ಕನ್ನಡ ಭಾಷೆ ನಮ್ಮ ತಾಯಿ ಭಾಷೆ; ಕವಯತ್ರಿ ಶ್ವೇತಾ
ಬಂಟ್ವಾಳ: ಕನ್ನಡ ಭಾಷೆ ನಮ್ಮ ತಾಯಿ ಭಾಷೆ,ಅದಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ ಎಂಬುದನ್ನು ಅರಿತಿದ್ದೇವೆ.ಅದು ನಮ್ಮ ನಾಡ ಭಾಷೆ.ಅಂತಹ ಸುಂದರ ಹೆಗ್ಗಳಿಕೆಯ ಸಂಸ್ಕೃತಿಭರಿತ ಭಾಷೆಯನ್ನು ಪ್ರೀತಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ಜೊತೆಗೆ ಇತರ ಭಾಷೆಗಳ ಮೇಲೆ ಗೌರವವೂ ಕನ್ನಡಿಗರಿಗಿರಲಿ ಎಂದು ತುಂಬೆ ಬಿ.ಎ.ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ಹಾಗೂ ಯುವ ಕವಯತ್ರಿ ಶ್ವೇತಾ ಹೇಳಿದರು.

ಅವರು ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಮಾರಂಭದಲ್ಲಿ ಧ್ವಜಾರೋಹಣ ಗೈದು ಅಧ್ಯಕ್ಷತೆ ವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಎಸ್.ಭಟ್ ಮಾತನಾಡಿ ಕನ್ನಡ ನಾಡಿಗೆ ವಿದ್ಯಾಭ್ಯಾಸ-ಉದ್ಯೋಗಕ್ಕಾಗಿ ಇತರೆಡೆಗಳಿಂದ ಬರುವ ಪ್ರತಿಯೊಬ್ಬರೂ ಇಲ್ಲಿನ ತಾಯಿ ಭಾಷೆ ಕಲಿತು ಮಾತನಾಡಬೇಕು.ಆಡಳಿತ ವ್ಯವಹಾರಗಳಲ್ಲಿ ಅದನ್ನು ಬಳಸುವಂತಾಗಬೇಕು.ಅದರೊಂದಿಗೆ ಕರುನಾಡ ಮಣ್ಣಿನ ಸಂಸ್ಕೃತಿಯನ್ನು ಮನಸರಿತು ಗೌರವಿಸಬೇಕು ಎಂದು ಹೇಳಿದರು.
ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್,ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ,ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಉಪಸ್ಥಿತರಿದ್ದ ಸಮಾರಂಭದಲ್ಲಿ ಸಹಶಿಕ್ಷಕಿ ರೇಶ್ಮಾ ಶೆಟ್ಟಿ ವಂದಿಸಿ ಭೌತಶಾಸ್ತ್ರ ಉಪನ್ಯಾಸಕಿ ಬೇಬಿ ನಿರೂಪಿಸಿದರು.



