಂತವಾಗಿರಲು ಸಾಧ್ಯ ಎಂದವರು ಹೇಳಿದರು.
ಉದ್ಯಮಿ ಜಯರಾಮ ಶೆಟ್ಟಿ ಮುಂಡಾಡಿಗುತ್ತು ಅವರು ಮಾತನಾಡಿ, ಸರ್ಕಾರದ ಧಾರ್ಮಿಕ ಪರಿಷತ್ತು, ವ್ಯವಸ್ಥಾಪನಾ ಸಮಿತಿಗಳಿರುವ ದೇವಸ್ಥಾನ, ದೈವಸ್ಥಾನಗಳ ವಿಷಯದಲ್ಲಿ ಧರ್ಮಾವಲೋಕನದ ಮೂಲಕ ಧಾರ್ಮಿಕ ಪ್ರಜ್ಞೆಯ ಪುನರುತ್ಥಾನದ ಪ್ರಯತ್ನ ಸುಲಭ-ಸಾಧ್ಯವಲ್ಲದಿದ್ದರೂ, ಹಿಂದೂ ಸಮಾಜದಲ್ಲಿ ಈ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆದಲ್ಲಿ ಮುಂದೊAದು ದಿನ ಹೊಸದೊಂದು `ಅಗತ್ಯದ ಬದಲಾವಣೆ’ ಕಾಣಲು ಸಾಧ್ಯವಿದೆ ಎಂದರು.
ಇAಜಿನಿಯರ್ ಕಿರಣ್ ಉಪಾಧ್ಯಾಯ ಮಾತನಾಡಿ, ಸರ್ಕಾರ ನಿರ್ದೇಶನಗಳೇನೇ ಇದ್ದರೂ, ಧಾರ್ಮಿಕ ವಿಚಾರದಲ್ಲಿ ಸ್ವತಂತ್ರವಾಗಿ `ಧರ್ಮ ಪ್ರಜ್ಞೆ’ ಭಿತ್ತರಿಸಲು ಅವಕಾಶಗಳಿವೆ. ನಮ್ಮ ಸಂಸ್ಕೃತಿ, ದೈವ-ದೇವರ ಆರಾಧನೆಯಲ್ಲಿ ನಂಬಿಕೆ ಉಳಿಯಬೇಕು. ಇದರಿಂದ ಹಿಂದೂ ಸಮಾಜಕ್ಕೆ ಒಳಿತಿದೆ. ಇಂತಹದೊAದು ಪ್ರಯತ್ನದಲ್ಲಿ ಹಿಂದೂ ಸಮಾಜದ ಬಂಟರು, ಬಿಲ್ಲವರು, ಮೊಗವೀರರ ಸಹಿತ ಇತರ ಸಮುದಾಯದವರು, ದೈವ-ದೇವಾರಾಧನೆಯಲ್ಲಿ ತೊಡಗಿಸಿಕೊಂಡಿರುವ ಸಮುದಾಯ, ಅರ್ಚಕರು-ತಂತ್ರಿ ವರ್ಗದ ಸಹಿತ ಸಮಾನ ಮನಸ್ಕರು ಒಗ್ಗೂಡಿ ಕೆಲಸ ಮಾಡಬೇಕು. ಈ ಮೂಲಕ ನಮ್ಮ ಮೂಲ ಪರಂಪರೆಯತ್ತ ಹೋಗಲು ಸಾಧ್ಯವಿದೆ ಎಂದರು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಧಾರ್ಮಿಕ ಮುಖಂಡ ಗಂಗಾಧರ ಶೆಟ್ಟಿ ಬಜ್ಪೆ, ಕಮಲಾಕ್ಷ ಗಂಧಕಾಡು, ವಕೀಲ ಪ್ರಶಾಂತ್ ಮಂಗಳೂರು, ಅವರು ಧರ್ಮಾವಲೋಕನ ಸಭೆ ವಿಷಯದಲ್ಲಿ ಸೂಕ್ತ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಆಯಾ ಸಮುದಾಯದ ಮುಖಂಡರು ಮತ್ತು ಸಂಘ-ಸAಸ್ಥೆಯ ಪ್ರಮುಖರಿಗೆ ಧರ್ಮಾವಲೋಕನ ಸಭೆಯ ಸಂಚಾಲಕತ್ವ ವಹಿಸಿಕೊಡಲಾಯಿತು.
ಐತಪ್ಪ ಆಳ್ವ ಸುಜೀರ್ಗುತ್ತು, ಕಾರಮೊಗರುಗುತ್ತು ಗಡಿಕಾರ ಯತಿರಾಜ ಆಳ್ವ ಗುರುಪುರ, ಗುರಿಕಾರ ಮಾಧವ ಪುತ್ರನ್ ಕುದ್ರೋಳಿ, ಸುರೇಶ್ ರೈ ದೋಣಿಂಜೆಗುತ್ತು, ಚಂದ್ರರಾಜ ಶೆಟ್ಟಿ ಕುಂಜತ್ತಬೈಲು, ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಟ್ರಸ್ಟಿ ಲಕ್ಷö್ಮಣ್ ಅಮೀನ್ ಕೋಡಿಕಲ್, ವಿಹಿಂಪ ಪ್ರಮುಖ ಪ್ರವೀಣ್ ಕುತ್ತಾರು, ಹಿಂದೂ ಯುವ ಸೇವೆ ಗೌರವಾಧ್ಯಕ್ಷ ಭಾಸ್ಕರ್ಚಂದ್ರ, ಪೊಲೀಸ್ ಸಿಬ್ಬಂದಿ ವರುಣ್ ಆಳ್ವ, ಗಣೇಶ್ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು. ಗಂಗಾಧರ ಶೆಟ್ಟಿ ಬಜ್ಪೆ ಅವರು ವಂದಿಸಿದರು.



